ಸರಿಯಾಗಿ ಕೆಲಸ ಮಾಡದಿದ್ದರೆ ಅಧಿಕಾರ ವಹಿಸಿಕೊಳ್ಳಲು ಕೇಂದ್ರಕ್ಕೆ ಸೂಚಿಸಬೇಕಾಗುತ್ತೆ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

|

Updated on: Apr 27, 2021 | 6:10 PM

ಇದು ರಣಹದ್ದುಗಳಾಗುವ ಸಮಯ ಅಲ್ಲ. ಇದು ಮಾನವೀಯತೆಯ ನಡೆ ಪ್ರದರ್ಶನದ ಸಮಯ ಎಂದು ಹೇಳಿದ ಹೈಕೋರ್ಟ್​, ಆಕ್ಸಿಜನ್ ಮತ್ತು ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.

ಸರಿಯಾಗಿ ಕೆಲಸ ಮಾಡದಿದ್ದರೆ ಅಧಿಕಾರ ವಹಿಸಿಕೊಳ್ಳಲು ಕೇಂದ್ರಕ್ಕೆ ಸೂಚಿಸಬೇಕಾಗುತ್ತೆ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ದೆಹಲಿ ಹೈಕೋರ್ಟ್​
Follow us on

ದೆಹಲಿ: ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಸಲು ವಿಫಲವಾಗಿರುವ ದೆಹಲಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ಮಂಗಳವಾರ (ಏಪ್ರಿಲ್ 27) ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡಿದೆ. ಆಸ್ಪತ್ರೆಗೆ ಆಕ್ಸಿಜನ್ ಪೂರೈಸಬೇಕಾದ ನೋಡೆಲ್ ಅಧಿಕಾರಿ ಪರಿಸ್ಥಿತಿಯ ಎದುರು ತಾನು ಅಸಹಾಯಕ ಎಂದು ಅಳಲು ತೋಡಿಕೊಂಡರು. ಆಕ್ಸಿಜನ್ ಪೂರೈಕೆಯ ಡೀಲರ್ ವಿರುದ್ಧ ಕ್ರಮಕ್ಕೆ ಸೂಚಿಸಿ ಹೈಕೋರ್ಟ್​ ದೆಹಲಿ ಸರ್ಕಾರದ ನಡೆಗಳನ್ನು ಕಟುನುಡಿಗಳಲ್ಲಿ ವಿಮರ್ಶಿಸಿತು.

ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ಬೇಕಾದ ಮೆಡಿಕಲ್ ಆಕ್ಸಿಜನ್ ಮತ್ತು ಇತರ ಜೀವರಕ್ಷಕ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಲು ದೆಹಲಿ ಸರ್ಕಾರ ವಿಫಲವಾಗಿದೆ. ಇದು ರಣಹದ್ದುಗಳಾಗುವ ಸಮಯ ಅಲ್ಲ. ಇದು ಮಾನವೀಯತೆಯ ನಡೆ ಪ್ರದರ್ಶನದ ಸಮಯ ಎಂದು ಹೇಳಿದ ಹೈಕೋರ್ಟ್​, ಆಕ್ಸಿಜನ್ ಮತ್ತು ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.

ಇಂಥ ಕ್ರಮಗಳನ್ನು ಜರುಗಿಸಲು ದೆಹಲಿ ಸರ್ಕಾರಕ್ಕೆ ಅಧಿಕಾರ ಇದೆ. ಆದರೆ ಕಾಳಸಂತೆ ಮಾರಾಟ ಸಮಸ್ಯೆ ಪರಿಹರಿಸಲು ಸರ್ಕಾರ ವಿಫಲವಾಗಿದೆ ಎಂದು ಕೋರ್ಟ್​ ಚಾಟಿ ಬೀಸಿತು.

ದೆಹಲಿಯ ಮಹಾರಾಜ ಅಗ್ರಸೇನ ಆಸ್ಪತ್ರೆಗೆ ಆಮ್ಲಜನಕ ಪೂರೈಸಬೇಕಿದ್ದ ಸೇತ್ ಏರ್ ಕಂಪನಿಯು ತನ್ನ ಬಳಿ 20 ಟನ್ ಆಕ್ಸಿಜನ್ ಇದೆ. ಆದರೆ ಯಾರಿಗೆ ಕೊಡಬೇಕೆಂದು ಸರ್ಕಾರ ತಿಳಿಸುತ್ತಿಲ್ಲ ಎಂದು ದೆಹಲಿ ಹೈಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿತ್ತು. ದೆಹಲಿ ಸರ್ಕಾರವು ಕಂಪನಿಯ ಹೇಳಿಕೆಯನ್ನು ಅಲ್ಲಗಳೆದಿತ್ತು. ಇಬ್ಬರ ವಿರುದ್ಧವೂ ಆಕ್ರೋಶಗೊಂಡ ನ್ಯಾಯಮೂರ್ತಿ ವಿಪಿನ್ ಸಾಂಘ್ವಿ ಮತ್ತು ನ್ಯಾಯಮೂರ್ತಿ ರೇಖಾ ಪಲ್ಲಿ ಇದ್ದ ನ್ಯಾಯಪೀಠವು, ‘ನೀವೇನು ಹುಡುಗಾಟ ಆಡ್ತಿದ್ದೀರಾ? ಇದೇ ಮಿಠಾಯಿ ಹಂಚಿದಂತೆ ಅಂದ್ಕೊಂಡಿದ್ದೀರಾ? ಆಗಿದ್ದು ಆಗಿ ಹೋಯ್ತು. ಇನ್ನಾದರೂ ಸರಿಯಾಗಿ ಕೆಲಸ ಮಾಡ್ತೀರೋ ಅಥವಾ ಕೇಂದ್ರಕ್ಕೆ ಆಡಳಿತ ವಹಿಸಿಕೊಳ್ಳಲು ಆದೇಶ ಮಾಡೋಣ್ವೋ’ ಎಂದು ಕಟುವಾಗಿ ನುಡಿಯಿತು.

‘ಸೇತ್ ಏರ್ ಕಂಪನಿಯು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡದೆ ಕಾಳಸಂತೆಯಲ್ಲಿ ಮಾರುತ್ತಿರುವ ಬಗ್ಗೆ ಅನುಮಾನಗಳಿವೆ. ಈ ಕಂಪನಿಯನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಂಡು, ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಗೆ ಗಮನ ಕೊಡಲಿ. ಕೇವಲ ದೊಡ್ಡ ಆಸ್ಪತ್ರೆಗಳು ಮಾತ್ರವಲ್ಲ, ಸಣ್ಣ ಆಸ್ಪತ್ರೆಗಳಿಗೂ ಸಕಾಲಕ್ಕೆ ಆಕ್ಸಿಜನ್ ಪೂರೈಕೆಯಾಗಬೇಕು. ಈ ಬಗ್ಗೆ ಸರ್ಕಾರದ ಪೋರ್ಟಲ್​ನಲ್ಲಿ ಮಾಹಿತಿ ಅಪ್​ಡೇಟ್ ಮಾಡಬೇಕು. ನಿಮಗಿರುವ ಅಧಿಕಾರವನ್ನು ಈಗಲೂ ಚಲಾಯಿಸದಿದ್ದರೆ ಹೇಗೆ’ ಎಂದು ನ್ಯಾಯಪೀಠ ಪ್ರಶ್ನಿಸಿತು.

(Delhi High Court Thrashes Kejriwal govt on Oxygen Supply Problem Threatens to call Central govt to take over)

ಇದನ್ನೂ ಓದಿ: ಬೆಂಗಳೂರಿನಲ್ಲಿ ರೆಮ್​ಡಿಸಿವಿರ್ ಮತ್ತು ಆಕ್ಸಿಜನ್ ಕೊರತೆ: ಹೈಕೋರ್ಟ್​ಗೆ ‘ಫನಾ’ ಮಾಹಿತಿ

ಇದನ್ನೂ ಓದಿ: ದೇಶಕ್ಕೆ ಕಷ್ಟ ಬಂದಾಗ ಸುಮ್ಮನೇ ಕೈಕಟ್ಟಿಕೊಂಡು ಕೂರಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

Published On - 6:05 pm, Tue, 27 April 21