
ಚೆನ್ನೈ, ನವೆಂಬರ್ 25: ಈಶಾನ್ಯ ಮಾನ್ಸೂನ್ ಹೆಚ್ಚಿದ ಕಾರಣದಿಂದಾಗಿ ಕಳೆದ 24 ಗಂಟೆಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಮತ್ತು ನಾಳೆ ಚೆನ್ನೈಗೆ ಹಳದಿ ಅಲರ್ಟ್ (Yellow Alert) ನೀಡಿದೆ. ಮಲಕ್ಕಾ ಜಲಸಂಧಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವಿದ್ದು, ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಇದು ಚಂಡಮಾರುತವಾಗಿ ಬದಲಾಗಬಹುದು. ಈ ಚಂಡಮಾರುತಕ್ಕೆ ಸೆನ್ಯಾರ್ ಎಂದು ಹೆಸರಿಡಲಾಗಿದೆ. ನವೆಂಬರ್ 27ರವರೆಗೆ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ನವೆಂಬರ್ 28ರಿಂದ 30 ರವರೆಗೆ ಮತ್ತೆ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳ ಮತ್ತು ಮಾಹೆಯಲ್ಲಿ ನವೆಂಬರ್ 26ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಈ ಚಂಡಮಾರುತಕ್ಕೆ ಸೆನ್ಯಾರ್ ಚಂಡಮಾರುತ ಎಂದು ಹೆಸರಿಸಲಾಗಿದೆ. ಯುಎಇ ಈ ಹೆಸರನ್ನು ಇಟ್ಟಿದ್ದು, ಅದರ ಅರ್ಥ ‘ಸಿಂಹ’ ಎಂದಾಗಿದೆ. ನವೆಂಬರ್ 29 ಮತ್ತು 30ರ ನಡುವೆ ಈ ಚಂಡಮಾರುತವು ತಮಿಳುನಾಡಿನ ರಾಜಧಾನಿ ಚೆನ್ನೈನ ಕರಾವಳಿಯ ಹತ್ತಿರ ಚಲಿಸಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್ಎಂಸಿ)ದ ಪ್ರಕಾರ, ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗಬಹುದು. ತಿರುನಲ್ವೇಲಿ ಮತ್ತು ತೆಂಕಸಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: Karnataka Weather Today: ರಾಜ್ಯದ ಹಲವೆಡೆ ಸಾಧಾರಣ ಮಳೆ; ಉತ್ತರ ಒಳನಾಡಿನಲ್ಲಿ ಒಣ ಹವೆಯ ವಾತಾವರಣ
ನವೆಂಬರ್ 27ರಂದು ತೂತುಕುಡಿ, ತಿರುನಲ್ವೇಲಿ, ತಿರುವರೂರ್, ತಂಜಾವೂರು ಮತ್ತು ನಾಗಪಟ್ಟಣಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 28ರಂದು ತಿರುವರೂರು, ತಂಜಾವೂರು ಮತ್ತು ನಾಗಪಟ್ಟಣಂನಲ್ಲಿ ಮಳೆ ಹೆಚ್ಚಾಗಲಿದೆ. ರಾಜ್ಯದ 7 ಉತ್ತರ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 29ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka Weather Today: ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ; ಹವಮಾನ ಇಲಾಖೆ ಮುನ್ಸೂಚನೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನವೆಂಬರ್ 26 ಮತ್ತು 28ರ ನಡುವೆ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ನವೆಂಬರ್ 29ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ನವೆಂಬರ್ 30ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Tue, 25 November 25