ಕೇರಳ: ಮುಖ್ಯಮಂತ್ರಿ, ಸಾರಿಗೆ ಸಚಿವರ ಭರವಸೆ ಮೇರೆಗೆ ಬಸ್ ಮುಷ್ಕರ ಹಿಂಪಡೆದ ಖಾಸಗಿ ಬಸ್ ನಿರ್ವಾಹಕರು

ಖಾಸಗಿ ಬಸ್ ಉದ್ದಿಮೆ ಎದುರಿಸುತ್ತಿರುವ ಹೋರಾಟಕ್ಕೆ ಮುಖ್ಯಮಂತ್ರಿ ಮನ್ನಣೆ ನೀಡಿ ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಮಾಲೀಕರು ತಿಳಿಸಿದ್ದಾರೆ. ಪ್ರಯಾಣ ದರ ಏರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಖಾಸಗಿ ಬಸ್ ಮುಷ್ಕರ ಶನಿವಾರಕ ಮೂರು ದಿನ ಪೂರೈಸಿದೆ.

ಕೇರಳ: ಮುಖ್ಯಮಂತ್ರಿ, ಸಾರಿಗೆ ಸಚಿವರ ಭರವಸೆ ಮೇರೆಗೆ ಬಸ್ ಮುಷ್ಕರ ಹಿಂಪಡೆದ ಖಾಸಗಿ ಬಸ್ ನಿರ್ವಾಹಕರು
ಪ್ರಾತಿನಿಧಿಕ ಚಿತ್ರ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Mar 27, 2022 | 2:45 PM

ತಿರುವನಂತಪುರಂ: ಕೇರಳದಲ್ಲಿ (Kerala) ಖಾಸಗಿ ಬಸ್ ನಿರ್ವಾಹಕರು ಭಾನುವಾರ ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆದಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಸಚಿವಾಲಯದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಮತ್ತು ಸಾರಿಗೆ ಸಚಿವ ಆಂಟನಿ ರಾಜು ಅವರೊಂದಿಗೆ ಸಭೆ ನಡೆಸಿದ ನಂತರ ಮುಷ್ಕರ ವಾಪಸ್ ಪಡೆದುಕೊಳ್ಳುವ  ನಿರ್ಧಾರ ತೆಗೆದುಕೊಳ್ಳಲಾಗಿದೆ. ಖಾಸಗಿ ಬಸ್ ಉದ್ದಿಮೆ ಎದುರಿಸುತ್ತಿರುವ ಹೋರಾಟಕ್ಕೆ ಮುಖ್ಯಮಂತ್ರಿ ಮನ್ನಣೆ ನೀಡಿ ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಮಾಲೀಕರು ತಿಳಿಸಿದ್ದಾರೆ. ಪ್ರಯಾಣ ದರ ಏರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಖಾಸಗಿ ಬಸ್ ಮುಷ್ಕರ (Indefinite private bus strike) ಶನಿವಾರಕ್ಕೆ ಮೂರು ದಿನ ಪೂರೈಸಿದೆ. ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಒತ್ತಾಯಿಸಿ ಖಾಸಗಿ ಬಸ್ ನಿರ್ವಾಹಕರು ಮಾರ್ಚ್ 24ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಕನಿಷ್ಠ ದರವನ್ನು 12 ರೂ.ಗೆ ಹೆಚ್ಚಿಸಬೇಕು ಮತ್ತು ವಿದ್ಯಾರ್ಥಿಗಳಿಂದ ವಿಧಿಸುವ ಕನಿಷ್ಠ ರಿಯಾಯಿತಿ ದರವನ್ನು 6 ರೂ.ಗೆ ಏರಿಸಬೇಕು ಎಂದು ಖಾಸಗಿ ಬಸ್ ಮಾಲೀಕರು ಒತ್ತಾಯಿಸಿದ್ದಾರೆ. ಇದಲ್ಲದೆ ನಿರ್ವಾಹಕರು ಕಿಲೋಮೀಟರ್ ಶುಲ್ಕವನ್ನು ಈಗಿನ 90 ಪೈಸೆಯಿಂದ 1.10 ರೂ.ಗೆ ಹೆಚ್ಚಿಸುವಂತೆ ಮತ್ತು ಕೊವಿಡ್ ಸಾಂಕ್ರಾಮಿಕ ಅವಧಿಗೆ ರಸ್ತೆ ತೆರಿಗೆಯನ್ನು ಮನ್ನಾ ಮಾಡಲು ಕೋರಿದ್ದರು.

ಟಿಕೆಟ್ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದ್ದು, ಇದು ಖಾಸಗಿ ಬಸ್ ಮಾಲೀಕರಿಗೆ ಗೊತ್ತಿದೆ ಮುಷ್ಕರದ ಅಗತ್ಯವಿಲ್ಲ ಎಂದು ಸಚಿವ ಆಂಟನಿ ರಾಜು ಈ ಹಿಂದೆ ಹೇಳಿದ್ದರು. ಆದರೆ, ಕೇರಳ ರಾಜ್ಯ ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ಅಧ್ಯಕ್ಷ ಸತ್ಯನ್ ಅವರು ಉದ್ದೇಶಿತ ಮುಷ್ಕರದ ಕುರಿತು ಎರಡು ವಾರಗಳ ಹಿಂದೆ ಸರ್ಕಾರಕ್ಕೆ ನೋಟಿಸ್ ನೀಡಲಾಗಿದ್ದು, ಇಲ್ಲಿಯವರೆಗೆ ಯಾರೂ ಈ ಬಗ್ಗೆ ಚರ್ಚೆಯಲ್ಲಿ ತೊಡಗಿಲ್ಲ ಎಂದು ಹೇಳಿದ್ದರು.

ಕೆಎಸ್‌ಆರ್‌ಟಿಸಿ ಹೆಚ್ಚುವರಿ ಸೇವೆ ನೀಡಿಲ್ಲ ಮುಷ್ಕರದಿಂದಾಗಿ ಸುಮಾರು 8,000 ಖಾಸಗಿ ಬಸ್‌ಗಳು ರಸ್ತೆಗಿಳಿದಿದ್ದು, ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲು ಕೆಎಸ್‌ಆರ್‌ಟಿಸಿ ತೆಗೆದುಕೊಂಡ ಕ್ರಮಗಳು ಶನಿವಾರ ಸಾರ್ವಜನಿಕ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ಕಳೆದ ಎರಡು ದಿನಗಳಲ್ಲಿ ನಿಗಮವು ಕೇವಲ 100 ಹೆಚ್ಚುವರಿ ಸೇವೆಗಳನ್ನು ಮಾತ್ರ ನಿರ್ವಹಿಸಿದೆ. ಖಾಸಗಿ ಬಸ್ ಮುಷ್ಕರದಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿಪರೀತ ಜನದಟ್ಟಣೆ ಕಂಡುಬಂದರೂ ನಿಗಮಕ್ಕೆ ನಿಗದಿತ ಆದಾಯದಲ್ಲಿ ಶೇ.75ರಷ್ಟು ಆದಾಯ ಗಳಿಸಲು ಸಾಧ್ಯವಾಗಿಲ್ಲ.

ಲಾಕ್‌ಡೌನ್ ಅವಧಿಯಲ್ಲಿ ಸೇವೆ ಸ್ಥಗಿತಗೊಳಿಸಿದ ಸುಮಾರು 1,200 ಕೆಎಸ್‌ಆರ್‌ಟಿಸಿ ಬಸ್‌ಗಳು ವಿವಿಧ ಜಿಲ್ಲೆಗಳ ಪಾರ್ಕಿಂಗ್ ಮೈದಾನಗಳಲ್ಲಿ ಬಳಕೆಯಾಗದೆ ಬಿದ್ದಿದ್ದರೂ ಹೆಚ್ಚುವರಿ ಸೇವೆಗಳನ್ನು ನಡೆಸಲು ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಮಾರ್ಚ್ 24 ರಂದು ಖಾಸಗಿ ಬಸ್ ಮುಷ್ಕರ ಪ್ರಾರಂಭವಾಯಿತು. ಮಾರ್ಚ್ 23 ರಂದು, ಕೆಎಸ್​​ಆರ್​​ಟಿಸಿ 3,626 ಬಸ್ ಸೇವೆಗಳನ್ನು ನಿರ್ವಹಿಸಿತು. ಆದರೆ ಮಾರ್ಚ್ 24 ರಂದು ಇದು ಕೇವಲ 3,695 ಬಸ್ ಸೇವೆ ಮಾತ್ರ ನಿರ್ವಹಿಸಿದ್ದು ಕೇವಲ 69 ಬಸ್‌ಗಳ ಹೆಚ್ಚಳ ಮಾಡಲಾಗಿದೆ ಎಂದು ಮಲಯಾಳ ಮನೋರಮ ವರದಿ ಮಾಡಿದೆ.

ಇದನ್ನೂ ಓದಿ: ದಿಗ್ವಿಜಯ್ ಸಿಂಗ್​ಗೆ 1 ವರ್ಷ ಜೈಲು ಶಿಕ್ಷೆ ಘೋಷಿಸಿ ಬಳಿಕ ಜಾಮೀನು ನೀಡಿದ ಇಂದೋರ್ ನ್ಯಾಯಾಲಯ; ಏನಿದು ಪ್ರಕರಣ?

Published On - 2:25 pm, Sun, 27 March 22