TV9 Kannada National Home Minister Amit Shah In Manipur, Centre Announces Rs 10 lakh For Violence Victims
ಮಣಿಪುರಕ್ಕೆ ಭೇಟಿ ನೀಡಿದ ಅಮಿತ್ ಶಾ: ಹಿಂಸಾಚಾರ ಸಂತ್ರಸ್ತರಿಗೆ 10 ಲಕ್ಷ ಪರಿಹಾರ ಘೋಷಣೆ
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ ಎರಡನೇ ದಿನದಂದು ನಾಗರಿಕ ಸಮಾಜ ಸಂಘಟನೆಗಳ ಸದಸ್ಯರು ಮತ್ತು ಮಹಿಳಾ ಮುಖಂಡರ ಗುಂಪನ್ನು ಅಮಿತ್ ಶಾ ಭೇಟಿ ಮಾಡಿದ್ದಾರೆ. ಅಮಿತ್ ಶಾ ಮೇ 29 ರಂದು ಇಂಫಾಲ್ಗೆ ಆಗಮಿಸಿದ್ದಾರೆ. ಮಣಿಪುರ ಹಿಂಸಾಚಾರದಲ್ಲಿ ಇದುವರೆಗೆ 75 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಈ ಘಟನೆ ನಡೆದ ನಂತರ ಇದೇ ಮೊದಲ ಬಾರಿ ಶಾ ಇಲ್ಲಿಗೆ ಬಂದಿದ್ದಾರೆ.
ಅಮಿತ್ ಶಾ
ರಶ್ಮಿ ಕಲ್ಲಕಟ್ಟ
Updated on:
May 30, 2023 | 4:20 PM
ಇಂಫಾಲ್ : ಗೃಹ ಸಚಿವ ಅಮಿತ್ ಶಾ (Amit Shah)ಅವರು ಇಂದು ಮಣಿಪುರದಲ್ಲಿ (Manipur Violence) ನಡೆದ ಜನಾಂಗೀಯ ಘರ್ಷಣೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ₹ 10 ಲಕ್ಷ ಪರಿಹಾರವನ್ನು (compensation) ಘೋಷಿಸಿದ್ದಾರೆ. ಹಿಂಸಾಚಾರ ಪೀಡಿತ ಚುರಾಚಂದ್ಪುರ ಜಿಲ್ಲೆಗೆ ಭೇಟಿ ನೀಡಿದ ಅಮಿತ್ ಶಾ ಅವರನ್ನು ಬುಡಕಟ್ಟು ಮಹಿಳೆಯರು ರಾಷ್ಟ್ರಧ್ವಜ ಹಿಡಿದು ಸ್ವಾಗತಿಸಿದರು. ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ ಎರಡನೇ ದಿನದಂದು ನಾಗರಿಕ ಸಮಾಜ ಸಂಘಟನೆಗಳ ಸದಸ್ಯರು ಮತ್ತು ಮಹಿಳಾ ಮುಖಂಡರ ಗುಂಪನ್ನು ಅಮಿತ್ ಶಾ ಭೇಟಿ ಮಾಡಿದ್ದಾರೆ. ಅಮಿತ್ ಶಾ ಮೇ 29 ರಂದು ಇಂಫಾಲ್ಗೆ ಆಗಮಿಸಿದ್ದಾರೆ. ಮಣಿಪುರ ಹಿಂಸಾಚಾರದಲ್ಲಿ ಇದುವರೆಗೆ 75 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಈ ಘಟನೆ ನಡೆದ ನಂತರ ಇದೇ ಮೊದಲ ಬಾರಿ ಶಾ ಇಲ್ಲಿಗೆ ಬಂದಿದ್ದಾರೆ.
ಮಣಿಪುರಕ್ಕೆ ಅಮಿತ್ ಶಾ ಭೇಟಿ: ಅಪ್ ಡೇಟ್ಸ್
ಗೃಹ ಸಚಿವರು ಇಂದು ಮುಂಜಾನೆ ಇಂಫಾಲ್ನಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಹಲವಾರು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿದರು.
ಪ್ರಮುಖ ವ್ಯಕ್ತಿಗಳು ಶಾಂತಿಗಾಗಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಮಣಿಪುರದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ನಾವು ಒಟ್ಟಾಗಿ ಕೊಡುಗೆ ನೀಡುತ್ತೇವೆ ಎಂದು ಭರವಸೆ ನೀಡಿದರು ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇಂಫಾಲ್ನಲ್ಲಿರುವ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ವಿವರವಾದ ಚರ್ಚೆಗಳು ನಡೆದವು, ಅಲ್ಲಿ ಹಲವಾರು ಮಧ್ಯಸ್ಥಗಾರರು ರಾಜ್ಯದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ಪ್ರತಿಜ್ಞೆ ಮಾಡಿದರು. ವದಂತಿಗಳನ್ನು ಹೋಗಲಾಡಿಸಲು ಬಿಎಸ್ಎನ್ ಎಲ್ ಸಹಾಯದಿಂದ ದೂರವಾಣಿ ಮಾರ್ಗಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹೇಳಿದೆ.
ಮೀಸಲು ಅರಣ್ಯ ಭೂಮಿಯಿಂದ ಕುಕಿ ಗ್ರಾಮಸ್ಥರನ್ನು ಹೊರಹಾಕುವ ವಿಚಾರವಾಗಿ ಒಂದು ತಿಂಗಳ ಹಿಂದೆ ಘರ್ಷಣೆ ನಡೆದಿತ್ತು. ಈ ಸಂಘರ್ಷವು ಆಂದೋಲನಕ್ಕೆ ಕಾರಣವಾಯಿತು.
ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಲು ಆಯೋಜಿಸಲಾದ ಬುಡಕಟ್ಟು ಐಕಮತ್ಯದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತ್ತು.
ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಉನ್ನತ ಮಟ್ಟದ ತನಿಖಾ ಆಯೋಗಕ್ಕೆ ಒತ್ತಾಯಿಸಿತು.
ಆಯೋಗದ ನೇತೃತ್ವವನ್ನು ಸುಪ್ರೀಂ ಕೋರ್ಟ್ನ ಸೇವೆಯಲ್ಲಿರುವ ಅಥವಾ ನಿವೃತ್ತ ನ್ಯಾಯಾಧೀಶರು ವಹಿಸಬೇಕು ಎಂದು ಕಾಂಗ್ರೆಸ್ ನಾಯಕರು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರು ಮಣಿಪುರದಲ್ಲಿನ ಸಮಸ್ಯೆ ಪರಿಹಾರಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಹಿಂಸಾಚಾರವು ಎರಡು ಜನಾಂಗಗಳ ನಡುವಿನ ಘರ್ಷಣೆಯಾಗಿದೆ. ಬಂಡಾಯ ವಿರೋಧಿ ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ನಾವು ಅತ್ಯುತ್ತಮ ಕೆಲಸ ಮಾಡಿದ್ದೇವೆ ಮತ್ತು ಹೆಚ್ಚಿನ ಸಂಖ್ಯೆಯ ಜೀವಗಳನ್ನು ಉಳಿಸಿದ್ದೇವೆ. ಮಣಿಪುರದಲ್ಲಿನ ಸವಾಲುಗಳು ಕಡಿಮೆಯಾಗಿಲ್ಲ. ಇದು ಪರಿಹಾರವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದ ಬೇಗನೆ ಪರಿಹಾರವಾಗಬಹುದು ಎಂದು ಚೌಹಾಣ್ ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ರಾಜೀವ್ ಸಿಂಗ್ ನ್ನು ಮಣಿಪುರಕ್ಕೆ ನಿಯೋಜಿಸಿದ ಕೇಂದ್ರ
ಗೃಹ ವ್ಯವಹಾರಗಳ ಸಚಿವಾಲಯ (MHA) 1993-ಬ್ಯಾಚ್ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ ರಾಜೀವ್ ಸಿಂಗ್ ಅವರನ್ನು ಪ್ರಸ್ತುತ ಮಣಿಪುರಕ್ಕೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಇನ್ಸ್ಪೆಕ್ಟರ್ ಜನರಲ್ ಆಗಿ ನಿಯೋಜಿಸಿದೆ. ಮೇ 29 ರಂದು ಹೊರಡಿಸಿದ ಆದೇಶದಲ್ಲಿ, “ಸಾರ್ವಜನಿಕ ಹಿತಾಸಕ್ತಿ ವಿಶೇಷ ಪ್ರಕರಣ” ಎಂಬ ನೀತಿಯನ್ನು ಸಡಿಲಿಸಿ ಮೂರು ವರ್ಷಗಳ ಅವಧಿಗೆ ಶ್ರೀ ಸಿಂಗ್ ಅವರನ್ನು ತ್ರಿಪುರಾ ಕೇಡರ್ನಿಂದ ಮಣಿಪುರ ಕೇಡರ್ಗೆ ವರ್ಗಾಯಿಸಲಾಗಿದೆ ಎಂದು ಎಂಎಚ್ಎ ತಿಳಿಸಿದೆ.
1987ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಮಣಿಪುರ ಪೊಲೀಸ್ ಮಹಾನಿರ್ದೇಶಕ ಪಿ.ಡೌಂಗೆಲ್ ಅವರು ಮುಂದಿನ ತಿಂಗಳು ನಿವೃತ್ತರಾಗಲಿದ್ದಾರೆ. ಹಾಗಾಗಿ ಸಿಂಗ್ ಅವರನ್ನು ಉನ್ನತ ಹುದ್ದೆಗೆ ಬದಲಾಯಿಸುವ ಸಾಧ್ಯತೆಯಿದೆ. ಈ ಹಿಂದೆ ಮಣಿಪುರ ಸರ್ಕಾರವು ಮಾಜಿ ಸಿಆರ್ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರನ್ನು ಭದ್ರತಾ ಸಲಹೆಗಾರರನ್ನಾಗಿ ನೇಮಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Rashmi Kallakatta
ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ