ಮುಂದಿನ ವಾರ ತಾಲಿಬಾನ್ ಜೊತೆ ಮಾತುಕತೆಗೆ ರಷ್ಯಾದ ಆಹ್ವಾನ ಸ್ವೀಕರಿಸಿದ ಭಾರತ

ಭಾರತೀಯ ಭಾಗವಹಿಸುವಿಕೆಯನ್ನು ದೃಢೀಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ "ಅಕ್ಟೋಬರ್ 20 ರಂದು ಅಫ್ಘಾನಿಸ್ತಾನದ ಬಗ್ಗೆ ಮಾಸ್ಕೊದಲ್ಲಿ ನಡೆಯುವ ಸಭೆಗೆ ನಮಗೆ ಆಹ್ವಾನ ಬಂದಿದೆ. ನಾವು ಅದರಲ್ಲಿ ಭಾಗವಹಿಸುತ್ತೇವೆ ಎಂದು ಗುರುವಾರ ಹೇಳಿದ್ದಾರೆ.

ಮುಂದಿನ ವಾರ ತಾಲಿಬಾನ್ ಜೊತೆ ಮಾತುಕತೆಗೆ ರಷ್ಯಾದ ಆಹ್ವಾನ ಸ್ವೀಕರಿಸಿದ ಭಾರತ
ಮೋದಿ-ಪುಟಿನ್
Edited By: ರಶ್ಮಿ ಕಲ್ಲಕಟ್ಟ

Updated on: Oct 15, 2021 | 1:00 PM

ದೆಹಲಿ: ಅಕ್ಟೋಬರ್ 20 ರಂದು ಮಾಸ್ಕೊದಲ್ಲಿ(Moscow)  ನಡೆಯಲಿರುವ ಅಫ್ಘಾನಿಸ್ತಾನ ಮಾತುಕತೆಯಲ್ಲಿ ಸೇರಲು ರಷ್ಯಾದ ಆಹ್ವಾನವನ್ನು ಭಾರತ ಸ್ವೀಕರಿಸಿದೆ. ಎರಡು ತಿಂಗಳ ಹಿಂದೆ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್‌ನ್ನು ಮಾತುಕತೆಗೆ ಆಹ್ವಾನಿಸಲಾಗಿದೆ. ಅಲ್ಲಿ ಆಡಳಿತ ಬದಲಾದ ನಂತರ ಭಾರತ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಿಸಿದ್ದು, ಈ ಮಾತುಕತೆಯಲ್ಲಿ ತಾಲಿಬಾನ್ ಭಾರತದೊಂದಿಗೆ ಮುಖಾಮುಖಿಯಾಗಲಿದೆ. ಭಾರತೀಯ ಭಾಗವಹಿಸುವಿಕೆಯನ್ನು ದೃಢೀಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) “ಅಕ್ಟೋಬರ್ 20 ರಂದು ಅಫ್ಘಾನಿಸ್ತಾನದ ಬಗ್ಗೆ ಮಾಸ್ಕೊದಲ್ಲಿ ನಡೆಯುವ ಸಭೆಗೆ ನಮಗೆ ಆಹ್ವಾನ ಬಂದಿದೆ. ನಾವು ಅದರಲ್ಲಿ ಭಾಗವಹಿಸುತ್ತೇವೆ ಎಂದು ಗುರುವಾರ ಹೇಳಿದ್ದಾರೆ.

ಎಂಇಎ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಸಭೆಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.

ಕಳೆದ ವಾರ ಅಫ್ಘಾನಿಸ್ತಾನದ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶೇಷ ಪ್ರತಿನಿಧಿ ಜಮೀರ್ ಕಾಬುಲೋವ್, ರಷ್ಯಾ ಅಕ್ಟೋಬರ್ 20 ರಂದು ಅಫ್ಘಾನಿಸ್ತಾನದ ಕುರಿತು ಅಂತರಾಷ್ಟ್ರೀಯ ಮಾತುಕತೆಗೆ ತಾಲಿಬಾನ್ ಪ್ರತಿನಿಧಿಗಳನ್ನು ಆಹ್ವಾನಿಸಿದೆ ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿನ ಬದಲಾವಣೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮಾನವೀಯ ಅನಾಹುತಗಳನ್ನು ತಪ್ಪಿಸಲು ಸಹಾಯ ಮಾಡುವುದಕ್ಕಾಗಿ ಅಕ್ಟೋಬರ್ 12 ರಂದು ನಡೆದ ಜಿ 20 ಶೃಂಗಸಭೆಯ ಬೆನ್ನಲ್ಲೇ ಈ ಮಾತುಕತೆ ನಡೆಯಲಿದೆ.

ಕತಾರ್‌ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ಆಗಸ್ಟ್ ಅಂತ್ಯದ ವೇಳೆಗೆ ದೋಹಾದಲ್ಲಿ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಿದ್ದರು. ಮಾಸ್ಕೊದಲ್ಲಿ ನಡೆಯಲಿರುವ ಸಭೆಯು ಭಾರತೀಯರಿಗೆ ಎರಡನೆಯ ಸಭೆಯಾಗಿದೆ.

ಆಗಸ್ಟ್​​ನಲ್ಲಿ ಕಾಬೂಲ್ ಅಧಿಕಾರ ಪತನದ ನಂತರ ಭಾರತವು ಹೊಸ ತಾಲಿಬಾನ್ ಆಡಳಿತದಲ್ಲಿ ಒಳಗೊಳ್ಳುವಿಕೆಯ ಕೊರತೆ, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿತು ಮತ್ತು ಅಫ್ಘಾನಿಸ್ತಾನದ ಭಯೋತ್ಪಾದನೆಯ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಈ ವರ್ಷದ ಮಾರ್ಚ್‌ನಲ್ಲಿ ಮಾಸ್ಕೊ ಅಫ್ಘಾನಿಸ್ತಾನದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತು. ಇದರಲ್ಲಿ ರಷ್ಯಾ, ಅಮೆರಿಕ, ಚೀನಾ ಮತ್ತು ಪಾಕಿಸ್ತಾನ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಆಗ ಯುದ್ಧ ಮಾಡುತ್ತಿದ್ದ ಅಫ್ಘಾನ್ ಪಕ್ಷಗಳು ಶಾಂತಿ ಒಪ್ಪಂದಕ್ಕೆ ಬರುವಂತೆ ಕರೆ ನೀಡಿದವು.

ಈ ಹೇಳಿಕೆಯು  ದಾಳಿ ಮಾಡದಂತೆ ತಾಲಿಬಾನ್‌ಗಳನ್ನು ಕೇಳಿತು. ಆದರೆ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು 20 ವರ್ಷಗಳ ನಂತರ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳಲು ಆರಂಭಿಸಿದಾಗ, ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿತು. ಇದು ಅಶ್ರಫ್ ಘನಿ ಸರ್ಕಾರದ ಪತನಕ್ಕೆ ಕಾರಣವಾಯಿತು.
ಮಾಸ್ಕೊ ತಾಲಿಬಾನ್ ಅನ್ನು ತೊಡಗಿಸಿಕೊಳ್ಳಲು ಮುಂದಾಗಿದೆ. ಆದರೆ ರಷ್ಯಾದಲ್ಲಿ “ಭಯೋತ್ಪಾದಕ” ಸಂಘಟನೆ ಎಂದು ನಿಷೇಧಿಸಲ್ಪಟ್ಟ ಗುಂಪಿಗೆ ಮಾನ್ಯತೆ ನೀಡುವುದನ್ನು ನಿಲ್ಲಿಸಿದೆ. ಆಗಸ್ಟ್ 15 ರಂದು ಕಾಬೂಲ್ ಪತನದ ನಂತರ ಇತರ ದೇಶಗಳು ರಾಜತಾಂತ್ರಿಕರನ್ನು ಸ್ಥಳಾಂತರಿಸಿದ್ದರೂ ರಷ್ಯಾ ಅಲ್ಲಿ ರಾಯಭಾರಿ ಕಚೇರಿ ತೆರೆದು ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ:Singhu Border Murder ಸಿಂಘು ಗಡಿಯಲ್ಲಿ ರೈತನ ಬರ್ಬರ ಹತ್ಯೆ, ಕೈ ಕಾಲು ಕತ್ತರಿಸಿ ಬ್ಯಾರಿಕೇಡ್​​ಗೆ ಕಟ್ಟಿಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ 

Web contact

TV9 Kannada

Read More
Follow Us