ಅಕ್ರಮ ಹಣ ವರ್ಗಾವಣೆ; ಬೆಂಗಳೂರು ಮೂಲದ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ಕಚೇರಿಗಳ ಮೇಲೆ ಇಡಿ ದಾಳಿ

ಬೆಂಗಳೂರು ಮೂಲದ ವಿಶ್ವದ ಅತಿ ದೊಡ್ಡ ಚಿನ್ನದ ರಿಫೈನರಿ ಸಂಸ್ಥೆಯಾದ 'ರಾಜೇಶ್ ಎಕ್ಸ್‌ಪೋರ್ಟ್ಸ್' ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. 'ರಾಜೇಶ್ ಎಕ್ಸ್‌ಪೋರ್ಟ್ಸ್' ದೇಶದ ಪ್ರಮುಖ ಚಿನ್ನ ಹಾಗೂ ಆಭರಣ ರಫ್ತು ಕಂಪನಿಯಾಗಿದೆ. ಭಾರಿ ಆರ್ಥಿಕ ಅಕ್ರಮಗಳ ಆರೋಪದ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಬೆಂಗಳೂರು ಮತ್ತು ಮುಂಬೈನಲ್ಲಿರುವ ಕಂಪನಿಯ 9ಕ್ಕೂ ಹೆಚ್ಚು ಕಚೇರಿ ಹಾಗೂ ನಿವಾಸಗಳ ಮೇಲೆ ಏಕಕಾಲದಲ್ಲಿ ಭಾರಿ ದಾಳಿ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಯಡಿ ಈ ಶೋಧ ಕಾರ್ಯವನ್ನು ಕೈಗೊಳ್ಳಲಾಗಿದೆ.

ಅಕ್ರಮ ಹಣ ವರ್ಗಾವಣೆ; ಬೆಂಗಳೂರು ಮೂಲದ ರಾಜೇಶ್ ಎಕ್ಸ್‌ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ
ED
Image Credit source: TV9

Updated on: Jun 23, 2026 | 9:04 PM

ಬೆಂಗಳೂರು, ಜೂನ್ 23: ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ನೀಡಿರುವ ಆದೇಶದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿರುವ ಜಗತ್ತಿನ ಅತಿ ದೊಡ್ಡ ಚಿನ್ನದ ರಿಫೈನರಿ ಸಂಸ್ಥೆಯಾದ ‘ರಾಜೇಶ್ ಎಕ್ಸ್‌ಪೋರ್ಟ್ಸ್’ (Rajesh Exports) ಕಂಪನಿಯ ಪ್ರಧಾನ ಕಚೇರಿ ಮೇಲೆ ಭಾರಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಮುಂಬೈನಲ್ಲಿರುವ ಕಚೇರಿಯ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ರಾಜೇಶ್ ಎಕ್ಸ್​ಪೋರ್ಟ್ಸ್​ ಕಂಪನಿಯು ತನ್ನ ಆರ್ಥಿಕ ವರದಿಗಳಲ್ಲಿ ಭಾರಿ ಪ್ರಮಾಣದ ತಪ್ಪು ಮಾಹಿತಿ ಹಾಗೂ ಆದಾಯ ವಂಚನೆ ಎಸಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (FEMA) ಈ ದಾಳಿ ನಡೆದಿದೆ.

ದಾಳಿಗೆ ಪ್ರಮುಖ ಕಾರಣ:

ಇತ್ತೀಚೆಗಷ್ಟೇ ಸೆಬಿ ನೀಡಿದ್ದ ಮಧ್ಯಂತರ ಆದೇಶದಲ್ಲಿ ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯು ಕಳೆದ ಕೆಲವು ವರ್ಷಗಳಲ್ಲಿ ತನ್ನ ಆದಾಯದ ಲೆಕ್ಕಾಚಾರದಲ್ಲಿ ಬರೋಬ್ಬರಿ 15.15 ಲಕ್ಷ ಕೋಟಿ ರೂ. ಮೊತ್ತದ ತಪ್ಪು ಮಾಹಿತಿಯನ್ನು ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದೆ ಎಂದು ಗಂಭೀರ ಆರೋಪ ಮಾಡಿತ್ತು. ಸ್ವಿಟ್ಜರ್‌ಲ್ಯಾಂಡ್ ಮೂಲದ ತನ್ನದೇ ಆದ ಅಂಗಸಂಸ್ಥೆಯಾದ ‘ವ್ಯಾಲ್ಕಂಬಿ’ (Valcambi SA) ಮೂಲಕ ಸೂಕ್ತ ದಾಖಲೆಗಳಿಲ್ಲದೆಯೇ ಭಾರಿ ಆದಾಯ ಬಂದಿರುವುದಾಗಿ ಕಂಪನಿ ತೋರಿಸಿಕೊಂಡಿದೆ ಎಂದು ಸೆಬಿ ಪತ್ತೆಹಚ್ಚಿತ್ತು. ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಬೆಂಗಳೂರಿನ 5 ಕಂಪನಿಗಳಿಗೆ ಇಡಿ ಶಾಕ್, 6 ಕೋಟಿ ರೂ ಜಪ್ತಿ

ಹಣದ ಅಕ್ರಮ ವರ್ಗಾವಣೆ:

ಬೇನಾಮಿ ಷೇರು ವಹಿವಾಟುಗಳ ಮೂಲಕ 20 ಮಿಲಿಯನ್ ಯುಎಸ್ ಡಾಲರ್ (ಸುಮಾರು 165 ಕೋಟಿಗೂ ಹೆಚ್ಚು ರೂ.) ಗೂ ಅಧಿಕ ಹಣವನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿರುವುದು ಹಾಗೂ ಯುಎಇ ಮೂಲದ ಸಂಸ್ಥೆಗಳೊಂದಿಗೆ ನಡೆಸಿರುವ 3,000 ಕೋಟಿ ರೂ.ಗಳ ವ್ಯವಹಾರಗಳು ಅನುಮಾನಾಸ್ಪದವಾಗಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.


ರಾಜೇಶ್ ಎಕ್ಸ್​ಪೋರ್ಟ್ಸ್ ಕಂಪನಿಯ ಖಾತೆ ಪುಸ್ತಕಗಳಲ್ಲಿ ತೋರಿಸಲಾಗಿರುವ ಒಟ್ಟು ಚಿನ್ನದ ಮೌಲ್ಯಕ್ಕಿಂತ, ವಾಸ್ತವದಲ್ಲಿ ಶೇ. 40ರಷ್ಟು ಕಡಿಮೆ ಚಿನ್ನದ ದಾಸ್ತಾನು ಇರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಈ ಹಗರಣದ ತನಿಖೆಯ ಭಾಗವಾಗಿ ಕಂಪನಿಯ ಬಿಲಿಯನೇರ್ ಚೇರ್ಮನ್ ರಾಜೇಶ್ ಮೆಹ್ತಾ ಅವರು ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ಸೆಬಿ ಈಗಾಗಲೇ ನಿಷೇಧ ಹೇರಿದೆ.

ಇದನ್ನೂ ಓದಿ: ಬೆಂಗಳೂರಿನ ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ: ನಗದು, ಚಿನ್ನಾಭರಣ ಸೇರಿದಂತೆ 18 ಕೋಟಿ ರೂ ಫ್ರೀಜ್

ಕಂಪನಿಯ ಸ್ಪಷ್ಟನೆ:

ವಿಶ್ವದ ಅತಿ ದೊಡ್ಡ ಚಿನ್ನದ ರಿಫೈನರಿ ಸಂಸ್ಥೆಗಳಲ್ಲಿ ಒಂದಾದ ರಾಜೇಶ್ ಎಕ್ಸ್‌ಪೋರ್ಟ್ಸ್ ಮೇಲಿನ ಈ ಇಡಿ ದಾಳಿಯು ಭಾರತೀಯ ಕಾರ್ಪೊರೇಟ್ ಮತ್ತು ಆಭರಣ ಉದ್ಯಮ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದರ ನಡುವೆ, “ನಮ್ಮ ಮತ್ತು ಸೆಬಿ ನಡುವಿನ ಸಂವಹನದ ಸಮಸ್ಯೆಯಿಂದ ಈ ಗೊಂದಲ ಸೃಷ್ಟಿಯಾಗಿದೆ, ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ಕಂಪನಿ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us