Farmers Protest ನಾಳೆ ದೆಹಲಿಯ ಜಂತರ್​​ ಮಂತರ್​​ನಲ್ಲಿ ರೈತರ ಪ್ರತಿಭಟನೆ, ಬಿಗಿ ಬಂದೋಬಸ್ತ್; ರಾಕೇಶ್​​ ಟಿಕಾಯತ್​​ ಪೊಲೀಸ್​​ ವಶಕ್ಕೆ

ಸರ್ಕಾರದ ಆದೇಶದ ಮೇರೆಗೆ ಕೆಲಸ ಮಾಡುತ್ತಿರುವ ದೆಹಲಿ ಪೊಲೀಸರಿಗೆ ರೈತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಬಂಧನ ಹೊಸ ಕ್ರಾಂತಿಯನ್ನು ತರಲಿದೆ. ಕೊನೆಯ ಉಸಿರು ಇರುವವರೆಗೂ ಈ ಹೋರಾಟ ಮುಂದುವರಿಯಲಿದೆ...

Farmers Protest ನಾಳೆ ದೆಹಲಿಯ ಜಂತರ್​​ ಮಂತರ್​​ನಲ್ಲಿ ರೈತರ  ಪ್ರತಿಭಟನೆ, ಬಿಗಿ ಬಂದೋಬಸ್ತ್; ರಾಕೇಶ್​​ ಟಿಕಾಯತ್​​ ಪೊಲೀಸ್​​ ವಶಕ್ಕೆ
ದೆಹಲಿಯಲ್ಲಿ ಬಿಗಿ ಬಂದೋಬಸ್ತ್
Edited By: ರಶ್ಮಿ ಕಲ್ಲಕಟ್ಟ

Updated on: Aug 21, 2022 | 7:38 PM

ದೆಹಲಿ: ದೆಹಲಿ- ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನರಿಸಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ನಾಳೆ ಜಂತರ್ ಮಂತರ್​​ನಲ್ಲಿ (Jantar Mantar) ರೈತರ ಪ್ರತಿಭಟನೆ ನಡೆಯಲಿದ್ದು, ಇಂದು ಹಲವು ರೈತರು ದೆಹಲಿಗೆ ಬಂದಿದ್ದು, ಇನ್ನೂ ಬರುತ್ತಲೇ ಇದ್ದಾರೆ. ಪ್ರತಿಭಟನೆಗೆ ಮುಂಚಿತವಾಗಿ ಭಾರತೀಯ ಕಿಸಾನ್ ಯೂನಿಯನ್ (BKU) ವಕ್ತಾರ ರಾಕೇಶ್ ಟಿಕಾಯತ್ (Rakesh Tikait) ಅವರನ್ನು ಮಧು ವಿಹಾರ್ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಟಿಕಾಯತ್, ದೆಹಲಿ ಪೊಲೀಸರಿಗೆ ರೈತರ ದನಿಯನ್ನು ದಮನಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸೋಮವಾರ ಜಂತರ್ ಮಂತರ್​​ನಲ್ಲಿ ನಡೆಯಲಿರುವ ‘ಮಹಾಪಂಚಾಯತ್’ ಅನ್ನು ರೈತರ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಇತರ ಗುಂಪುಗಳು ಆಯೋಜಿಸಿವೆ. ಪ್ರತಿಭಟನಾಕಾರರು ಘಾಜಿಯಾಬಾದ್‌ನ ಘಾಜಿಪುರ ಗಡಿಯನ್ನು ಒಳಗೊಂಡಿರುವ ರಾಜ್ಯದ ಹೊರಭಾಗವನ್ನು ಹಾದು ಹೋಗಲಿದ್ದಾರೆ. ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಟಿಕ್ರಿ ಗಡಿಯ ಹೊರ ಜಿಲ್ಲೆ, ಪ್ರಮುಖ ಗಡಿಗಳು, ರೈಲ್ವೆ ಹಳಿಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸ್ಥಳೀಯ ಪೊಲೀಸರು ಮತ್ತು ಸೇನಾ ಪಡೆಗಳನ್ನು ಸಮರ್ಪಕವಾಗಿ ನಿಯೋಜಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.


ಬಂಧನ ಹೊಸ ಕ್ರಾಂತಿಗೆ ಕಾರಣವಾಗುತ್ತದೆ: ಟಿಕಾಯತ್

ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಪ್ರವೇಶಿಸುತ್ತಿದ್ದಾಗ ನನ್ನನ್ನು ಬಂಧಿಸಲಾಯಿತು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಭಾನುವಾರ ಟ್ವೀಟ್ ಮಾಡಿದ್ದಾರೆ. ನನ್ನನ್ನು ಬಂಧಿಸಲಾಗಿದೆ ಎಂದು ಟ್ವೀಟ್ ಮಾಡಿದ ಟಿಕಾಯತ್, ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಇಚ್ಛೆಯಂತೆ ಕೆಲಸ ಮಾಡುತ್ತಿದ್ದಾರೆ. ರೈತರು ಹಿಂದೆ ಸರಿಯಲ್ಲ.

ಸರ್ಕಾರದ ಆದೇಶದ ಮೇರೆಗೆ ಕೆಲಸ ಮಾಡುತ್ತಿರುವ ದೆಹಲಿ ಪೊಲೀಸರು ರೈತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಬಂಧನ ಹೊಸ ಕ್ರಾಂತಿಯನ್ನು ತರಲಿದೆ. ಕೊನೆಯ ಉಸಿರು ಇರುವವರೆಗೂ ಈ ಹೋರಾಟ ಮುಂದುವರಿಯಲಿದೆ. ನಾವು ನಿಲ್ಲುವುದಿಲ್ಲ, ನಾವು ದಣಿದಿಲ್ಲ, ನಾವು ತಲೆಬಾಗುವುದಿಲ್ಲ ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.


ದೇಶದಲ್ಲಿ ನಿರುದ್ಯೋಗ ಸಮಸ್ಯೆ ವಿರುದ್ಧ ರೈತರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರರು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶಿಶ್ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ದೆಹಲಿಯಲ್ಲಿ ಈ ಪ್ರತಿಭಟನೆ ನಡೆಯತ್ತಿದೆ. ಕಳೆದ ವರ್ಷ ಲಖಿಂಪುರ ಪ್ರದೇಶದಲ್ಲಿ ನಡೆದ ರೈತರ ಹತ್ಯೆ ಪ್ರಕರಣದಲ್ಲಿ ಸಚಿವರ ಪುತ್ರ ಪ್ರಮುಖ ಆರೋಪಿಯಾಗಿದ್ದಾನೆ.

ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರಾಯ್ ಅವರು ಟಿಕಾಯತ್ ಬಂಧನವನ್ನು ಖಂಡಿಸಿ, ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ರೈತ ನಾಯಕ ರಾಕೇಶ್ ಟಿಕಾಯತ್ ಅವರು ಚಳವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಆದರೆ ಗಡಿಯಲ್ಲಿಯೇ ಪೊಲೀಸರು ಅವರನ್ನು ತಡೆದರು. ಇದು ಅತ್ಯಂತ ಹೇಯ ಕೃತ್ಯ ಎಂದು ರಾಯ್ ಹಿಂದಿಯಲ್ಲಿ ಬರೆದಿದ್ದಾರೆ.

Published On - 7:36 pm, Sun, 21 August 22

Web contact

TV9 Kannada

Read More
Follow Us