ಪಶ್ಚಿಮ ಬಂಗಾಳದ ಬಿರ್ಭೂಮ್‌ ಜಿಲ್ಲೆಯ ಫುಟ್ಬಾಲ್ ಮೈದಾನದ ಬಳಿ ಕಚ್ಚಾ ಬಾಂಬ್‌ ಪತ್ತೆ

ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಸಜೀವದಹನ ಮಾಡಿದ ಹಿಂಸಾಚಾರದ ತನಿಖೆಗಾಗಿ ಕೇಂದ್ರೀಯ ತನಿಖಾ ದಳವು ಬೊಗ್ಟುಯಿ ಗ್ರಾಮದಲ್ಲಿ ಇರುವ ಸಮಯದಲ್ಲೇ ಕಚ್ಚಾ ಬಾಂಬ್‌ಗಳು  ಪತ್ತೆಯಾಗಿದೆ.

ಪಶ್ಚಿಮ ಬಂಗಾಳದ ಬಿರ್ಭೂಮ್‌ ಜಿಲ್ಲೆಯ ಫುಟ್ಬಾಲ್ ಮೈದಾನದ ಬಳಿ ಕಚ್ಚಾ ಬಾಂಬ್‌ ಪತ್ತೆ
ಕಚ್ಚಾ ಬಾಂಬ್
Updated By: ರಶ್ಮಿ ಕಲ್ಲಕಟ್ಟ

Updated on: Mar 27, 2022 | 4:04 PM

ಪಶ್ಚಿಮ ಬಂಗಾಳದ ಬಿರ್ಭೂಮ್ (Birbhum )ಜಿಲ್ಲೆಯ ಸಿಕಂದರ್ ಗ್ರಾಮದ ಫುಟ್ಬಾಲ್ ಮೈದಾನದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಕಚ್ಚಾ ಬಾಂಬ್‌ಗಳನ್ನು(Crude bombs) ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಈ ಬಾಂಬ್‌ಗಳನ್ನು ಕೇಂದ್ರೀಯ ತನಿಖಾ ಇಲಾಖೆಯ (CID) ಬಾಂಬ್ ಸ್ಕ್ವಾಡ್ ತಂಡವು ನಿಷ್ಕ್ರಿಯಗೊಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಸಜೀವ ದಹನ ಮಾಡಿದ ಹಿಂಸಾಚಾರದ ತನಿಖೆಗಾಗಿ ಕೇಂದ್ರೀಯ ತನಿಖಾ ದಳವು ಬೊಗ್ಟುಯಿ ಗ್ರಾಮದಲ್ಲಿ ಇರುವ ಸಮಯದಲ್ಲೇ ಕಚ್ಚಾ ಬಾಂಬ್‌ಗಳು  ಪತ್ತೆಯಾಗಿದೆ. ಬಿರ್ಭೂಮ್ ಹಿಂಸಾಚಾರದ ನಂತರ, ಪಶ್ಚಿಮ ಬಂಗಾಳ ಪೊಲೀಸರು ರಾಜ್ಯದಾದ್ಯಂತ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ದಾಳಿ ನಡೆಸುತ್ತಿದ್ದಾರೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ನಡೆಸಿದ ಕಾರ್ಯಾಚರಣೆಯಲ್ಲಿ ಜಗದ್ದಲ್, ಬಿಜ್‌ಪುರ ಮತ್ತು ಭಟ್ಪಾರಾ ಪ್ರದೇಶಗಳಿಂದ ಎಂಟು ಸಜೀವ ಬಾಂಬ್‌ಗಳು, ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಸಿಬಿಐ ತಂಡವು ಹಿಂಸಾಚಾರ ನಡೆದ ಸ್ಥಳದಲ್ಲಿ ಬೀಡು ಬಿಟ್ಟಿದೆ. ಸುಟ್ಟು ಕರಕಲಾದ ಅವಶೇಷಗಳ ಮಾದರಿಗಳನ್ನು ತಂಡ ಸಂಗ್ರಹಿಸಿದೆ. ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಕೇಂದ್ರ ತನಿಖಾ ತಂಡಕ್ಕೆ ಪ್ರಕರಣವನ್ನು ಹಸ್ತಾಂತರಿಸಿದೆ. ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯವು (CFSL) ರಾಮ್‌ಪುರಹತ್ ಪಟ್ಟಣದ ಹಿಂಸಾಚಾರ ಪೀಡಿತ ಗ್ರಾಮದಲ್ಲಿ ಮಾದರಿಗಳನ್ನು ಸಂಗ್ರಹಿಸಿದೆ.

ಹಿಂಸಾಚಾರದಲ್ಲಿ ಗಾಯಗೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಮತ್ತು ಇತರ ಮೂವರಲ್ಲಿ ಅವರ ಹೇಳಿಕೆಗಳನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಬೊಗ್ಟುಯಿ ಗ್ರಾಮದಲ್ಲಿ ಸ್ಥಳೀಯ ಜನರೊಂದಿಗೆ ಸಂವಹನ ನಡೆಸುತ್ತೇವೆ. ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ತಮ್ಮ ಪರೀಕ್ಷೆಗಳನ್ನು ಮುಂದುವರಿಸಲಿದ್ದಾರೆ ಎಂದು ಸಿಬಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಶನಿವಾರ ಅಗ್ನಿಶಾಮಕ ಘಟನೆಯ ಬಗ್ಗೆ ಮೊದಲು ಸ್ಪಂದಿಸಿದ ಪೊಲೀಸ್ ಅಧಿಕಾರಿಯೊಬ್ಬರು ಎಫ್‌ಐಆರ್‌ನಲ್ಲಿ, ತೀವ್ರವಾದ ಬೆಂಕಿಯಿಂದ ಅಗ್ನಿಶಾಮಕ ದಳದವರು ಸುಟ್ಟುಹೋದ ಮನೆಗಳಿಗೆ ಪ್ರವೇಶಿಸಲು ಹತ್ತು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಹೇಳಿದರು. ಬೆಂಕಿ ಹಚ್ಚುವುದರ ಜೊತೆಗೆ ಮನೆಗಳನ್ನು ಧ್ವಂಸ ಮಾಡಿರಬಹುದು ಎಂದು ಅಧಿಕಾರಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬಿರ್ಭೂಮ್ ಹಿಂಸಾಚಾರವು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ, ವಿಶೇಷವಾಗಿ ಭಾರತೀಯ ಜನತಾ ಪಕ್ಷದ ನಡುವೆ ಭಾರೀ ರಾಜಕೀಯ ಸಂಘರ್ಷ ಉಂಟುಮಾಡಿದೆ. ಬಿಜೆಪಿ ಬಿರ್ಭೂಮ್ ಸೈಟ್ ಅನ್ನು ನಾಝಿ ಕಾನ್ಸಂಟ್ರೇಶನ್ ಕ್ಯಾಂಪ್‌ಗಳಿಗೆ ಹೋಲಿಸಿದ್ದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಒತ್ತಾಯಿಸಿದೆ.

ಇದನ್ನೂ ಓದಿ: ಕೇರಳ: ಮುಖ್ಯಮಂತ್ರಿ, ಸಾರಿಗೆ ಸಚಿವರ ಭರವಸೆ ಮೇರೆಗೆ ಬಸ್ ಮುಷ್ಕರ ಹಿಂಪಡೆದ ಖಾಸಗಿ ಬಸ್ ನಿರ್ವಾಹಕರು

Published On - 3:09 pm, Sun, 27 March 22