ಬಿಜೆಪಿ ಕೈಯಲ್ಲಿ ಚುನಾವಣಾ ಆಯೋಗ; ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷಗಳ ವಾಗ್ದಾಳಿ

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಂಡಿಯಾ ಬಣದ ಆರ್‌ಜೆಡಿ, ಸಿಪಿಐ, ಸಮಾಜವಾದಿ ಪಕ್ಷ, ಡಿಎಂಕೆ, ಟಿಎಂಸಿ ಮತ್ತು ಇತರ ಪಕ್ಷಗಳ ನಾಯಕರು ಚುನಾವಣಾ ಆಯೋಗ ಮತ್ತು ಅದರ ಕಾರ್ಯನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯ ಚುನಾವಣಾ ಅಧಿಕಾರಿಯ ಸುದ್ದಿಗೋಷ್ಠಿಯ ಬೆನ್ನಲ್ಲೇ ವಿರೋಧ ಪಕ್ಷಗಳು ಒಂದಾಗಿ ಸುದ್ದಿಗೋಷ್ಠಿ ನಡೆಸಿವೆ.

ಬಿಜೆಪಿ ಕೈಯಲ್ಲಿ ಚುನಾವಣಾ ಆಯೋಗ; ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷಗಳ ವಾಗ್ದಾಳಿ
India Press Conference

Updated on: Aug 18, 2025 | 7:42 PM

ನವದೆಹಲಿ, ಆಗಸ್ಟ್ 18: ಮತ ಕಳ್ಳತನದ ಆರೋಪಗಳು ಮತ್ತು ಬಿಹಾರ ಎಸ್‌ಐಆರ್ ವಿವಾದದ ಕುರಿತು ವಿರೋಧ ಪಕ್ಷಗಳ ಇಂಡಿಯಾ (INDIA) ಬಣವು ಚುನಾವಣಾ ಆಯೋಗವನ್ನು ಮತ್ತೊಮ್ಮೆ ಟೀಕಿಸಿದೆ. ಇಂದು (ಸೋಮವಾರ) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್‌ಜೆಡಿ, ಸಿಪಿಐ, ಸಮಾಜವಾದಿ ಪಕ್ಷ, ಡಿಎಂಕೆ, ಟಿಎಂಸಿ ಮತ್ತು ಇತರ ಪಕ್ಷಗಳ ನಾಯಕರು ಮತ್ತೊಮ್ಮೆ ಚುನಾವಣಾ ಆಯೋಗ (Election Commission) ಮತ್ತು ಅದರ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಚುನಾವಣಾ ಆಯುಕ್ತರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಪಟ್ಟಿ ಅಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ. ವಿರೋಧ ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಸಿಪಿಐಎಂ ನಾಯಕ ಜಾನ್ ಬ್ರಿಟ್ಟಾಸ್ ಚುನಾವಣಾ ಆಯೋಗವು ಪಕ್ಷಪಾತಿಯಾಗಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಚುನಾವಣಾ ಆಯೋಗಕ್ಕೆ ಧನ್ಯವಾದ: ರಾಹುಲ್ ವ್ಯಂಗ್ಯ

ರಾಜಕೀಯ ಪಕ್ಷಗಳು ಎತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಉತ್ತರಿಸಲಿಲ್ಲ ಮತ್ತು ಅವರು ತಮ್ಮ ಜವಾಬ್ದಾರಿಯಿಂದ ಓಡಿಹೋಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ. “ಮತದಾನದ ಹಕ್ಕು ಸಾಮಾನ್ಯ ನಾಗರಿಕರಿಗೆ ಸಂವಿಧಾನವು ನೀಡಿದ ಪ್ರಮುಖ ಹಕ್ಕು. ಪ್ರಜಾಪ್ರಭುತ್ವವು ಅದರ ಮೇಲೆ ಅವಲಂಬಿತವಾಗಿದೆ. ಚುನಾವಣಾ ಆಯೋಗವು ಅದನ್ನು ರಕ್ಷಿಸಲು ಇರುವ ಸಂಸ್ಥೆಯಾಗಿದೆ. ವಿರೋಧ ಪಕ್ಷಗಳು ಕೇಳಿದ ಮಾನ್ಯ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಬೇಕಾಗಿತ್ತು ಎಂದು ಗೊಗೊಯ್ ಹೇಳಿದ್ದಾರೆ.


ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಕೂಡ ಚುನಾವಣಾ ಆಯೋಗವು ಕರ್ತವ್ಯ ಲೋಪ ಎಸಗಿದೆ ಎಂದು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿ ನಾಯಕಿ ಮಹುವಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಘೋಷಿಸಿದ್ದ ನಕಲಿ ಎಪಿಕ್ ಮತದಾರರ ಕಾರ್ಡ್‌ಗಳ ವಿಷಯವು ಇನ್ನೂ ಬಗೆಹರಿಯದೆ ಉಳಿದಿದೆ ಎಂದು ಹೇಳಿದರು.


ಇದನ್ನೂ ಓದಿ: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್​​ಗೆ ಪ್ರಧಾನಿ ಮೋದಿ ಅಭಿನಂದನೆ


ಎಸ್‌ಪಿ ನಾಯಕ ರಾಮಗೋಪಾಲ್ ಯಾದವ್ ಕೂಡ ಹೇಳಿಕೆ ನೀಡಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ದೂರಿನೊಂದಿಗೆ ಅಫಿಡವಿಟ್ ನೀಡುವಂತೆ ಚುನಾವಣಾ ಆಯೋಗ ಕೇಳುತ್ತಿದ್ದರೆ, ಎಸ್‌ಪಿ 2022ರಲ್ಲಿ ಸುಮಾರು 18,000 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ದೂರುಗಳೊಂದಿಗೆ ಅಫಿಡವಿಟ್‌ಗಳನ್ನು ಸಲ್ಲಿಸಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:41 pm, Mon, 18 August 25