15 ಸಾವಿರ ರೂ ಸಿಗುತ್ತೆ ಎಂಬ ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು, ಆಮೇಲೆ ಸಿಕ್ಕಿದ್ದೇನು?

ಸೇಲಂನಲ್ಲಿ ಹೊಸ ವೈರಸ್ ಸುಳ್ಳು ಹೇಳಿ, ಸರ್ಕಾರಿ ಯೋಜನೆಯ ನೆಪದಲ್ಲಿ ಮಹಿಳೆಯರನ್ನು ತಲೆ ಬೋಳಿಸಿಕೊಳ್ಳುವಂತೆ ವಂಚಿಸಲಾಗಿದೆ. ₹15 ಸಾವಿರ ಹಾಗೂ ಲ್ಯಾಪ್‌ಟಾಪ್ ಆಮಿಷವೊಡ್ಡಿ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ಮೂವರು ಮಹಿಳೆಯರು ಮೋಸ ಹೋಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ವಂಚನೆಗಳಿಂದ ಸಾರ್ವಜನಿಕರು ಎಚ್ಚರದಿಂದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ, ಅಧಿಕೃತ ಮೂಲಗಳನ್ನು ಮಾತ್ರ ನಂಬಲು ಸೂಚಿಸಿದ್ದಾರೆ.

15 ಸಾವಿರ ರೂ ಸಿಗುತ್ತೆ ಎಂಬ ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು, ಆಮೇಲೆ ಸಿಕ್ಕಿದ್ದೇನು?
ಮಹಿಳೆ

Updated on: Jul 29, 2026 | 3:19 PM

ಸೇಲಂ, ಜುಲೈ 29: ಹೊಸ ಸಾಂಕ್ರಾಮಿಕ ರೋಗವೊಂದರ ತಪ್ಪು ಮಾಹಿತಿ ನೀಡಿ, ಸರ್ಕಾರದ ಉಚಿತ ಯೋಜನೆಯ ನೆಪದಲ್ಲಿ ಮಹಿಳೆಯರಿಗೆ ತಲೆ ಬೋಳಿಸಿಕೊಳ್ಳುವಂತೆ ಮಾಡಿ ವಂಚಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಉಚಿತ ಹಣ ಮತ್ತು ಲ್ಯಾಪ್‌ಟಾಪ್ ಆಮಿಷ ಒಡ್ಡಿ ಈ ವಿಚಿತ್ರ ವಂಚನೆ ಎಸಗಿದ್ದಾನೆ.

ಗ್ರಾಮದ ಮಹಿಳೆಯೊಬ್ಬರಿಗೆ ಫೋನ್ ಮಾಡಿದ ವಂಚಕ, ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅವರ ಕುಟುಂಬದ ವಿವರಗಳನ್ನು ಸರಿಯಾಗಿ ಹೇಳುವ ಮೂಲಕ ಅವರ ನಂಬಿಕೆ ಗಳಿಸಿದ್ದಾನೆ. ಕೋವಿಡ್-19 ರಂತೆಯೇ ಮಾನವನ ಕೂದಲಿನ ಮೂಲಕ ಹೊಸ ಅಪಾಯಕಾರಿ ರೋಗ ಹರಡುತ್ತಿದೆ. ಇದನ್ನು ತಡೆಯಲು ವಿದೇಶಗಳಲ್ಲಿಯೂ ಜನರು ತಲೆ ಬೋಳಿಸಿಕೊಳ್ಳುತ್ತಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

ಅಷ್ಟೇ ಅಲ್ಲದೆ ತಲೆ ಬೋಳಿಸಿಕೊಂಡ ಮಹಿಳೆಯರಿಗೆ 15 ಸಾವಿರ ರೂ., ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಲ್ಯಾಪ್​ಟಾಪ್ ಜತೆಗೆ 45 ಸಾವಿರ ರೂ. ಪುಟುಷರಿಗೆ 6 ಸಾವಿರ ರೂ. ನೀಡಲಾಗುವುದು ಎಂದು ನಂಬಿಸಿದ್ದಾನೆ.ಮರುದಿನ ಮಧ್ಯಾಹ್ನದೊಳಗೆ ಉಚಿತ ಹಣ ವಿತರಿಸಲು ಅಧಿಕಾರಿಗಳು ಬರಲಿದ್ದಾರೆ, ಅದಕ್ಕೂ ಮುನ್ನವೇ ತಲೆ ಬೋಳಿಸಿಕೊಂಡವರಿಗೆ ಮಾತ್ರ ಹಣ ಸಿಗಲಿದೆ ಎಂದು ಅವಸರಗೊಳಿಸಿದ್ದಾನೆ.

ಮತ್ತಷ್ಟು ಓದಿ: ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ, MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ!

ವಂಚಕನ ಮಾತನ್ನು ನಂಬಿದ ಗ್ರಾಮದ ಸುಮಾರು 20 ಜನರು ತಲೆ ಬೋಳಿಸಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಮೂವರು ಮಹಿಳೆಯರು ತಕ್ಷಣವೇ ಮುಂಚೂಣಿಗೆ ಬಂದು ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದಾರೆ.

ಬಳಿಕ ಹಣದ ಪಾವತಿಗಾಗಿ ಕರೆ ಮಾಡಿದಾಗ ವಂಚಕನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ತಾವು ಮೋಸ ಹೋಗಿರುವುದು ಮಹಿಳೆಯರಿಗೆ ಅರಿವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ತಲೆ ಬೋಳಿಸಿಕೊಳ್ಳಲು ಕಾಯುತ್ತಿದ್ದ ಇತರ ಗ್ರಾಮಸ್ಥರು ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದಾರೆ. ಸದ್ಯ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಕ್ರೈಮ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಂಚಕರು ಕೇವಲ ಬ್ಯಾಂಕ್ ಓಟಿಪಿ (OTP) ಕೇಳುವುದು ಮಾತ್ರವಲ್ಲದೆ, ಇಂತಹ ಭಯ ಹುಟ್ಟಿಸುವ ಸುಳ್ಳು ಸುದ್ದಿಗಳು ಹಾಗೂ ‘ಡಿಜಿಟಲ್ ಅರೆಸ್ಟ್’ ನಂತಹ ಹೊಸ ತಂತ್ರಗಳನ್ನು ಬಳಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳು ಅಥವಾ ಆರೋಗ್ಯ ಇಲಾಖೆಯ ಯಾವುದೇ ತುರ್ತು ಆದೇಶಗಳು ಯಾವಾಗಲೂ ಅಧಿಕೃತ ಪತ್ರಿಕಾ ಪ್ರಕಟಣೆ, ಆಶಾ ಕಾರ್ಯಕರ್ತೆಯರು ಅಥವಾ ಸ್ಥಳೀಯ ಪಂಚಾಯಿತಿಗಳ ಮೂಲಕ ಜಾರಿಗೆ ಬರುತ್ತವೆ. ಅಜ್ಞಾತ ಫೋನ್ ಕರೆಗಳ ಆಧಾರದ ಮೇಲೆ ಯಾವುದೇ ನಿರ್ಧಾರ ತಳೆಯದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us