ಕರ್ನಾಟಕದ ಮಾಜಿ ಡಿಜಿಪಿ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ

ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್​ ಗುರುವಾರ ದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಕರ್ನಾಟಕದ ಮಾಜಿ ಡಿಜಿಪಿ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ
ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ್ ಸೂದ್‌

Updated on: May 25, 2023 | 8:23 PM

ದೆಹಲಿ: ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್ (PRAVEEN SOOD)​ ಗುರುವಾರ ದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಎರಡು ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿರುತ್ತಾರೆಂದು ಮೂಲಗಳು ತಿಳಿಸಿವೆ. ಸಿಬಿಐ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ನಿರ್ದೇಶಕ ಸುಬೋಧ್​ ಕುಮಾರ್​ ಜೈಸ್ವಾಲ್​​ ಅವರು ಪ್ರವೀಣ್ ಸೂದ್ ಅವರಿಗೆ ಕೇಂದ್ರೀಯ ತನಿಖಾ ಸಂಸ್ಥೆಯ ಉಸ್ತುವಾರಿಯನ್ನು ಹಸ್ತಾಂತರಿಸಿದರು. ಪ್ರವೀಣ್ ಸೂದ್​ ಕರ್ನಾಟಕ ಕೇಡರ್​ನ 1986ನೇ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಕರ್ನಾಟಕ ಡಿಜಿ ಮತ್ತು ಐಜಿಪಿ ಆಗಿದ್ದರು.

ಸುಮಾರು 37 ವರ್ಷಗಳ ಸುದೀರ್ಘ ಅಧಿಕಾರಾವಧಿಯಲ್ಲಿ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಮೈಸೂರು ಎಸ್ಪಿಯಾಗಿ ವೃತ್ತಿ ಆರಂಭಿಸಿದ ಇವರು, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಜೊತೆಗೆ ಬೆಂಗಳೂರು ನಗರದಲ್ಲಿ ಉಪ ಪೊಲೀಸ್​ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತ ಮತ್ತು ಮೈಸೂರು ನಗರ ಪೊಲೀಸ್​ ಕಮಿಷನರ್​ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಮಾರಿಷಸ್ ಸರ್ಕಾರದ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆಗೆ ಹೋಗುವೆ, ಹೋಗದೆ ಇರುವುದಕ್ಕೆ ಅದೇನು ಬಿಜೆಪಿ, ಆರೆಸ್ಸೆಸ್ ಕಚೇರಿಯೇ?: ಹೆಚ್.ಡಿ.ದೇವೇಗೌಡ

ಪ್ರವೀಣ್ ಸೂದ್ ಪರಿಚಯ

ಮೂಲತಃ ಪ್ರವೀಣ್ ಸೂದ್ ಅವರು ಹಿಮಾಚಲ ಪ್ರದೇಶದವರು. ದೆಹಲಿಯ ಐಐಟಿಯಿಂದ ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿ.ಟೆಕ್​ ಪದವಿ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಐಐಎಂ ಮತ್ತು ನ್ಯೂಯಾರ್ಕ್​​ನ ಸಿರಾಕ್ಯೂಸ್ ವಿಶ್ವವಿದ್ಯಾಲಯದ ಮ್ಯಾಕ್ಸ್ ವೆಲ್ ಸ್ಕೂಲ್ ಆಫ್ ಗವರ್ನೆನ್ಸ್​ನಲ್ಲಿ ಸಾರ್ವಜನಿಕ ನೀತಿ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಇದು ದೇಶದ ವಿಷಯ, ವಿರೋಧವಲ್ಲ: ಶರದ್ ಪವಾರ್​​ನ್ನು ಭೇಟಿ ಮಾಡಿದ ಅರವಿಂದ ಕೇಜ್ರಿವಾಲ್

ಪ್ರಶಸ್ತಿಗಳು

ಪ್ರವೀಣ್ ಸೂದ್ ಅವರಿಗೆ 1996ರಲ್ಲಿ ಸಿಎಂ ಪದಕ, 2002ರಲ್ಲಿ ಪೊಲೀಸ್​ ಪದಕ ಮತ್ತು 2011ರಲ್ಲಿ ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸಲಾಗಿದೆ. 2011 ರಲ್ಲಿ ಸಂಚಾರ ನಿರ್ವಹಣೆಗಾಗಿ ತಂತ್ರಜ್ಞಾನದ ಅತ್ಯಂತ ನವೀನ ಬಳಕೆಗಾಗಿ ರಾಷ್ಟ್ರೀಯ ಇ-ಆಡಳಿತ ಗೋಲ್ಡ್ ಪ್ರಶಸ್ತಿ ಮತ್ತು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಗೆ ನೀಡಿದ ಕೊಡುಗೆಗಾಗಿ 2006 ರಲ್ಲಿ ಪ್ರಿನ್ಸ್ ಮೈಕೆಲ್ ಅಂತರರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಶಸ್ತಿ ಕೂಡ ಅವರಿಗೆ ಲಭಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:49 pm, Thu, 25 May 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us