Fact Check | ಸ್ಟ್ಯಾಂಡ್​ಅಪ್ ಕಾಮಿಡಿಯನ್ ಮುನಾವರ್​ಗೆ ಥಳಿತ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಲ್ಲಿ ಮುನಾವರ್ ಫರೂಖಿಯನ್ನು 2021 ಜನವರಿ 2ರಂದು ಇಂದೋರ್ ನಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮುನಾವರ್​ಗೆ ಪೊಲೀಸರು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ಇಲ್ಲಿದೆ.

Fact Check | ಸ್ಟ್ಯಾಂಡ್​ಅಪ್ ಕಾಮಿಡಿಯನ್ ಮುನಾವರ್​ಗೆ ಥಳಿತ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ Edited By:

Updated on: Jan 06, 2021 | 8:50 PM

ಹೊಸ ವರ್ಷಾಚರಣೆಗೆ ಇಂದೋರ್ ಕೆಫೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಟ್ಯಾಂಡ್​ಅಪ್ ಕಾಮಿಡಿಯನ್ ಮುನಾವರ್ ಫರೂಖಿ ಹಿಂದೂ ದೇವರು ಮತ್ತು ಅಮಿತ್‌ ಶಾ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪದ ಹಿನ್ನಲೆಯಲ್ಲಿ ಮುನಾವರ್​ನ​ನ್ನು ಪೊಲೀಸರು ಬಂಧಿಸಿದ್ದರು.

ಇದರ ಬೆನ್ನಲ್ಲೇ ಪೊಲೀಸರು ಮತ್ತು ವಕೀಲರು ಸೇರಿ ಮುನಾವರ್​ಗೆ ಥಳಿಸುತ್ತಿದ್ದಾರೆ ಎಂಬ ಶೀರ್ಷಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ವಿಡಿಯೊದಲ್ಲಿ ಥಳಿತಕ್ಕೊಳಗಾಗಿರುವ ವ್ಯಕ್ತಿ ಮುನಾವರ್ ಅಲ್ಲ, ಆತನ ಗೆಳೆಯ ಸದಾಕತ್ ಖಾನ್ ಎಂದು ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ವರದಿ ಮಾಡಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಲ್ಲಿ ಮುನಾವರ್ ಫರೂಖಿಯನ್ನು ಕಳೆದ ಜ.2ರಂದು ಇಂದೋರ್​ನಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮುನಾವರ್​ಗೆ ಪೊಲೀಸರು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಇದನ್ನೂ ಓದಿ: ಹಿಂದೂ ದೇವರು ಮತ್ತು ಅಮಿತ್ ಶಾ ಬಗ್ಗೆ ಹಾಸ್ಯ ಮಾಡಿದ ಸ್ಟ್ಯಾಂಡ್​ಅಪ್ ಕಲಾವಿದ ಮುನಾವರ್ ಫರೂಖಿ ಬಂಧನ

ಫ್ಯಾಕ್ಟ್ ಚೆಕ್
ಬಿಳಿ ಶರ್ಟ್ ಧರಿಸಿದ ವ್ಯಕ್ತಿಯ ಮೇಲೆ ಪೊಲೀಸರು ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ಈ ವಿಡಿಯೊವನ್ನು ಕೂಲಂಕಷವಾಗಿ ನೋಡಿದರೆ ಆ ವ್ಯಕ್ತಿ ಫರೂಖಿ ಅಲ್ಲ ಎಂಬುದು ಗೊತ್ತಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ Munawar Faruqui beaten ಎಂಬ ಕೀವರ್ಡ್ ಸರ್ಚ್ ಮಾಡಿದಾಗ 2021 ಜನವರಿ 2ರಂದು ಹುಸೇನ್ ಹೈದರಿ ಅವರು ಮಾಡಿದ ಟ್ವೀಟ್ ಸಿಕ್ಕಿದೆ. ಫರೂಖಿ ಅವರ ಜತೆಗೆ ಬಂಧಿತನಾಗಿರುವ ವ್ಯಕ್ತಿಯನ್ನು ಪೊಲೀಸರು ಕರೆದೊಯ್ದಾಗ ಪೊಲೀಸರ ಮುಂದೆಯೇ ಆತನ ಮೇಲೆ ಹಲ್ಲೆ ನಡೆದಿರುವುದು ಎಂದು ಹೈದರಿ ಬರೆದಿದ್ದಾರೆ. ಆನಂತರದ ಟ್ವೀಟ್​ನಲ್ಲಿ ವಿಡಿಯೊದಲ್ಲಿ ಥಳಿತಕ್ಕೊಳಗಾದ ವ್ಯಕ್ತಿಯ ಹೆಸಕು ಸದಾಕತ್ ಖಾನ್. ಈತ ಮುನಾವರ್ ನ ಸ್ನೇಹಿತ. ಮುಂಬೈಯ ನಿರ್ಮಾಣ ಕಂಪನಿಯೊಂದರಲ್ಲಿ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಮುನಾವರ್ ನ್ನು ಭೇಟಿ ಮಾಡಲು ಹೋದ ಈತನನ್ನೂ ಬಂಧಿಸಲಾಗಿದೆ ಎಂದಿದ್ದಾರೆ ಹೈದರಿ.

Munawar Faruqui’s friend beaten ಎಂಬ ಕೀವರ್ಡ್ ಸರ್ಚ್ ಮಾಡಿದಾಗ ಈ ಘಟನೆಗೆ ಸಂಬಂಧಿಸಿದ ಸುದ್ದಿಗಳು ಸಿಕ್ಕಿವೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿ ಪ್ರಕಾರ ಫರೂಖಿ ಮೇಲೆ ಹಲ್ಲೆ ನಡೆದಿರುವುದನ್ನು ಪೊಲೀಸರು ನಿರಾಕರಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಆರೋಪಿಯ ಗೆಳೆಯ ಎಂದು ಪೊಲೀಸರು ಹೇಳಿರುವುದು ವರದಿಯಲ್ಲಿದೆ. ಎನ್​ಡಿಟಿವಿ ಖಬರ್ ವರದಿ ಪ್ರಕಾರ ಮುನಾವರ್ ಫರೂಖಿ ಎಂದು ತಪ್ಪಾಗಿ ಗ್ರಹಿಸಿದ ವ್ಯಕ್ತಿಯೊಬ್ಬರು ಮುನಾವರ್ ಗೆಳೆಯ ಸದಾಕತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದೆ. ರಿಪಬ್ಲಿಕ್ ಭಾರತ್​ನಲ್ಲಿ ಜನವರಿ 4ರಂದು ಪ್ರಕಟವಾದ ಸುದ್ದಿ ಪ್ರಕಾರ ಜಿಲ್ಲಾ ನ್ಯಾಯಾಲಯದ ಹೊರಗೆ ವಕೀಲರು ಫರೂಖಿ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದೆ.

Fact Check | ರೈತರ ಪ್ರತಿಭಟನಾ ಸ್ಥಳದಲ್ಲಿ ಇದ್ದದ್ದು ಜೀಪ್, ₹1.5 ಕೋಟಿ ಮೌಲ್ಯದ ಬೆಂಜ್ ಕಾರು ಅಲ್ಲ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us