ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರನ ತಂದೆಯಿಂದ ಪುಲ್ವಾಮಾದಲ್ಲಿ ರಾಷ್ಟ್ರ ಧ್ವಜಾರೋಹಣ

ಬುರ್ಹಾನ್​ ತನ್ನ 15ನೇ ವಯಸ್ಸಿನಲ್ಲಿಯೇ ಮನೆಬಿಟ್ಟಿದ್ದ. 2010ರಲ್ಲಿ ಮನೆಯನ್ನು ತೊರೆದು ಹೋಗಿ ಹಿಜ್ಬುಲ್ ಮುಜಾಹಿದ್ದೀನ್​ ಸಂಘಟನೆ ಸೇರಿಕೊಂಡಿದ್ದ. ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಸುಮಾರು 5 ತಿಂಗಳ ಕಾಲ ಅವನ ಅನುಯಾಯಿಗಳು ಮುಷ್ಕರ ನಡೆಸಿದ್ದವು.

ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರನ ತಂದೆಯಿಂದ ಪುಲ್ವಾಮಾದಲ್ಲಿ ರಾಷ್ಟ್ರ ಧ್ವಜಾರೋಹಣ
ಮುಜಾಫರ್ ವಾನಿಯಿಂದ ತ್ರಿವರ್ಣ ಧ್ವಜಾರೋಹಣ (ಎಡ)-ಬುರ್ಹಾನ್​ ವಾನಿ (ಬಲ)
Edited By:

Updated on: Aug 15, 2021 | 1:09 PM

ದೆಹಲಿ: ಹಿಜ್ಬುಲ್​ ಮುಜಾಹಿದ್ದೀನ್ (Hizbul Mujahideen)​ ಸಂಘಟನೆಯ ಕಮಾಂಡರ್​ ಆಗಿದ್ದ ಬುರ್ಹಾನ್​​ ವಾನಿ(Burhan Wani)ಯ ತಂದೆ ಮುಜಾಫರ್​ ವಾನಿ ಇಂದು 75ನೇ ಸ್ವಾತಂತ್ರ್ಯೋತ್ಸವ (Independence Day 2021)ದ ಹಿನ್ನೆಲೆ ಪುಲ್ವಾಮಾದ ಟ್ರಾಲ್​ನಲ್ಲಿ ತ್ರಿವರ್ಣ ಧ್ವಜ (Tricolour Flag) ಹಾರಿಸಿದ್ದಾರೆ. ಈ ವಿಡಿಯೋ, ಫೋಟೋಗಳು ವೈರಲ್​ ಆಗಿದ್ದು ಅಚ್ಚರಿಗೆ ಕಾರಣವಾಗಿದೆ. ಅಂದಹಾಗೆ ಈ ಬುರ್ಹಾನ್​ ವಾನಿ 2016ರಲ್ಲೇ ಹತ್ಯೆಗೀಡಾಗಿದ್ದಾನೆ. ಮುಜಾಫರ್​ ವಾನಿ ಒಂದು ಸರ್ಕಾರಿ ಮಾಧ್ಯಮಿಕ ಶಾಲೆಯ ಪ್ರಿನ್ಸಿಪಾಲ್​ ಆಗಿದ್ದು, ಇಂದು ಶಿಷ್ಟಾಚಾರದಂತೆ ಧ್ವಜಾರೋಹಣ ಮಾಡಿದ್ದಾರೆ.

ಈ ಬಾರಿ ಭಾರತ ಆಜಾದಿ ಕಾ ಅಮೃತ ಮಹೋತ್ಸವ (75ನೇ ಸ್ವಾತಂತ್ರ್ಯೋತ್ಸವ)ವನ್ನು ಆಚರಿಸುತ್ತಿದೆ. ತನ್ನಿಮಿತ್ತ ಜಮ್ಮು-ಕಾಶ್ಮೀರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು ಎಂದು ಸ್ಥಳೀಯ ಆಡಳಿತ ಆದೇಶಿಸಿದೆ. ಆದರೆ ಹೀಗೆ ತ್ರಿವರ್ಣ ಧ್ವಜ ಹಾರಿಸಲು ವಿರೋಧಿಸಿ, ಮುಜಾಫರ್​ ವಾನಿ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಯೊಂದು ಶನಿವಾರ ಹರಡಿತ್ತು. ಆದರೆ ನಂತರ ವಾನಿ ಸ್ಪಷ್ಟನೆ ನೀಡಿ, ತಾನು ರಾಜೀನಾಮೆ ನೀಡಿಲ್ಲ ಎಂದಿದ್ದರು. ಇದೀಗ ಅವರು ರಾಷ್ಟ್ರಧ್ವಜ ಹಾರಿಸಿ, ಸ್ವಾತಂತ್ರ್ಯ ದಿನ ಆಚರಣೆ ಮಾಡಿದ್ದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.

ಮುಜಾಫರ್​ ವಾನಿ ಮಗ ಬುರ್ಹಾನ್​ ವಾನಿ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ. ತನ್ನ ಸೋಷಿಯಲ್ ಮೀಡಿಯಾ ಅಕೌಂಟ್​ಗಳ ಮೂಲಕ ಕಾಶ್ಮೀರಿ ಯುವಕರನ್ನು ಉಗ್ರಸಂಘಟನೆಗೆ ಸೆಳೆಯುವ ಪ್ರಯತ್ನವನ್ನು ಸದಾ ಮಾಡುತ್ತಿದ್ದ. 2016ರಲ್ಲಿ ಈತನ ವಿರುದ್ಧ ಕಾರ್ಯಾಚರಣೆ ಮಾಡಿ ಹತ್ಯೆ ಮಾಡಲಾಗಿತ್ತು. ಬುರ್ಹಾನ್​ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್​ ಐಪಿಎಸ್​ ಅಧಿಕಾರಿ ಅಬ್ದುಲ್​ ಜಬ್ಬರ್​​ಗೆ, ಕಳೆದ ವರ್ಷ ಗಣರಾಜ್ಯೋತ್ಸವದಂದು ಪೊಲೀಸ್​ ಮೆಡಲ್​ ಕೊಟ್ಟು ಪುರಸ್ಕರಿಸಲಾಗಿತ್ತು.

ಬುರ್ಹಾನ್​ ತನ್ನ 15ನೇ ವಯಸ್ಸಿನಲ್ಲಿಯೇ ಮನೆಬಿಟ್ಟಿದ್ದ. 2010ರಲ್ಲಿ ಮನೆಯನ್ನು ತೊರೆದು ಹೋಗಿ ಹಿಜ್ಬುಲ್ ಮುಜಾಹಿದ್ದೀನ್​ ಸಂಘಟನೆ ಸೇರಿಕೊಂಡಿದ್ದ. ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಸುಮಾರು 5 ತಿಂಗಳ ಕಾಲ ಅವನ ಅನುಯಾಯಿಗಳು ಮುಷ್ಕರ ನಡೆಸಿದ್ದವು. ಆಗಲೂ ಘರ್ಷಣೆ ನಡೆದು ನೂರು ಮಂದಿ ಸಾವನ್ನಪ್ಪಿದ್ದರು. ಅಂಥ ದೊಡ್ಡ ಉಗ್ರನ ತಂದೆ ಇಂದು ರಾಷ್ಟ್ರಧ್ವಜ ಹಾರಿಸಿದ್ದು ಪ್ರಶಂಸೆಗೆ ಕಾರಣವಾಗಿದೆ.

ಇದನ್ನೂ ಓದಿ: Independence Day: ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ಭಾರತದ ಒಲಿಂಪಿಕ್ ವೀರರು

Afghanistan Crisis: ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ತಾಲೀಬಾನ್; ಅಫ್ಘಾನಿಸ್ತಾನದಲ್ಲಿನ ಪ್ರಮುಖ ಬೆಳವಣಿಗೆಗಳು ಏನೇನು?

Published On - 1:08 pm, Sun, 15 August 21