ಚಳಿಗೇ ಚಳಿ ಬಿಡಿಸ್ತಿದ್ದಾರೆ Delhi Chaloಗೆ ಬಂದ ಪಂಜಾಬ್ ರೈತರು

ರಸ್ತೆ ಬದಿಯೇ ಊಟ, ನಿದ್ದೆ ಇವರ ನಿತ್ಯದ ವಾಸ್ತವವಾಗಿದೆ. ಟ್ರ್ಯಾಕ್ಟರ್, ಟ್ರಾಲಿ ಅಥವಾ ಚಿಕ್ಕಚಿಕ್ಕ ಟೆಂಟ್​ಗಳಲ್ಲಿ ಸತತ 12 ದಿನಗಳಿಂದ ಪಂಜಾಬ್ ರೈತರು ಆಶ್ರಯ ವಾಸ ಮಾಡುತ್ತಿದ್ದಾರೆ.

ಚಳಿಗೇ ಚಳಿ ಬಿಡಿಸ್ತಿದ್ದಾರೆ Delhi Chaloಗೆ ಬಂದ ಪಂಜಾಬ್ ರೈತರು
ಟೆಂಟ್​ಗಳಲ್ಲಿ ವಾಸ್ತವ್ಯ ಹೂಡಿರುವ ರೈತರು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 07, 2020 | 2:21 PM

ದೆಹಲಿ: ಕೊರೆಯು ಚಳಿಗೆ ಪಂಜಾಬ್ ರೈತರ ಪ್ರತಿಭಟನೆ ಕಿಚ್ಚು ಕಡಿಮೆ ಮಾಡಲು ಆಗಿಲ್ಲ. ಕೇಂದ್ರ ಸರ್ಕಾರ ಮತ್ತು ರೈತ ಒಕ್ಕೂಟಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ರೈತರು ದೆಹಲಿಯ ರಸ್ತೆ ಬದಿಗಳಲ್ಲೇ ದಿನದೂಡುತ್ತಿದ್ದಾರೆ.

ಕೆಲ ರೈತರು ನಿರಂಕಾರಿ ಮೈದಾನದಲ್ಲಿದ್ದರೆ, ಇನ್ನು ಕೆಲವರು ಸಿಂಗು, ಗಾಜಿಯಾಬಾದ್ ಗಡಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ರಸ್ತೆ ಬದಿಯೇ ಊಟ, ನಿದ್ದೆ ಇವರ ನಿತ್ಯದ ವಾಸ್ತವವಾಗಿದೆ. ಟ್ರ್ಯಾಕ್ಟರ್, ಟ್ರಾಲಿ ಅಥವಾ ಚಿಕ್ಕಚಿಕ್ಕ ಟೆಂಟ್​ಗಳಲ್ಲಿ ಸತತ 12 ದಿನಗಳಿಂದ ಪಂಜಾಬ್ ರೈತರು ಆಶ್ರಯ ವಾಸ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಹೆಚ್ಚಿದ ಚಳಿ, ಮಂಜು
ಇಂದು (ಡಿ.7) ಮುಂಜಾನೆಯ ಮಂಜಿಗೆ ದೆಹಲಿ ಅಕ್ಷರಶಃ ತತ್ತರಿಸಿತ್ತು. ಮುಬಾರಕ್ ಚೌಕ್, ಧೌಲಾ ಕೌನ್ ಮತ್ತು ಸರ್ದಾರ್ ಪಟೇಲ್ ಮಾರ್ಗಗಳಲ್ಲಿ ವಾಹನಗಳು ಸಂಚರಿಸುವುದು ಕಷ್ಟವಾಗಿತ್ತು.

ನಿನ್ನೆಯ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ಇತ್ತು. ಮಂಜು ಕವಿದ ಚಳಿಯ ವಾತಾವರಣದಲ್ಲಿ ಪಂಜಾಬ್ ರೈತರ ಪ್ರತಿಭಟನೆಯ ಕಿಚ್ಚು ಎಳ್ಳಷ್ಟೂ ಕಡಿಮೆಯಾಗಿಲ್ಲ. ನೂತನ ಕೃಷಿ ಕಾಯ್ದೆ ಹಿಂತೆಗೆದುಕೊಳ್ಳದೇ ಪ್ರತಿಭಟನೆ ನಿಲ್ಲಿಸುವುದಿಲ್ಲ. ಪ್ರತಿಭಟನೆಯನ್ನು ತಿಂಗಳುಗಳ ಕಾಲ ಮುಂದುವರೆಸಲೂ ಸಿದ್ಧ ಎಂದು ರೈತ ಒಕ್ಕೂಟಗಳು ಈಗಾಗಲೇ ಘೋಷಿಸಿವೆ.

ದೆಹಲಿ ಚಳಿಗೆ ಮುದುಡದ ರೈತರ ಆತ್ಮಸ್ಥೈರ್ಯ ದೇಶದ ಜನರ ಬೆಂಬಲ ಗಳಿಸಿದೆ. ಚಳಿಯಿಂದ ರಕ್ಷಿಸಲು ಬೆಚ್ಚಗಿನ ಉಡುಪುಗಳನ್ನು ಖರೀದಿಸಲು ಗಾಯಕ, ನಟ ದಿಲ್ಜಿತ್ ದೊಸಾಂಜ್ 1 ಕೋಟಿ ದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ

ರಸ್ತೆ ಬದಿಯ ಟೆಂಟ್​ನಲ್ಲಿ ಚಹಾ ತಯಾರಿಸುತ್ತಿರುವ ಪಂಜಾಬ್ ರೈತ

ಇದನ್ನೂ ಓದಿ: ದೆಹಲಿ ಚಲೋ ಹಿನ್ನೆಲೆ.. ಚಳಿಗೆ ದೆಹಲಿ ಗಢಗಢ, ಆದ್ರೆ ಅವಡುಗಚ್ಚಿ ಅಚಲವಾಗಿ ಕುಳಿತ ಪಂಜಾಬ್ ರೈತರು!

Photos.. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಅನ್ನದಾತರ ಕಿಚ್ಚು

 

Published On - 2:20 pm, Mon, 7 December 20