
ಹೈದರಾಬಾದ್, ಏ.4: ಗಂಡು ಮಗು ಬೇಕೆಂಬ ಅಂಧಾಭಿಮಾನ ಮತ್ತು ವಿಕೃತ ಮನಸ್ಥಿತಿಗೆ ಅಮಾಯಕ ಹೆಣ್ಣು ಜೀವಗಳು ಬಲಿಯಾಗಿರುವ ಘೋರ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ತನ್ನ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಿ, ನಂತರ ಅದನ್ನು ಅಪಘಾತ ಎಂದು ಬಿಂಬಿಸಲು ಮೃತದೇಹಗಳನ್ನು ಈಜುಕೊಳಕ್ಕೆ ಎಸೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ತನ್ನ ಪತ್ನಿಯೊಂದಿಗೆ ಗಂಡು ಮಗುವಿನ ವಿಚಾರಕ್ಕಾಗಿ ಪದೇ ಪದೇ ಜಗಳವಾಡುತ್ತಿದ್ದನು. ಇಬ್ಬರು ಹೆಣ್ಣು ಮಕ್ಕಳಿದ್ದರೂ ಸಹ, ಗಂಡು ಮಗು ಇಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದನು. ಈ ವಿಕೃತ ಹಂಬಲವು ಅಂತಿಮವಾಗಿ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.
ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ನಂತರ, ಆರೋಪಿಯು ಯಾರೂ ಇಲ್ಲದ ಸಮಯದಲ್ಲಿ ಮೃತದೇಹಗಳನ್ನು ಹತ್ತಿರದ ಈಜುಕೊಳಕ್ಕೆ ಎಸೆದಿದ್ದನು. ಆರಂಭದಲ್ಲಿ ಅವರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ಪೊಲೀಸರ ತನಿಖೆಯಿಂದ ಇದು ಆಕಸ್ಮಿಕ ಸಾವಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ಕೊಲೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: ವಿಕೃತ ಕಾಮಿಯ ಅಟ್ಟಹಾಸ: ‘ನನಗೆ ಎಚ್ಐವಿ ಇದೆ’ ಎಂದಿದ್ದಕ್ಕೆ ಮಹಿಳೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!
ಇನ್ನು ಫರ್ಹತ್ ಅವರ ಪತಿ ಅಜರುದ್ದೀನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಅವರ ಪತ್ನಿ ಮತ್ತು ಪುತ್ರಿಯರುಕೊಳಕ್ಕೆ ಜಾರಿಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರಿಗೆ ಬಂದ ಅನುಮಾನದಿಂದ ಹಾಗೂ ಪತಿ ಅಜರುದ್ದೀನ್ ನೀಡಿರುವ ಹೇಳಿಕೆಯೂ ಈ ಪ್ರಕರಣಕ್ಕೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತನಿಖೆ ನಡೆಸಿದಾಗ, ಇದು ಕೊಲೆ ಎಂದು ಸಾಬೀತಾಗಿದೆ. ಇನ್ನು ಫರ್ಹತ್ ತಂದೆ ನೀಡಿದ ದೂರು ಕೂಡ ಇದಕ್ಕೆ ಮತ್ತಷ್ಟು ಬಲವನ್ನು ನೀಡಿತ್ತು. ಕಳೆದ ಕೆಲವು ದಿನಗಳಿಂದ ತಮ್ಮ ಮಗಳು ಮತ್ತು ಅಳಿಯನ ನಡುವೆ ಮಕ್ಕಳ ಬಗ್ಗೆ ಮತ್ತು ಫರ್ಹತ್ ಗರ್ಭಧಾರಣೆಯ ಬಗ್ಗೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಆರೋಪಿಸಿ ಫರ್ಹತ್ ಅವರ ತಂದೆ ಅಲಿ ಪೊಲೀಸರಿಗೆ ದೂರು ನೀಡಿದ್ದರು. ಅಜರುದ್ದೀನ್ ಅವರಿಗೆ ಮತ್ತೊಂದು ಹೆಣ್ಣು ಮಗು ಬೇಡವಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಫರ್ಹತ್ಗೆ ಒತ್ತಾಯಿಸುತ್ತಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ