ಅರುಣಾಚಲ ಪ್ರದೇಶದಲ್ಲಿ ಭಯಂಕರ ಮಳೆ, ಭೂಕುಸಿತ; ಮೂವರು ಸಾವು, ಗಡಿ ರಸ್ತೆಗಳೆಲ್ಲ ಬ್ಲಾಕ್​

| Updated By: Lakshmi Hegde

Updated on: Apr 19, 2022 | 6:33 PM

ಮಳೆಗೆ ತತ್ತರಿಸಿ, ಮನೆ -ಅಗತ್ಯವಸ್ತುಗಳನ್ನೆಲ್ಲ ಕಳೆದುಕೊಂಡಿರುವವರನ್ನೆಲ್ಲ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗಿದೆ. ಪರಿಹಾರವನ್ನೂ ನೀಡಲಾಗಿದೆ ಎಂದೂ ಹೆಚ್ಚುವರಿ ಡಿಸಿ ಮಾಹಿತಿ ನೀಡಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಭಯಂಕರ ಮಳೆ, ಭೂಕುಸಿತ; ಮೂವರು ಸಾವು, ಗಡಿ ರಸ್ತೆಗಳೆಲ್ಲ ಬ್ಲಾಕ್​
ಸಾಂದರ್ಭಿಕ ಚಿತ್ರ
Follow us on

ಅರುಣಾಚಲ ಪ್ರದೇಶದ ಕುರುಂಗ್​ ಕುಮೆಯ್​ ಜಿಲ್ಲೆಯಲ್ಲಿ ಭಯಂಕರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದು ಭಾರಿ ಪ್ರಮಾಣದ ಭೂಕುಸಿತಕ್ಕೆ ಕಾರಣವಾಗಿದ್ದು, ದುರಂತದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅರುಣಾಚಲ ಪ್ರದೇಶ ರಾಜ್ಯಾದ್ಯಂತ ಕಳೆದ ಒಂದು ವಾರದಿಂದಲೂ ಮಳೆಯಾಗುತ್ತಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮರಗಳು ಬೇರುಸಮೇತ ಉರುಳಿಬಿದ್ದಿವೆ, ವಿದ್ಯುತ್ ಇಲ್ಲದಂತಾಗಿದೆ..ಅಷ್ಟೇ ಅಲ್ಲ, ಅದೆಷ್ಟೋ ಮನೆಗಳು ಧ್ವಂಸಗೊಂಡಿವೆ. ಸೋಮವಾರ ಕೊಲೊರಿಯಾಂಗ್​​ನಲ್ಲಿರುವ ಸುಲುಂಗ್​ ತಾಪಿನ್​ ಹಳ್ಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಸುಮಾರು 15 ಮನೆಗಳು ಕುಸಿದುಬಿದ್ದಿವೆ. ಮೂವರು ಮಣ್ಣಡಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಓಷನ್ ಗಾವೋ ಮಾಹಿತಿ ನೀಡಿದ್ದಾರೆ.

ಮೃತರನ್ನು ಸರಿಯು ಟಾಂಗ್ಡಾಂಗ್ (52), ಸರಿಯು ಯಾಜಿಕ್ (47) ಮತ್ತು ಸರಿಯು ತಾಕರ್ (9) ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಇನ್ನು ಮಳೆಗೆ ತತ್ತರಿಸಿ, ಮನೆ -ಅಗತ್ಯವಸ್ತುಗಳನ್ನೆಲ್ಲ ಕಳೆದುಕೊಂಡಿರುವವರನ್ನೆಲ್ಲ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗಿದೆ. ಪರಿಹಾರವನ್ನೂ ನೀಡಲಾಗಿದೆ ಎಂದೂ ಹೆಚ್ಚುವರಿ ಡಿಸಿ ಮಾಹಿತಿ ನೀಡಿದ್ದಾರೆ. ಇನ್ನು ಈ ಪ್ರದೇಶದಲ್ಲಿರುವ ಸೇನಾ ಸಿಬ್ಬಂದಿಗೂ ಮಳೆಯಿಂದಾ ತುಂಬ ಅಡಚಣೆಯಾಗಿದೆ. ಗಡಿಭಾಗದ ರಸ್ತೆಗಳಲ್ಲಿ ಸಂಚಾರವೇ ಕಷ್ಟ ಎಂಬಂತಾಗಿದೆ. ಅದರಲ್ಲೂ ಕುರುಂಗ್ ಕುಮೇ ಜಿಲ್ಲೆಯ ಕೊಲೊರಿಯಾಂಗ್-ಸರ್ಲಿ-ಹುರಿ ಎಂಬ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ತುಂಬ ಅನನುಕೂಲವಾಗಿದೆ ಎಂದು ಹೇಳಲಾಗಿದೆ.   ರಸ್ತೆಗಳನ್ನು ತೆರವುಗೊಳಿಸುವ ಮತ್ತು ದುರಂತ ನಡೆದ ಸ್ಥಳದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.

ಸದ್ಯ ದೇಶದ ವಿವಿಧೆಡೆಯಲ್ಲಿ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ ಕೂಡ ಮಳೆಯಿಂದ ಹಲವು ಅವಾಂತರವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್​ 18ರಿಂದ ವಿಪರೀತ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್​ ಘೋಷಣೆಯಾಗಿತ್ತು. ಏಪ್ರಿಲ್​ 19 ಮತ್ತು 20ರಂದೂ ಕೂಡ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ನಮ್ಮ ರಾಜ್ಯದಲ್ಲಿ ಡಿಸಿ ಮತ್ತು ಎಸ್ಪಿಗಳ ವರ್ಗಾವಣೆ ದಂಧೆಯನ್ನು ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಆರಂಭಿಸಿದ: ಬಸನಗೌಡ ಯತ್ನಾಳ್

Published On - 6:30 pm, Tue, 19 April 22