ಉತ್ತರ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್

|

Updated on: Jul 10, 2023 | 6:50 PM

ಪಂಜಾಬ್, ಉತ್ತರ ಹರ್ಯಾಣ, ಚಂಡೀಗಢ ಮತ್ತು ರಾಜಸ್ಥಾನದಲ್ಲಿ ಇಂದು ಕೂಡ ಭಾರೀ ಮಳೆ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರಾಖಂಡದಲ್ಲಿ ಈ ತಿಂಗಳ 12 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ

ಉತ್ತರ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್
ಹಿಮಾಚಲ ಪ್ರದೇಶದಲ್ಲಿ ಮಳೆ
Follow us on

ಭಾರತೀಯ ಹವಾಮಾನ ಇಲಾಖೆ (India Meteorological Department) ಹಿಮಾಚಲ ಪ್ರದೇಶದಲ್ಲಿ (Himachal Pradesh) ರೆಡ್ ಅಲರ್ಟ್ ಘೋಷಿಸಿದ್ದು, ರಾಜ್ಯದಲ್ಲಿ ಇಂದು (ಸೋಮವಾರ) ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ. ಜಲಾವೃತ ಪ್ರದೇಶದಿಂದ ಮತ್ತು ದುರ್ಬಲವಾಗಿರುವ ಕಟ್ಟಡಗಳಿಂದ ದೂರವಿರಲು ಜನರಿಗೆ ಸೂಚಿಸಲಾಗಿದೆ. ಪಂಜಾಬ್ (Punjab), ಉತ್ತರ ಹರ್ಯಾಣ, ಚಂಡೀಗಢ ಮತ್ತು ರಾಜಸ್ಥಾನದಲ್ಲಿ ಇಂದು ಕೂಡ ಭಾರೀ ಮಳೆ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರಾಖಂಡದಲ್ಲಿ ಈ ತಿಂಗಳ 12 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೋಮವಾರ ಮತ್ತು ಮಂಗಳವಾರ ಮೇಘಾಲಯದಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಮಂಗಳವಾರ ಮತ್ತು ನಂತರದ ದಿನದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ಏತನ್ಮಧ್ಯೆ, ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಪಡೆಯ 39 ತಂಡಗಳನ್ನು ನಿಯೋಜಿಸಲಾಗಿದೆ. ಎನ್‌ಡಿಆರ್‌ಎಫ್‌ನ 14 ತಂಡಗಳು ಪಂಜಾಬ್‌ನಲ್ಲಿ, 12 ಹಿಮಾಚಲ ಪ್ರದೇಶದಲ್ಲಿ, ಎಂಟು ಉತ್ತರಾಖಂಡದಲ್ಲಿ ಮತ್ತು ಐದು ತಂಡಗಳು ಹರ್ಯಾಣದಲ್ಲಿವೆ.

ಹಿಮಾಚಲ ಪ್ರದೇಶ ಸಿಎಂಗೆ ಮೋದಿ ಕರೆ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ 17 ಮಂದಿ ಸಾವಿಗೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ ದೂರವಾಣಿ ಕರೆ ಮಾಡಿ ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಉಂಟಾದ ಜೀವ ಮತ್ತು ಆಸ್ತಿ ಹಾನಿಯ ಬಗ್ಗೆ ವಿಚಾರಿಸಿದರು. ಪ್ರವಾಹ ಮತ್ತು ಭಾರೀ ಮಳೆಯಿಂದ ರಾಜ್ಯವು ತೀವ್ರವಾಗಿ ಹಾನಿಗೊಳಗಾಗಿದೆ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದು, ಈ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು ಕೇಂದ್ರದಿಂದ ನೆರವು ಕೋರಿದ್ದಾರೆ,

ಹಿಮಾಚಲ ಪ್ರದೇಶ 50 ವರ್ಷಗಳಲ್ಲಿ ಇಷ್ಟೊಂದು ಮಳೆ ಕಂಡಿರಲಿಲ್ಲ: ಸಿಎಂ ಸುಖವಿಂದರ್ ಸಿಂಗ್ ಸುಖು

ಹಿಮಾಚಲ ಪ್ರದೇಶವು ಕಳೆದ 50 ವರ್ಷಗಳಲ್ಲಿ ಅಂತಹ “ವ್ಯಾಪಕವಾದ ಭಾರೀ ಮಳೆ” ಯನ್ನು ಕಂಡಿಲ್ಲ.ಈ ಮಾನ್ಸೂನ್ ಋತುವಿನಲ್ಲಿ ಇದುವರೆಗೆ ರಾಜ್ಯವು ಸುಮಾರು 3,000 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸೋಮವಾರ ಹೇಳಿದ್ದಾರೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸುಮಾರು 17 ಜನರು ಸಾವಿಗೀಡಾಗಿದ್ದಾರೆ. ಅದೇ ವೇಳೆ ಚಂದ್ರತಾಲ್ ಮತ್ತು ಲಾಹೌಲ್ ಮತ್ತು ಸ್ಪಿತಿಯಲ್ಲಿ ಪಾಗಲ್ ಮತ್ತು ತೇಲ್ಗಿ ನಾಲಾ ನಡುವೆ ಸಿಲುಕಿರುವ 400 ಪ್ರವಾಸಿಗರು ಮತ್ತು ಸ್ಥಳೀಯರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ,

ಉತ್ತರಾಖಂಡದಲ್ಲಿ ಮುಂದುವರಿದ ಮಳೆ

ಸೋಮವಾರ ನಿರಂತರ ಮಳೆ ಮತ್ತು ಭೂಕುಸಿತದಿಂದಾಗಿ ಉತ್ತರಾಖಂಡದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ಹಲವು ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಗಂಟೆಗಳ ನಂತರ ಹೆದ್ದಾರಿಯಲ್ಲಿ ಸಂಚಾರವನ್ನು ಪುನಃಸ್ಥಾಪಿಸಲಾಯಿತು, ಇನ್ನೂ ಮುಚ್ಚಿರುವ ಇತರ ರಸ್ತೆಗಳನ್ನು ತೆರೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಹರ್ಯಾಣದಲ್ಲಿ ಶಾಲೆಗೆ ರಜೆ

ಹರ್ಯಾಣ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಪಂಚಕುಲದ ಎಲ್ಲಾ ಶಾಲೆಗಳನ್ನು ಜುಲೈ 11 ಮತ್ತು 12 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಪಂಜಾಬ್: ಖಾಸಗಿ ವಿಶ್ವವಿದ್ಯಾಲಯದಿಂದ 900 ಕ್ಕೂ ಹೆಚ್ಚು ಜನರ ಸ್ಥಳಾಂತರ

ಪಂಜಾಬ್‌ನ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಭಾರೀ ಮಳೆಯಿಂದಾಗಿ ನೀರು ತುಂಬಿದ್ದು, ಅಲ್ಲಿದ್ದ 910 ವಿದ್ಯಾರ್ಥಿಗಳು ಮತ್ತು 50 ಮಂದಿಯನ್ನು ಸೇನೆ ರಕ್ಷಿಸಿದೆ ಎಂದು ಸೋಮವಾರ ಹೇಳಿಕೆ ತಿಳಿಸಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿನ ನಾಗರಿಕ ಆಡಳಿತವು ಈ ಹಿಂದೆ ಸೇನೆಯಿಂದ ರಕ್ಷಣಾ ಕಾರ್ಯಾಚರಣೆಗೆ ಸಹಾಯವನ್ನು ಕೋರಿತ್ತು, ಇದು ಎರಡು ರಾಜ್ಯಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಡಳಿತಕ್ಕೆ ಸಹಾಯ ಮಾಡಲು ಸೇನೆಯ ಪಶ್ಚಿಮ ಕಮಾಂಡ್‌ನ ಪ್ರವಾಹ ಪರಿಹಾರ ತಂಡಗಳನ್ನು ಕಳುಹಿಸಿದೆ.

ಇದನ್ನೂ ಓದಿMonsoon 2023: ದೆಹಲಿ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರಿ ಮಳೆ, ಭೂಕುಸಿತ, ಪ್ರವಾಹ, ಮುಂದಿನ 2 ದಿನ ಇದೇ ಪರಿಸ್ಥಿತಿ

ದೆಹಲಿಯಲ್ಲಿ ರಸ್ತೆ ಜಲಾವೃತ, ಧರೆಗುರುಳಿದ ಮರ

ಭಾರೀ ಮಳೆಗೆ ದೆಹಲಿಯ 13 ಸ್ಥಳಗಳಲ್ಲಿ ಮರಗಳು ಧರೆಗುರುಳಿವೆ. ಇದರಿಂದ ನಗರದ 9 ಕಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಿನ್ನೆ, 80 ಸ್ಥಳಗಳಲ್ಲಿ ಜಲಾವೃತ ವರದಿಯಾಗಿದೆ ಎಂದು ದೆಹಲಿ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಸುರೇಂದರ್ ಸಿಂಗ್ ಯಾದವ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ