Delhi Drama: ಸಿಸೋಡಿಯಾ ಸಿಬಿಐ ವಿಚಾರಣೆ; ದೆಹಲಿಯಲ್ಲಿ ಸೆಕ್ಷನ್ 144; ಎಎಪಿ ಮುಖಂಡರು ವಶಕ್ಕೆ

|

Updated on: Feb 26, 2023 | 3:58 PM

DCM Manish Sisodia Questioned By CBI: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಿಬಿಐ ವಿಚಾರಣೆಗೆ ಹಾಜರಾಗುವ ಮುನ್ನ ಕೆಲವಾರು ಹೈಡ್ರಾಮಾ ಘಟನೆಗಳಿಗೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಯಿತು. ದಕ್ಷಿಣ ದೆಹಲಿಯಲ್ಲಿ ಕರ್ಫ್ಯೂ, ಎಎಪಿ ಬೆಂಬಲಿಗರು ಪೊಲೀಸ್ ವಶಕ್ಕೆ, ಹೀಗೆ ಸರಣಿ ಘಟನೆಗಳು ನಡೆದವು.

Delhi Drama: ಸಿಸೋಡಿಯಾ ಸಿಬಿಐ ವಿಚಾರಣೆ; ದೆಹಲಿಯಲ್ಲಿ ಸೆಕ್ಷನ್ 144; ಎಎಪಿ ಮುಖಂಡರು ವಶಕ್ಕೆ
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಿಬಿಐ ವಿಚಾರಣೆಗೆ
Follow us on

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಹೈಡ್ರಾಮಾ ಮುಂದುವರಿದಿದೆ. ಅಬಕಾರಿ ನೀತಿ ಅವ್ಯವಹಾರ ಆರೋಪದ ಪ್ರಕರಣ ಸಂಬಂಧ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Delhi DCM Manish Sisodia) ಭಾನುವಾರ ಸಿಬಿಐ ಕಚೇರಿಯಲ್ಲಿ ವಿಚಾರಣೆ ಎದುರಿಸಿದರು. ಈ ವೇಳೆ ಆಮ್ ಆದ್ಮಿ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದರು. ದಕ್ಷಿಣ ದೆಹಲಿ ಭಾಗದಲ್ಲಿ ಪೊಲೀಸರು ಕರ್ಫ್ಯೂ (ಸೆಕ್ಷನ್ 144) ಜಾರಿ ಮಾಡಿದರು. ಬಳಿಕ ಪ್ರತಿಭಟನಾನಿರತ ಆಮ್ ಆದ್ಮಿ ನಾಯಕರು ಮತ್ತು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕರೆದೊಯ್ದರು. ಅದೇ ವೇಳೆ ಡಿಸಿಎಂ ಮನೀಶ್ ಸಿಸೋಡಿಯಾ ಮನೆಯ ಹೊರಗೆ ಬಿಗಿಭದ್ರತೆ ಏರ್ಪಡಿಸಲಾಗಿದೆ. ಮತ್ತು ಸಿಬಿಐ ಮುಖ್ಯಕಚೇರಿಯ ಹೊರಗೆ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ.

ಈ ಘಟನೆಗಳಿಗೂ ಮುನ್ನ ಒಂದಷ್ಟು ನಾಟಕೀಯ ವಿದ್ಯಮಾನಗಳು ಜರುಗಿದವು. ಸಿಬಿಐ ಮುಖ್ಯಕಚೇರಿಗೆ ವಿಚಾರಣೆ ಎದುರಿಸಲು ಹೋಗುವ ಮುನ್ನ ಮನೀಶ್ ಸಿಸೋಡಿಯಾ ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ತಮ್ಮ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸೇರಿ ರಾಜಘಾಟ್​ಗೆ ಹೋದರು. ಅಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದ ಅವರು ನಾನು ಜೈಲಿಗೆ ಹೆದರಲ್ಲ. ನಾನು ಜೈಲಿಗೆ ಹೋದರೆ ಪಕ್ಷದ ಕಾರ್ಯಕರ್ತರು ನನ್ನ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಆದರೆ, ಬಿಜೆಪಿಯವರು ಸಿಎಂ ಕೇಜ್ರಿವಾಲ್​ಗೆ ಹೆದರಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಇದು ತಮಗೆ ಹಾಗೂ ತಮ್ಮ ಪಕ್ಷಕ್ಕೆ ಕಠಿಣ ಸಂದರ್ಭವಾಗಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ ಡಿಸಿಎಂ, ತಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ಭಾವೋದ್ವೇಗಕ್ಕೊಳಗಾದವರಂತೆ ಕಂಡರು. ತಮ್ಮ ಜೀವನದ ಏರಿಳಿತದುದ್ದಕ್ಕೂ ಬೆಂಬಲಿಸಿದ ಪತ್ನಿಗೆ ಧನ್ಯವಾದ ಹೇಳಿದರು.

ರಾಜಘಾಟ್​ನಲ್ಲಿ ಆತಿಶಿ ಸೇರಿದಂತೆ ಹಲವು ಎಎಪಿ ನಾಯಕರು ಕೈಯಲ್ಲಿ ಮನೀಶ್ ಸಿಸೋಡಿಯಾರ ಪೋಸ್ಟರ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲ ಎಎಪಿ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಯಿತು.

ಇದನ್ನೂ ಓದಿಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ: ರಾಹುಲ್ ಗಾಂಧಿ

ಅಬಕಾರಿ ಹಗರಣ ಸಂಬಂಧ ಫೆಬ್ರುವರಿ 19ರಂದು ಸಿಬಿಐ ವಿಚಾರಣೆಗೆ ಸಿಸೋಡಿಯಾಗೆ ನೋಟೀಸ್ ನೀಡಲಾಗಿತ್ತು. ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಎರಡೂ ಹುದ್ದೆಯನ್ನು ಹೊಂದಿರುವ ಅವರು ಬಜೆಟ್ ತಯಾರಿಯ ನಿಮಿತ್ತ ವಿಚಾರಣೆ ಮುಂದೂಡುವಂತೆ ಕೇಳಿಕೊಂಡಿದ್ದರು. ಅದರಂತೆ ಮುಂದೂಡಿಕೆ ಆಗಿ, ಈಗ ಹೊಸದಾಗಿ ಸಮನ್ಸ್ ಕೊಡಲಾಗಿತ್ತು.

ಮನೀಶ್ ಸಿಸೋಡಿಯಾ ವಿಚಾರಣೆಗೆ ಸಿಬಿಐ ಬಳಿ ಪ್ರಶ್ನೆಗಳ ಸರಮಾಲೆಯೇ ಸಿದ್ಧವಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸಿಸೋಡಿಯಾ ಬಂಧನವಾಗುವ ಸಾಧ್ಯತೆ ಇದೆ. ಹೀಗಾಗಿ, ಮನೀಶ್ ಸಿಸೋಡಿಯಾ ತಾನು ಜೈಲಿಗೆ ಹೋಗಲು ಹೆದರಲ್ಲ ಎಂದು ಮುಂಚೆಯೇ ಹೇಳಿದಂತಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಸಿಸೋಡಿಯಾಗೆ ನೈತಿಕ ಬೆಂಬಲ ನೀಡಿದ್ದು, ಸಮಾಜ ಮತ್ತು ಜನರಿಗಾಗಿ ಜೈಲಿಗೆ ಹೋಗುವುದು ಅವಮಾನವಲ್ಲ, ಗರ್ವದ ವಿಷಯ ಎಂದು ಹುರಿದುಂಬಿಸಿದ್ದಾರೆ.

ಏನಿದು ಹಗರಣ?

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಎಎಪಿ ಸರ್ಕಾರ 2020-21ರಲ್ಲಿ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಸರ್ಕಾರಿ ಸ್ವಾಮ್ಯದಲ್ಲಿದ್ದ ವೈನ್ ಸ್ಟೋರ್​ಗಳನ್ನು ರದ್ದು ಮಾಡಿ ಮತ್ತೊಮ್ಮೆ ಮುಕ್ತವಾಗಿ ಪರವಾನಿಗೆಗಳನ್ನು ಹಂಚಲಾಯಿತು. ಇದರಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಬಂದು ಕಳೆದ ವರ್ಷ ಹೊಸ ಅಬಕಾರಿ ನೀತಿ ಹಿಂಪಡೆದು ಹಳೆಯ ಅಬಕಾರಿ ನೀತಿಯನ್ನೇ ಮರಳಿ ಜಾರಿ ಮಾಡಲಾಯಿತು.

ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರಬಹುದು ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸಿಬಿಐ ತನಿಖೆಗೆ ವಹಿಸಿದರು.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Sun, 26 February 23