Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಧರ್ಮದ ಘೋಷಣೆ ಕೂಗುತ್ತ, ಗೋರಖನಾಥ ದೇಗುಲಕ್ಕೆ ನುಗ್ಗಲು ಹರಿತ ಆಯುಧ ಹಿಡಿದು ಬಂದ ವ್ಯಕ್ತಿ; ಕಲ್ಲು ಹೊಡೆದ ಸ್ಥಳೀಯರು

ಘಟನೆಯ ಹಿಂದೆ ಯಾರ ಕೈವಾಡ ಬೇಕಾದರೂ ಇರಬಹುದು. ಸದ್ಯ ಪ್ರಕರಣದ ತನಿಖೆಯನ್ನು ಭಯೋತ್ಪಾದಕ ನಿಗ್ರಹ ದಳಕ್ಕೆ ವಹಿಸಲಾಗಿದೆ. ಉಗ್ರ ದಾಳಿ ಆಯಾಮದಲ್ಲೂ ಇದನ್ನು ತನಿಖೆ ನಡೆಸುವ ಅಗತ್ಯವಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸ್ವಧರ್ಮದ ಘೋಷಣೆ ಕೂಗುತ್ತ, ಗೋರಖನಾಥ ದೇಗುಲಕ್ಕೆ ನುಗ್ಗಲು ಹರಿತ ಆಯುಧ ಹಿಡಿದು ಬಂದ ವ್ಯಕ್ತಿ; ಕಲ್ಲು ಹೊಡೆದ ಸ್ಥಳೀಯರು
ಗೋರಖ್​ಪುರದಲ್ಲಿ ನಡೆದ ಘಟನೆ
Follow us
TV9 Web
| Updated By: Lakshmi Hegde

Updated on:Apr 13, 2022 | 2:46 PM

ಲಖನೌ: ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಹರಿತವಾದ ಆಯುಧ ಹಿಡಿದು, ಗೋರಖನಾಥ  ದೇವಾಲಯದೊಳಗೆ ನುಗ್ಗಲು ಯತ್ನಿಸಿದ್ದಲ್ಲದೆ, ತಡೆಯಲು ಯತ್ನಿಸಿದ ಪೊಲೀಸರ ಮೇಲೆ ದಾಳಿಯನ್ನೂ ಮಾಡಿದ್ದಾನೆ. ಈತನ ಹೆಸರು ಅಹ್ಮದ್​ ಮುರ್ತಾಜಾ ಎಂದಾಗಿದ್ದು 29ವರ್ಷದವ. ಭಾನುವಾರ ಸಂಜೆ 7ಗಂಟೆ ಹೊತ್ತಿಗೆ ಗೋರಖ್​​ಪುರ ದೇವಾಲಯದ ಒಳಗೆ ನುಗ್ಗುವಾಗ ತನ್ನ ಧರ್ಮಕ್ಕೆ ಸಂಬಂಧಪಟ್ಟ ಘೋಷಣೆಗಳನ್ನು ಕೂಗಿದ್ದಾನೆ. ಬಳಿಕ ಸುತ್ತಲೂ ಇದ್ದ ಜನರೇ ಆತನನ್ನು ತಡೆದು, ಓಡಿಸಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಈತ ಕೈಯಲ್ಲಿ ಕತ್ತಿಯಂಥ ಹರಿತವಾದ ಆಯುಧ ಹಿಡಿದು, ದೊಡ್ಡದಾಗಿ ಕೂಗುತ್ತ ದೇಗುಲದೆಡೆಗೆ ಬರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಇನ್ನು ಅಹ್ಮದ್ ಮುರ್ತಾಜಾ ದೇವಸ್ಥಾನಕ್ಕೆ ಬರುತ್ತಿದ್ದಂತೆ ಹಲವರು ಆತನೆಡೆಗೆ ಕಲ್ಲು ಎಸೆದಿದ್ದಾರೆ. ಪೊಲೀಸರು ಪ್ರಕರಣವನ್ನೂ ದಾಖಲು ಮಾಡಿಕೊಂಡಿದ್ದಾರೆ. ಇವನು ಗೋರಖ್​ಪುರ ನಿವಾಸಿಯಾಗಿದ್ದು, ಪ್ರತಿಷ್ಠಿತ ಬಾಂಬೆ ಐಐಟಿ ಕಾಲೇಜಿನಲ್ಲಿ 2015ರಲ್ಲಿ ಪದವಿ ಪಡೆದವನು. ಘಟನೆ ಬಗ್ಗೆ ಮಾಹಿತಿ ನೀಡಿದ ಗೋರಖ್​ಪುರ ಎಡಿಜಿಪಿ ಅಖಿಲ್ ಕುಮಾರ್​,  ದೇಗುಲದ ಗೇಟ್​ ಬಳಿ ಮುರ್ತಾಜಾಗೆ ಸೇರಿದ ಬ್ಯಾಗ್​ವೊಂದು ಸಿಕ್ಕಿದ್ದು, ಅದನ್ನು ವಶಪಡಿಸಿಕೊಂಡಿದ್ದೇವೆ. ಅದರಲ್ಲಿ ಲ್ಯಾಪ್​ಟಾಪ್​, ಪೆನ್​ಡ್ರೈವ್​, ಹರಿತವಾದ ಚಿಕ್ಕ ಆಯುಧ, ಒಂದು ಟಿಕೆಟ್​ ಕೂಡ ಇತ್ತು. ಅದರೊಂದಿಗೆ ಮೊಬೈಲ್​, ಪಾನ್ ಕಾರ್ಡ್​, ಆಧಾರ್​ಕಾರ್ಡ್​ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಈ ಘಟನೆಯ ಹಿಂದೆ ಯಾರ ಕೈವಾಡ ಬೇಕಾದರೂ ಇರಬಹುದು. ಸದ್ಯ ಪ್ರಕರಣದ ತನಿಖೆಯನ್ನು ಭಯೋತ್ಪಾದಕ ನಿಗ್ರಹ ದಳಕ್ಕೆ ವಹಿಸಲಾಗಿದೆ. ಉಗ್ರ ದಾಳಿ ಆಯಾಮದಲ್ಲೂ ಇದನ್ನು ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿರುವ ಪೊಲೀಸ್ ಅಧಿಕಾರಿ, ಮುರ್ತಾಜಾನ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುರ್ತಾಜಾನಿಗೆ ವಿವಾಹವಾಗಿತ್ತು. ಆದರೆ ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯ ವಿಪರೀತವಾದ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದೆ ಆತನ ಪತ್ನಿ ಬಿಟ್ಟು ಹೋಗಿದ್ದಾಳೆ. ಮುಂಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ಅದನ್ನೂ ಕಳೆದುಕೊಂಡ. ಆಗ ತನ್ನ ಊರಾದ ಗೋರಖ್​ಪುರಕ್ಕೆ ಬಂದು ಇಲ್ಲಿಯೇ ನೆಲೆಸಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಗೋರಖ್​ಪುರ ಯೋಗಿ ತವರು ! ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಗೋರಖ್​ಪುರ ಮಠದ ಮಹಾಂತ ಎಂದೇ ಕರೆಸಿಕೊಂಡಿದ್ದಾರೆ. ಇದು ಉತ್ತರ ಪ್ರದೇಶದ ಪ್ರಮುಖ, ಹೈಪ್ರೊಫೈಲ್​ ದೇಗುಲಗಳಲ್ಲಿ ಒಂದು. ಹಾಗೇ ಯೋಗಿ ಆದಿತ್ಯನಾಥ್​ ಗೋರಖ್​ಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. ಹಾಗೇ, ಈ ಬಾರಿ ಅಲ್ಲಿನ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಫೈನಾನ್ಸ್ ಕಂಪನಿಗೆ ನಾಮ ಹಾಕಿ ಎಸ್ಕೇಪಾಗಿದ್ದ ಮ್ಯಾನೇಜರ್ ಅರೆಸ್ಟ್; ಸವಾಲಾಗಿದ್ದ ದೋಖಾ ಪ್ರಕರಣ ಭೇದಿಸಿದ ಮದ್ದೂರು ಪೊಲೀಸ್

Published On - 3:35 pm, Mon, 4 April 22