ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನ, 6 ವರ್ಷದ ಮಗನನ್ನು ಕೊಂದು ಶವವ ನದಿಗೆಸೆದ ತಂದೆ

ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ತಂದೆಯೊಬ್ಬರು ತಮ್ಮ 6 ವರ್ಷದ ಮಗನನ್ನು ಕೊಲೆ ಮಾಡಿದ್ದಾರೆ. ಮಗು ತನ್ನ ಹೋಲಿಕೆ ಇಲ್ಲವೆಂಬ ಡಿಎನ್‌ಎ ಅನುಮಾನದಿಂದ, ಮಲ್ಲಿಕಾರ್ಜುನ ಆರೇಕರಿ ಎಂಬಾತ ಮಗನನ್ನು ಕೃಷ್ಣಾ ನದಿಗೆ ಎಸೆದಿದ್ದಾನೆ. ವಿಜಯಪುರದಿಂದ ಮಗುವನ್ನು ಕರೆದೊಯ್ದು ಈ ಕ್ರೂರ ಕೃತ್ಯ ಎಸಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಸಮಾಜದಲ್ಲಿ ಆಘಾತ ಮೂಡಿಸಿದೆ.

ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನ, 6 ವರ್ಷದ ಮಗನನ್ನು ಕೊಂದು ಶವವ ನದಿಗೆಸೆದ ತಂದೆ
ಆರೋಪಿ
Image Credit source: India Today

Updated on: Apr 14, 2026 | 8:49 AM

ಪುಣೆ, ಏಪ್ರಿಲ್ 14: ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನದಲ್ಲಿ ತನ್ನ ಆರು ವರ್ಷದ ಮಗನನ್ನು ತಂದೆ ಕೊಲೆ(Murder) ಮಾಡಿ ಕೃಷ್ಣಾ ನದಿಗೆ ಎಸೆದಿರುವ ಘಟನೆ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ನಡೆದಿದೆ. ಮಗ ತನ್ನ ಹೋಲಿಕೆ ಇಲ್ಲ ಎಂದು ಅನುಮಾನ ಪಟ್ಟ ತಂದೆ ಡಿಎನ್​ಎ ಪರೀಕ್ಷೆ ಮಾಡಿಸುವ ಬದಲು ಮಗನನ್ನೇ ಕೊಲೆ ಮಾಡಿ ನದಿಗೆ ಎಸೆದಿದ್ದಾನೆ.

ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಮತ್ತು ಭಾಗ್ಯಶ್ರೀ ದಂಪತಿಯ ಆರು ವರ್ಷದ ಮಗ ಸಿದ್ಧಾರ್ಥ್. ಸುಂದರವಾಗಿದ್ದ ಆ ಮಗು ತನ್ನ ತಂದೆಯನ್ನೇ ಹೋಲುತ್ತಿಲ್ಲ ಎಂದು ಕೆಲವು ಪರಿಚಯಸ್ಥರು ಹೇಳಿದ್ದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನನ ತಲೆಯಲ್ಲಿ ವಿಷ ಬಿತ್ತಿತ್ತು. ಕಳೆದ ಒಂದೂವರೆ ವರ್ಷಗಳಿಂದ ಇದೇ ವಿಷಯಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಈ ಸಂಶಯ ಕೊಲೆಯಲ್ಲಿ ಅಂತ್ಯವಾಯಿತು.

ಶಾಲೆಗೆಂದು ಕರೆದೊಯ್ದು ನದಿಗೆ ಎಸೆದ ಕಟುಕ
ಮಾರ್ಚ್ 16ರಂದು ಮಗನನ್ನು ಶಾಲಾ ಪ್ರವೇಶಕ್ಕಾಗಿ (School Admission) ಕರೆದುಕೊಂಡು ಹೋಗುವುದಾಗಿ ಹೆಂಡತಿಗೆ ಸುಳ್ಳು ಹೇಳಿದ ಮಲ್ಲಿಕಾರ್ಜುನ, ಮಗನಿಗೆ ಹೊಸ ಬಟ್ಟೆಗಳನ್ನು ತೊಡಿಸಿ ವಿಜಯಪುರದಿಂದ ಮಹಾರಾಷ್ಟ್ರದ ಕರಾಡ್‌ಗೆ ಕರೆದೊಯ್ದಿದ್ದಾನೆ. ಕರಾಡ್ ತಾಲೂಕಿನ ವಡೋಲಿ ಭಿಕೇಶ್ವರ ಬಳಿಯ ಕೃಷ್ಣಾ ನದಿಯ ದಡಕ್ಕೆ ಮಗನನ್ನು ಕರೆದೊಯ್ದ ಆತ, ಕಿಂಚಿತ್ತೂ ದಯೆಯಿಲ್ಲದೆ ಮಗನನ್ನು ತುಂಬಿ ಹರಿಯುತ್ತಿದ್ದ ನದಿಗೆ ಎಸೆದಿದ್ದಾನೆ. ಮಗು ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ನಂತರ, ಏನೂ ಗೊತ್ತಿಲ್ಲದವನಂತೆ ಮನೆಗೆ ಮರಳಿದ್ದಾನೆ.

ಮಾರ್ಚ್ 18 ರಂದು ಕರಾಡ್ ಪೊಲೀಸರಿಗೆ ನದಿಯ ದಡದಲ್ಲಿ ಮಗುವಿನ ಗುರುತು ಪತ್ತೆಯಾಗದ ಶವ ಸಿಕ್ಕಿತ್ತು. ಇತ್ತ ಮಲ್ಲಿಕಾರ್ಜುನ ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದೇನೆ ಎಂದು ಹೆಂಡತಿಯನ್ನು ನಂಬಿಸಿದ್ದ. ಆದರೆ ಏಪ್ರಿಲ್ 1 ರಂದು ಮಗ ಸಿದ್ಧಾರ್ಥ್‌ನ ಹುಟ್ಟುಹಬ್ಬದ ದಿನ ಪತಿಯನ್ನು ಪದೇ ಪದೇ ಒತ್ತಾಯಿಸಿದಾಗ ಆತ ನೀಡಿದ ಅಸಂಬದ್ಧ ಉತ್ತರಗಳು ಅನುಮಾನ ಹುಟ್ಟಿಸಿದವು. ಕೂಡಲೇ ಆಕೆ ಪೊಲೀಸರಿಗೆ ನಾಪತ್ತೆ ದೂರು ನೀಡಿದರು.

ಮತ್ತಷ್ಟು ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

ತನಿಖೆಯಲ್ಲಿ ಸತ್ಯ ಒಪ್ಪಿಕೊಂಡ ಆರೋಪಿ
ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ, ಮಲ್ಲಿಕಾರ್ಜುನನ ಮೊಬೈಲ್ ಲೊಕೇಶನ್ ಕರಾಡ್ ಬಳಿ ಇರುವುದು ಪತ್ತೆಯಾಯಿತು. ಪೊಲೀಸರ ತೀವ್ರ ವಿಚಾರಣೆಯ ಎದುರು ನಿಲ್ಲಲಾಗದ ಪಾಪಿ ತಂದೆ, ತನ್ನ ಸಂಶಯದ ಕಾರಣಕ್ಕಾಗಿ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದು ಅತ್ಯಂತ ಕ್ರೂರ ಮತ್ತು ಪೂರ್ವಯೋಜಿತ ಕೃತ್ಯ, ಮಗುವನ್ನು ತನ್ನನ್ನು ಹೋಲುತ್ತಿಲ್ಲ ಎಂಬ ಕಾರಣಕ್ಕಾಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ, ಎಂದು ವಿಜಯಪುರ ಗ್ರಾಮೀಣ ಡಿವೈಎಸ್‌ಪಿ ಟಿ.ಎಸ್. ಸುಲ್ಪಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ. ಸಮಾಜವೇ ತಲೆತಗ್ಗಿಸುವಂತಹ ಈ ಕೃತ್ಯದಿಂದಾಗಿ ನಾಗಠಾಣೆ ಗ್ರಾಮದಲ್ಲಿ ಮೌನ ಆವರಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:49 am, Tue, 14 April 26

Follow Us