AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಯೆಟ್ನಾಂ ಸ್ಪೀಡ್ ಬೋಟ್ ದುರಂತ: ಮುಂಬೈಗೆ ಬಂದಿಳಿದ 15 ಭಾರತೀಯರ ಮೃತದೇಹಗಳ ಹೊತ್ತ ವಿಮಾನ

ವಿಯೆಟ್ನಾಂನಲ್ಲಿ ನಡೆದ ಭೀಕರ ಸ್ಪೀಡ್‌ಬೋಟ್ ಅಪಘಾತದಲ್ಲಿ ಮೃತಪಟ್ಟ 15 ಭಾರತೀಯ ಪ್ರವಾಸಿಗರ ಮೃತದೇಹಗಳನ್ನು ಕೊನೆಗೂ ಮುಂಬೈಗೆ ತರಲಾಗಿದೆ. ಲಾವಾ ಮೊಬೈಲ್ಸ್ ಕಂಪನಿ ಆಯೋಜಿಸಿದ್ದ ಪ್ರೋತ್ಸಾಹಕ ಪ್ರವಾಸದಲ್ಲಿ ಭಾಗವಹಿಸಿದ್ದವರು ಈ ದುರಂತಕ್ಕೀಡಾಗಿದ್ದರು. ಈ ದುರಂತ ವಿದೇಶಿ ಪ್ರವಾಸಗಳಲ್ಲಿ ಸುರಕ್ಷತಾ ನಿಯಮಗಳು, ಲೈಫ್ ಜಾಕೆಟ್ ಧರಿಸುವಿಕೆ, ಹವಾಮಾನ ಪರಿಶೀಲನೆ ಮತ್ತು ಪ್ರಯಾಣ ವಿಮೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.

ವಿಯೆಟ್ನಾಂ ಸ್ಪೀಡ್ ಬೋಟ್ ದುರಂತ: ಮುಂಬೈಗೆ ಬಂದಿಳಿದ 15 ಭಾರತೀಯರ ಮೃತದೇಹಗಳ ಹೊತ್ತ ವಿಮಾನ
ಬೋಟ್
ನಯನಾ ರಾಜೀವ್
|

Updated on: Jul 14, 2026 | 10:06 AM

Share

ಮುಂಬೈ, ಜುಲೈ 14: ವಿಯೆಟ್ನಾಂ ದೇಶದ ಸುಂದರ ದ್ವೀಪದಲ್ಲಿ ಕಳೆದ ವಾರ ನಡೆದ ಭೀಕರ ಸ್ಪೀಡ್‌ಬೋಟ್ ಅಪಘಾತದಲ್ಲಿ ಜಲಸಮಾಧಿಯಾಗಿದ್ದ 15 ಭಾರತೀಯ ಪ್ರವಾಸಿಗರ ಮೃತದೇಹಗಳನ್ನು ಸೋಮವಾರ ರಾತ್ರಿ ಕೊನೆಗೂ ಭಾರತಕ್ಕೆ ತರಲಾಗಿದೆ. ವಿಯೆಟ್ನಾಂ ಏರ್‌ಲೈನ್ಸ್‌ನ ವಿಶೇಷ ವಿಮಾನ (VN 979) ರಾತ್ರಿ 9.19 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಅಲ್ಲಿ ಬಂದಿದ್ದ  ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ 15 ದುರ್ದೈವಿಗಳಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಇವರಲ್ಲಿ 10 ಮಂದಿ ತಮಿಳುನಾಡಿನವರು, ಮೂವರು ಆಂಧ್ರಪ್ರದೇಶದವರು ಹಾಗೂ ಇಬ್ಬರು ಕೇರಳದವರು. ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಪ್ರಕ್ರಿಯೆಗಳು ಮುಗಿದ ತಕ್ಷಣ, ಮೃತದೇಹಗಳನ್ನು ಅಂತಿಮ ವಿಧಿವಿಧಾನಗಳಿಗಾಗಿ ಅವರವರ ಸ್ವಗ್ರಾಮಗಳಾದ ಕೊಯಮತ್ತೂರು, ಚೆನ್ನೈ, ಹೈದರಾಬಾದ್ ಮತ್ತು ತಿರುವನಂತಪುರಂಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

ಉದ್ಯೋಗಿಗಳಿಗೆ ಲಾವಾ ಕಂಪನಿ ನೀಡಿದ್ದ ‘ಗಿಫ್ಟ್ ಟೂರ್’

ಮೃತರೆಲ್ಲರೂ ಭಾರತದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯಾದ ‘ಲಾವಾ ಮೊಬೈಲ್ಸ್’ ಕಂಪನಿಯ ಪ್ರಾಯೋಜಿತ ಪ್ರವಾಸದ ಭಾಗವಾಗಿದ್ದರು. ಕಂಪನಿಯು ತನ್ನ ಅತ್ಯುತ್ತಮ ಚಾನೆಲ್ ಪಾಲುದಾರರು, ವಿತರಕರು ಮತ್ತು ಉದ್ಯೋಗಿಗಳಿಗೆ ಪ್ರೋತ್ಸಾಹಕ ಉಡುಗೊರೆಯಾಗಿ ವಿಯೆಟ್ನಾಂನ ಪ್ರಸಿದ್ಧ ‘ಫು ಕ್ವಾಕ್’ ದ್ವೀಪಕ್ಕೆ ಪ್ರವಾಸ ಆಯೋಜಿಸಿತ್ತು.

ಉದ್ಯೋಗಿಗಳು ವಿಯೆಟ್ನಾಂನ ಸುಂದರ ಸಮುದ್ರ ತೀರದಲ್ಲಿ ಸಂಭ್ರಮಿಸುತ್ತಾ ತಮ್ಮ ಮೊಬೈಲ್‌ಗಳಲ್ಲಿ ಫೋಟೋಗಳನ್ನು ತೆಗೆದು ಸಂಭ್ರಮಿಸುತ್ತಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಶನಿವಾರ ಸಂಜೆ ದ್ವೀಪದಿಂದ ವಾಪಸ್ ಹಿಂತಿರುಗುತ್ತಿದ್ದಾಗ, ಕರಾವಳಿಯಿಂದ ಕೇವಲ 400 ಮೀಟರ್ ದೂರದಲ್ಲಿ ಇವರಿದ್ದ ಸ್ಪೀಡ್ ಬೋಟ್ ಏಕಾಏಕಿ ಸಮುದ್ರದ ಅಲೆಗಳಿಗೆ ಸಿಲುಕಿ ಪಲ್ಟಿಯಾಗಿದೆ.

21 ಜನರ ರಕ್ಷಣೆ; ಒಬ್ಬರ ಸ್ಥಿತಿ ಇನ್ನು ಗಂಭೀರ

ಹನೋಯ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ, ಆ ದುರಂತ ದೋಣಿಯಲ್ಲಿ 32 ಭಾರತೀಯ ಪ್ರವಾಸಿಗರು ಮತ್ತು 4 ವಿಯೆಟ್ನಾಂ ಸಿಬ್ಬಂದಿ ಇದ್ದರು. ದೋಣಿ ಮುಳುಗಿದ ತಕ್ಷಣ ವಿಯೆಟ್ನಾಂ ನೌಕಾಪಡೆ ನಡೆಸಿದ ಬೃಹತ್ ರಕ್ಷಣಾ ಕಾರ್ಯಾಚರಣೆಯ ಮೂಲಕ 21 ಜನರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಬದುಕುಳಿದ ಬಹುತೇಕರು ಭಾರತಕ್ಕೆ ಮರಳಿದ್ದಾರಾದರೂ, ಕಣ್ಣೆದುರೇ ಸಹೋದ್ಯೋಗಿಗಳು ಮೃತಪಟ್ಟ ಆಘಾತದಿಂದ ಇನ್ನೂ ಹೊರಬಂದಿಲ್ಲ. ಸದ್ಯ ಮತ್ತೊಬ್ಬ ಭಾರತೀಯನ ಸ್ಥಿತಿ ಗಂಭೀರವಾಗಿದ್ದು, ವಿಯೆಟ್ನಾಂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.

ವಿದೇಶಿ ಪ್ರವಾಸದಲ್ಲಿ ಸುರಕ್ಷತೆ ಎಷ್ಟು ಮುಖ್ಯ?

ವಿದೇಶಿ ಪ್ರವಾಸ ಕೈಗೊಳ್ಳುವಾಗ ಅಥವಾ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಜೀವಕ್ಕೆ ರಕ್ಷಣೆಯಾಗುತ್ತದೆ.

ಲೈಫ್ ಜಾಕೆಟ್ ಕಡ್ಡಾಯ: ಇತ್ತೀಚಿನ ದಿನಗಳಲ್ಲಿ ಥೈಲ್ಯಾಂಡ್, ವಿಯೆಟ್ನಾಂ ಮತ್ತು ಇಂಡೋನೇಷ್ಯಾ ದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಸ್ಪೀಡ್‌ಬೋಟ್‌ಗಳನ್ನು ಚಲಾಯಿಸಲಾಗುತ್ತಿದೆ. ಯಾವುದೇ ಸಣ್ಣ ದೋಣಿ ಹತ್ತುವ ಮುನ್ನ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸುವುದು ಹಾಗೂ ಹವಾಮಾನದ ವರದಿಯನ್ನು ಪರಿಶೀಲಿಸುವುದು ಅತ್ಯಗತ್ಯ.

ಟ್ರಾವೆಲ್ ಇನ್ಶೂರೆನ್ಸ್: ಇಂತಹ ದುರಂತಗಳು ಸಂಭವಿಸಿದಾಗ ವಿದೇಶಗಳಲ್ಲಿ ತಗಲುವ ಭಾರಿ ವೈದ್ಯಕೀಯ ವೆಚ್ಚ ಹಾಗೂ ಮೃತದೇಹಗಳನ್ನು ತಾಯ್ನಾಡಿಗೆ ತರಲು ತಗಲುವ ಲಕ್ಷಾಂತರ ರೂಪಾಯಿಗಳ ಆರ್ಥಿಕ ಹೊರೆಗೆ ‘ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್’ ದೊಡ್ಡ ಆಸರೆಯಾಗುತ್ತದೆ. ಸದ್ಯ ಲಾವಾ ಕಂಪನಿಯು ಮೃತರ ಕುಟುಂಬಗಳಿಗೆ ತಕ್ಷಣದ ನೆರವು ಘೋಷಿಸಿದ್ದು, ಭಾರತೀಯ ವಿದೇಶಾಂಗ ಇಲಾಖೆಯು ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!