Video: ಮದ್ಯದ ಅಮಲಿನಲ್ಲಿ ವಿದ್ಯುತ್ ಕಂಬ ಹತ್ತಿ ಹೈ ವೋಲ್ಟೇಜ್ ತಂತಿ ಮೇಲೆ ಮಲಗಿದ ವ್ಯಕ್ತಿ, ಆಮೇಲೇನಾಯ್ತು ನೋಡಿ

ಮಹಾರಾಜ್‌ಗಂಜ್‌ನಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 11,000 ವೋಲ್ಟ್ ವಿದ್ಯುತ್ ಕಂಬ ಏರಿ ತಂತಿಗಳ ಮೇಲೆ ಮಲಗಿದ್ದ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭೀಕರ ದುರಂತ ತಪ್ಪಿದೆ. ದೀನ್ ದಯಾಳ್ ಎಂಬಾತನನ್ನು ಗ್ರಾಮಸ್ಥರು, ಪೊಲೀಸರು ಹಾಗೂ ವಿದ್ಯುತ್ ಇಲಾಖೆಯ ಸಿಬ್ಬಂದಿ ಹಲವಾರು ಗಂಟೆಗಳ ಪ್ರಯತ್ನದ ನಂತರ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈ ಪವಾಡಸದೃಶ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ.

Video: ಮದ್ಯದ ಅಮಲಿನಲ್ಲಿ ವಿದ್ಯುತ್ ಕಂಬ ಹತ್ತಿ ಹೈ ವೋಲ್ಟೇಜ್ ತಂತಿ ಮೇಲೆ ಮಲಗಿದ ವ್ಯಕ್ತಿ, ಆಮೇಲೇನಾಯ್ತು ನೋಡಿ
ವಿದ್ಯುತ್ ಕಂಬ

Updated on: Jun 25, 2026 | 8:22 AM

ಮುಖ್ಯಾಂಶಗಳು

  • ಮದ್ಯದ ಅಮಲಿನಲ್ಲಿ ವಿದ್ಯುತ್ ತಂತಿ ಮೇಲೆ ಹೋಗಿ ಮಲಗಿದ ದೀನ್ ದಯಾಳ್
  • ಅದೃಷ್ಟವಶಾತ್ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ದೊಡ್ಡ ತಪ್ಪಿದ ದುರಂತ
  • ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿ ಕುಟುಂಬದ ಸದಸ್ಯರ ಜತೆ ಕಳುಹಿಸಿದ ಪೊಲೀಸರು

ಮಹಾರಾಜ್‌ಗಂಜ್, ಜೂನ್ 25: ಕುಡಿದ ಮತ್ತಿನಲ್ಲಿ ಮನುಷ್ಯರು ಏನೇನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದಿರುವ ಈ ಘಟನೆಯೇ ಸಾಕ್ಷಿ. ಇಲ್ಲಿನ ಪರ್ಸಾ ಖುರ್ದ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಅತಿಯಾಗಿ ಮದ್ಯ(Alcohol) ಸೇವಿಸಿ, ಬರೋಬ್ಬರಿ 11,000 ವೋಲ್ಟ್ ಹೈವೋಲ್ಟೇಜ್ ವಿದ್ಯುತ್ ತಂತಿಗಳ ಮೇಲೆಯೇ ಮಲಗಿ ಸಾಹಸ ಪ್ರದರ್ಶಿಸಿದ್ದಾನೆ. ಇದನ್ನು ಕಂಡ ಇಡೀ ಗ್ರಾಮಸ್ಥರು ಯಾವುದೇ ಕ್ಷಣದಲ್ಲಾದರೂ ಆತ ಸುಟ್ಟು ಬೂದಿಯಾಗಬಹುದು ಎಂಬ ಭೀತಿಯಲ್ಲಿ ನಡುಗಿದ್ದಾರೆ. ವಿದ್ಯುತ್ ಕಂಬ ಹತ್ತಿದ ಈ ವಿಲಕ್ಷಣ ವ್ಯಕ್ತಿಯನ್ನು ದೀನ್ ದಯಾಳ್ ಎಂದು ಗುರುತಿಸಲಾಗಿದೆ.

ಅದೃಷ್ಟವಶಾತ್ ತಪ್ಪಿದ ಭೀಕರ ದುರಂತ

ಸ್ಥಳೀಯರ ಪ್ರಕಾರ, ದೀನ್ ದಯಾಳ್ ಕಂಬದ ಮೇಲಿದ್ದ ಹೈವೋಲ್ಟೇಜ್ ತಂತಿಗಳ ಮೇಲೆ ಅಡ್ಡಲಾಗಿ ಚಾಚಿಕೊಂಡಿದ್ದರೂ ಆತನಿಗೆ ಏನೂ ಆಗದಿರಲು ಒಂದು ದೊಡ್ಡ ಅದೃಷ್ಟವೇ ಕಾರಣವಾಗಿತ್ತು. ಆತ ಕಂಬ ಏರುವ ಕೆಲವೇ ನಿಮಿಷಗಳ ಮುಂಚೆಯಷ್ಟೇ ಆ ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಒಂದು ವೇಳೆ ತಂತಿಗಳಲ್ಲಿ ವಿದ್ಯುತ್ ಹರಿಯುತ್ತಿದ್ದರೆ ಆತ ಸ್ಥಳದಲ್ಲೇ ಸುಟ್ಟು ಭಸ್ಮವಾಗುತ್ತಿದ್ದ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಕಂಬದ ಕೆಳಗೆ ನೂರಾರು ಭಕ್ತರು ಹಾಗೂ ನಿವಾಸಿಗಳ ದೊಡ್ಡ ಜನಸಮೂಹವೇ ಜಮಾಯಿಸಿ ಆತಂಕದಿಂದ ಮೇಲಕ್ಕೆ ನೋಡುತ್ತಿತ್ತು.

ಮತ್ತಷ್ಟು ಓದಿ: ಡ್ರಂಕ್​​ ಆ್ಯಂಡ್​​ ಡ್ರೈವ್​​ ಮಾಡಿದವನಿಗೆ ಕೋರ್ಟ್​​ ಕೊಟ್ಟ ಶಿಕ್ಷೆ ಎಂತಹದ್ದು ನೋಡಿ

 

ಪೊಲೀಸರು ಮತ್ತು ವಿದ್ಯುತ್ ಇಲಾಖೆಯ ಜಂಟಿ ರಕ್ಷಣೆ

ದೀನ್ ದಯಾಳ್ ಕೆಳಗೆ ಬರಲು ನಿರಾಕರಿಸುತ್ತಿದ್ದಂತೆ, ಭಿತೌಲಿ ಪೊಲೀಸರು ತಕ್ಷಣವೇ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ಮುಗಿಯುವವರೆಗೂ ಆ ಲೈನ್‌ಗೆ ವಿದ್ಯುತ್ ಸರಬರಾಜು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅದರ ನಂತರ ಹಲವಾರು ಗಂಟೆಗಳ ಕಾಲ ಪೊಲೀಸರು, ಅಧಿಕಾರಿಗಳು ಮತ್ತು ಗ್ರಾಮಸ್ಥರೆಲ್ಲರೂ ಸೇರಿ ದೀನ್ ದಯಾಳ್ ಅವರ ಬಳಿ ಕೆಳಗೆ ಇಳಿಯುವಂತೆ ಸತತವಾಗಿ ಮನವಿ ಮಾಡಿದರು. ಕೊನೆಗೂ ಅವರ ಪ್ರಯತ್ನಗಳು ಯಶಸ್ವಿಯಾಗಿದ್ದು, ಆತ ಸುರಕ್ಷಿತವಾಗಿ ಕಂಬದಿಂದ ಕೆಳಗಿಳಿದಿದ್ದಾನೆ. ಆಗ ಇಡೀ ಜನಸಮೂಹ ನಿಟ್ಟುಸಿರು ಬಿಟ್ಟಿದೆ.

ವಿಡಿಯೋ

ಕುಟುಂಬಸ್ಥರಿಗೆ ಒಪ್ಪಿಸಿದ ಪೊಲೀಸರು

ಭಿತೌಲಿ ಪೊಲೀಸ್ ಠಾಣೆಯ ಅಧಿಕಾರಿ ಸತ್ಯೇಂದ್ರ ಕುಮಾರ್ ರೈ ಮಾತನಾಡಿ, ವ್ಯಕ್ತಿ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದ. ನಾವು ವಿದ್ಯುತ್ ಇಲಾಖೆಯೊಂದಿಗೆ ತಕ್ಷಣ ಸಮನ್ವಯ ಸಾಧಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ನಂತರ ಕುಟುಂಬದ ಸದಸ್ಯರ ಜತೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಅದೃಷ್ಟವಶಾತ್ ಈ ಇಡೀ ಹೈಡ್ರಾಮಾದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us