ಕೊರೊನಾ-ಕೊವಿಡ್​ 19 ಸ್ಪೆಲ್ಲಿಂಗ್ ಬದಲಿಸಿದರೆ ಸೋಂಕು ನಿರ್ಮೂಲನ ಖಚಿತ; ವೈರಲ್ ಆಗುತ್ತಿದೆ ಸಂಖ್ಯಾಶಾಸ್ತ್ರಜ್ಞನ ಜಾಹೀರಾತು

|

Updated on: May 09, 2021 | 12:07 PM

ಎಸ್​.ವಿ.ಆನಂದ್​ರಾವ್ ಜಾಹೀರಾತಿನ ಕೊನೆಯಲ್ಲಿ ತಮ್ಮ ಫೋನ್​ ನಂಬರ್​ ಕೂಡ ನಮೂದಿಸಿದ್ದು, ಆರೋಗ್ಯ, ಸಂಪತ್ತು, ಮದುವೆ ಸೇರಿ ಯಾವುದೇ ಸಮಸ್ಯೆಯಿದ್ದರೂ ಕರೆ ಮಾಡಬಹುದು ಎಂದೂ ಹೇಳಿಕೊಂಡಿದ್ದಾರೆ.

ಕೊರೊನಾ-ಕೊವಿಡ್​ 19 ಸ್ಪೆಲ್ಲಿಂಗ್ ಬದಲಿಸಿದರೆ ಸೋಂಕು ನಿರ್ಮೂಲನ ಖಚಿತ; ವೈರಲ್ ಆಗುತ್ತಿದೆ ಸಂಖ್ಯಾಶಾಸ್ತ್ರಜ್ಞನ ಜಾಹೀರಾತು
ಜಾಹೀರಾತಿನ ಬ್ಯಾನರ್​
Follow us on

ಎಂತೆಂಥಾ ಪ್ರಯತ್ನಗಳನ್ನು ಮಾಡಿದರೂ ಕೊರೊನಾ ನಿರ್ಮೂಲನ ಆಗುತ್ತಿಲ್ಲ. ನಿರ್ಮೂಲನ ಬಿಡಿ.. ನಿಯಂತ್ರಣವೂ ದೊಡ್ಡ ಕಷ್ಟವಾಗಿದೆ. ಔಷಧಿ, ಲಸಿಕೆ, ಕರ್ಫ್ಯೂ, ಲಾಕ್​ಡೌನ್​ ಏನೇ ಇದ್ದರೂ, ಏನೆಲ್ಲ ಪ್ರಯತ್ನ ಮಾಡಿದರೂ ಸೋಂಕಿತರ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿದೆ.
ಹೀಗಿರುವಾಗ ವ್ಯಕ್ತಿಯೊಬ್ಬ ಒಂದು ಬ್ಯಾನರ್​​ನಲ್ಲಿ ವಿಚಿತ್ರವಾದ ಸಂದೇಶ ಕೊಟ್ಟಿದ್ದಾರೆ. ಈ ಬ್ಯಾನರ್​ನ ಚಿತ್ರವೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇದೊಂದು ಜಾಹೀರಾತು ಆಗಿದ್ದು, ಎಲ್ಲರೂ ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಇದರಲ್ಲಿ ನೀವು Corona ಮತ್ತು Covid 19 ಶಬ್ದದ ಸ್ಪೆಲ್ಲಿಂಗ್ ಬೇರೆ ಇರುವುದನ್ನು ಗಮನಿಸಬಹುದು.

ಈ ವ್ಯಕ್ತಿ ಹೇಳಲು ಹೊರಟಿದ್ದೂ ಅದನ್ನೇ ಆಗಿದೆ. ನೀವು Corona ಎಂದು ಬರೆಯುವ ಬದಲು CARONAA ಎಂದೂ, Covid 19 ಎಂದು ಬರೆಯುವ ಬದಲು COVVIYD-19 ಎಂದು ಒಂದು ಬ್ಯಾನರ್​​ ಮೇಲೆ ಬರೆಸಿ ಸಾರ್ವಜನಿಕ ಸ್ಥಳದಲ್ಲಿ ಕಟ್ಟಿ. ಅಥವಾ ಮನೆ ಬಾಗಿಲು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಹೀಗೆ ಸ್ಪೆಲ್ಲಿಂಗ್​ (ಕಾಗುಣಿತ) ಬರೆಯಿರಿ. ನೋಡುತ್ತಿರಿ ವಿಶ್ವದಿಂದಲೇ ಕೊರೊನಾ ಮಾಯವಾಗುತ್ತದೆ ಎಂದು ಬರೆದಿದ್ದಾರೆ. ಇದು ಖಂಡಿತವಾಗಿಯೂ ಸತ್ಯ..ಸಂಖ್ಯಾಶಾಸ್ತ್ರಕ್ಕೆ ಅಷ್ಟು ಬಲವಿದೆ ಎಂದು ಹೇಳಿದ್ದಾರೆ.

ಈ ಜಾಹೀರಾತು ರಚಿಸಿದವರು ಸ್ಟೆನೋಗ್ರಾಫರ್​ ಎಸ್​.ವಿ.ಆನಂದ್​ರಾವ್. ಸಂಖ್ಯಾಶಾಸ್ತ್ರದಲ್ಲಿ ಸಿಕ್ಕಾಪಟೆ ನಂಬಿಕೆ ಹೊಂದಿರುವ ಇವರು, ತಮ್ಮ ಹೆಸರಿಗೆ ಹೆಚ್ಚುವರಿಯಾಗಿ ಎನ್​ಎಸ್​ ಮತ್ತು ಡಿಎಸ್​ ಸೇರಿಸಿಕೊಂಡಿದ್ದಾರೆ.   ಮೂಲತಃ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯವರು ಎಂಬುದು ಅವರು ಹಾಕಿದ ಜಾಹೀರಾತಿನಿಂದ ಗೊತ್ತಾಗುತ್ತದೆ. ಜಾಹೀರಾತಿನ ಕೊನೆಯಲ್ಲಿ ತಮ್ಮ ಫೋನ್​ ನಂಬರ್​ ಕೂಡ ನಮೂದಿಸಿದ್ದು, ಆರೋಗ್ಯ, ಸಂಪತ್ತು, ಮದುವೆ ಸೇರಿ ಯಾವುದೇ ಸಮಸ್ಯೆಯಿದ್ದರೂ ಕರೆ ಮಾಡಬಹುದು ಎಂದೂ ಹೇಳಿಕೊಂಡಿದ್ದಾರೆ.

ಇವರು ಟ್ವೀಟ್ ಮಾಡಿರುವ ಬ್ಯಾನರ್​ ಚಿತ್ರ ಸಿಕ್ಕಾಪಟೆ ವೈರಲ್ ಆಗಿದೆ. ಹಾಗೇ ಕಾಮೆಂಟ್​ಗಳನ್ನೂ ಮಾಡಿದ್ದಾರೆ. ನಾವು ಕೊರೊನಾ, ಕೊವಿಡ್​ 19 ಶಬ್ದಗಳ ಕಾಗುಣಿತ ಬದಲಿಸುವ ಬದಲು ದೇಶದ ಎಲ್ಲ ರಾಜಕಾರಣಿಗಳ ಹೆಸರಿನ ಸ್ಪೆಲ್ಲಿಂಗ್ ಬದಲಿಸೋಣ. ಇದು ದೇಶಕ್ಕೆ ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬರು, ಕೊರೊನಾ ವಿಶ್ವದಿಂದ ನಿರ್ಮೂಲನ ಆಗುತ್ತದೆ ಎಂದರೆ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಹೆತ್ತವ್ವಳ ನೆನಪಿಗೊಂದು ದೇವಾಲಯ; ತಾಯಿಯ ಮೂರ್ತಿ ಇಟ್ಟು ಪೂಜೆ ಸಲ್ಲಿಸುತ್ತಿರುವ ಮಕ್ಕಳು

ಚಿಕಿತ್ಸೆ ಫಲಿಸದೇ ತುಮಕೂರು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್​ ಕೊರೊನಾ ಸೋಂಕಿಗೆ ಬಲಿ