ದಟ್ಟ ಮಂಜಿನಿಂದಾಗಿ ಅಮಿತ್ ಶಾ ಪ್ರಯಾಣಿಸುತ್ತಿದ್ದ ವಿಮಾನ ಗುವಾಹಟಿಯಲ್ಲಿ ತುರ್ತು ಲ್ಯಾಂಡಿಂಗ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ರಾತ್ರಿ 10 ಗಂಟೆಗೆ ಎಂಬಿಬಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿತ್ತು. ಆದರೆ ದಟ್ಟ ಮಂಜಿನಿಂದ ಉಂಟಾದ ಗೋಚರತೆಯ ಕೊರತೆಯಿಂದಾಗಿ ಅವರು ಗುವಾಹಟಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ದಟ್ಟ ಮಂಜಿನಿಂದಾಗಿ ಅಮಿತ್ ಶಾ ಪ್ರಯಾಣಿಸುತ್ತಿದ್ದ ವಿಮಾನ ಗುವಾಹಟಿಯಲ್ಲಿ ತುರ್ತು ಲ್ಯಾಂಡಿಂಗ್
ಗುವಾಹಟಿ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಅವರನ್ನು ಸ್ವಾಗತಿಸಿದ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮ
Image Credit source: Twitter
Edited By:

Updated on: Jan 05, 2023 | 9:10 AM

ಅಗರ್ತಲಾ: ದಟ್ಟ ಮಂಜಿನಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ವಿಮಾನ ಬುಧವಾರ ರಾತ್ರಿ ಅಗರ್ತಲಾದ (Agartala) ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಬದಲು ಗುವಾಹಟಿಯಲ್ಲಿ ತುರ್ತು ಲ್ಯಾಂಡ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಅಮಿತ್ ಶಾ ಅವರಿದ್ದ ವಿಮಾನವನ್ನು ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.

ಅಮಿತ್ ಶಾ ಬುಧವಾರ ರಾತ್ರಿ ಅಗರ್ತಲಾಕ್ಕೆ ಆಗಮಿಸಬೇಕಿತ್ತು. ಇಂದು ಅವರು ಈಶಾನ್ಯ ರಾಜ್ಯದಲ್ಲಿ 2 ರಥಯಾತ್ರೆಗಳಿಗೆ ಚಾಲನೆ ನೀಡಲಿದ್ದಾರೆ. ಅಸ್ಸಾಂನಲ್ಲಿ ಈ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಆಗಮಿಸಿದ್ದರು.


ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಎಂಬಿಬಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿತ್ತು. ಆದರೆ ದಟ್ಟ ಮಂಜಿನಿಂದ ಉಂಟಾದ ಗೋಚರತೆಯ ಕೊರತೆಯಿಂದಾಗಿ ಅವರು ಗುವಾಹಟಿ ವಿಮಾನ ನಿಲ್ದಾಣಕ್ಕೆ ತೆರಳಿದರು ಎಂದು ಪಶ್ಚಿಮ ತ್ರಿಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಸುಂದರವಾಗಿಯೇ ಇದ್ದಾರೆ, ಆದರೂ ಸದ್ದಾಂ ಹುಸೇನ್ ರೀತಿ ಕಾಣುತ್ತಾರೆ; ಅಸ್ಸಾಂ ಸಿಎಂ ಮತ್ತೆ ಲೇವಡಿ

ಎಂಬಿಬಿ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ವಿಮಾನವು ಗುವಾಹಟಿಗೆ ಬಂದಿಳಿದಿದ್ದು, ಅಮಿತ್ ಶಾ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಗುವಾಹಟಿಯ ವಿಮಾನ ನಿಲ್ದಾಣದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮ ಅಮಿತ್ ಶಾ ಅವರನ್ನು ಸ್ವಾಗತಿಸಿದ್ದಾರೆ.

ಉತ್ತರ ತ್ರಿಪುರಾ ಜಿಲ್ಲೆಯ ಧರ್ಮನಗರ ಮತ್ತು ದಕ್ಷಿಣ ತ್ರಿಪುರಾ ಜಿಲ್ಲೆಯ ಸಬ್ರೂಮ್ ಉಪವಿಭಾಗದಿಂದ ರಥಯಾತ್ರೆಗೆ ಚಾಲನೆ ನೀಡಲು ಶಾ ಇಂದು ಬೆಳಗ್ಗೆ 11 ಗಂಟೆಗೆ ಅಗರ್ತಲಾಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀಬ್ ಭಟ್ಟಾಚಾರ್ಜಿ ತಿಳಿಸಿದ್ದಾರೆ.

ಅಮಿತ್ ಶಾ ಅವರು ಮೊದಲು ಧರ್ಮನಗರಕ್ಕೆ ತೆರಳಲಿದ್ದು, ಅಲ್ಲಿ ಯಾತ್ರೆಗೆ ಚಾಲನೆ ನೀಡಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅವರು ಸಬ್ರೂಮ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಮತ್ತೊಂದು ರಥಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಯೂ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಬ್ರೂಮ್ ಕಾರ್ಯಕ್ರಮದ ನಂತರ, ಶಾ ಅಗರ್ತಲಾಕ್ಕೆ ಹಿಂತಿರುಗಿ ಇಂದು ಸಂಜೆ ತ್ರಿಪುರಾದಿಂದ ಹೊರಡಲಿದ್ದಾರೆ.

ಇದನ್ನೂ ಓದಿ: Karnataka Politics ಅಮಿತ್ ಶಾ ಬೆನ್ನಲ್ಲೇ ಮತ್ತೆ ಜೆಪಿ ನಡ್ಡಾ ಕರ್ನಾಟಕ ಪ್ರವಾಸ: ಇಲ್ಲಿದೆ ವೇಳಾಪಟ್ಟಿ

ಜನ ವಿಶ್ವಾಸ ಯಾತ್ರೆಯು 2018ರಿಂದ ಅಸ್ಸಾಂ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಿದೆ. ಜನ ವಿಶ್ವಾಸ ಯಾತ್ರೆ ರಾಜ್ಯದ ಎಲ್ಲಾ 60 ವಿಧಾನಸಭಾ ಕ್ಷೇತ್ರಗಳಲ್ಲಿ 1,000 ಕಿ.ಮೀ ದಾಟಲಿದೆ. ಜನವರಿ 12ರಂದು ಮುಕ್ತಾಯಗೊಳ್ಳಲಿರುವ ಈ ಯಾತ್ರೆಯಲ್ಲಿ ಒಟ್ಟು 100 ರ್ಯಾಲಿಗಳು ಮತ್ತು ರೋಡ್‌ಶೋಗಳು ನಡೆಯಲಿವೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕೊನೆಯ ದಿನದ ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ