ಜಹಂಗೀರ್​ಪುರಿಯಲ್ಲಿ ಭಾರತದ ಧ್ವಜ, ಬಾಲಾಜಿ ದೇವರ ವಿಗ್ರಹ ನಾಶ ಮಾಡಿದವರನ್ನು ಬಿಟ್ಟು ನಮ್ಮನ್ನು ಬಂಧಿಸಿದರು: ವಿಎಚ್​​ಪಿ ನಾಯಕನ ಆರೋಪ

ಕತ್ತಿ-ಕಲ್ಲು ಕೈಯಲ್ಲಿ ಹಿಡಿದವರಿಗೆ ಶಿಕ್ಷೆಯಾಗಬೇಕೇ ಹೊರತು ನಮಗಲ್ಲ. ಅಲ್ಲಿ ಸಂಘರ್ಷ ಎಷ್ಟು ಮಿತಿಮೀರಿತ್ತು ಎಂದರೆ ನಮ್ಮ ಜೀವವನ್ನು ಉಳಿಸಿಕೊಳ್ಳಲು ನಾವು ಓಡಿದೆವು ಎಂದು ವಿಶ್ವ ಹಿಂದು ಪರಿಷತ್​ ಮುಖಂಡ ಹೇಳಿದ್ದಾರೆ.

ಜಹಂಗೀರ್​ಪುರಿಯಲ್ಲಿ ಭಾರತದ ಧ್ವಜ, ಬಾಲಾಜಿ ದೇವರ ವಿಗ್ರಹ ನಾಶ ಮಾಡಿದವರನ್ನು ಬಿಟ್ಟು ನಮ್ಮನ್ನು ಬಂಧಿಸಿದರು: ವಿಎಚ್​​ಪಿ ನಾಯಕನ ಆರೋಪ
ಜಹಂಗೀರ್​ಪುರಿ ಚಿತ್ರಣ
Updated By: Lakshmi Hegde

Updated on: Apr 19, 2022 | 4:11 PM

ದೆಹಲಿಯ ಜಹಂಗೀರ್​ಪುರಿಯಲ್ಲಿ ಹನುಮ ಜಯಂತಿಯಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ವಿಶ್ವ ಹಿಂದು ಪರಿಷತ್​ (ವಿಎಚ್​ಪಿ) ನಾಯಕ ಪ್ರೇಮ್​ ಶರ್ಮಾರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಪಡೆದು ಅವರು ಬಿಡುಗಡೆಯಾಗಿದ್ದಾರೆ. ಇವರು ಸ್ಥಳೀಯ ಆಡಳಿತದ ಅನುಮತಿ ಪಡೆಯದೆ ಹನುಮಜಯಂತಿ ಮೆರವಣಿಗೆ ಆಯೋಜಿಸಿದ್ದಾರೆ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ಜಾಮೀನು ಪಡೆದು ಜೈಲಿನಿಂದ ಹೊರಬಿದ್ದ ಬಳಿಕ ಮಾತನಾಡಿದ ಪ್ರೇಮ್​ ಶರ್ಮಾ, ಶನಿವಾರ ಹನುಮಾನ್ ಜಯಂತಿಯಂದು ಶೋಭಾಯಾತ್ರೆ ನಡೆಸಲು ಪೊಲೀಸರಿಂದ ಮೊದಲೇ ಅನುಮತಿ ಪಡೆಯಲಾಗಿತ್ತು. ನಮ್ಮ ಮೆರವಣಿಗೆ ಮೇಲೆ ಕಲ್ಲು ತೂರಾಟ ಇತ್ತು. ಅದು ಹಿಂಸಾಚಾರಕ್ಕೆ ತಿರುಗಿದ್ದಲ್ಲದೆ, ಅದರಲ್ಲಿ ಹಿಂದು ದೇವರ ವಿಗ್ರಹ, ಭಾರತದ ಧ್ವಜವನ್ನೆಲ್ಲ ಹಾಳುಗೆಡವಲಾಯಿತು ಎಂದು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ನಾವು ಮಹೇಂದ್ರ ಪಾರ್ಕ್​ ಮತ್ತು ಜಹಂಗೀರ್​ಪುರಿ ಪೊಲೀಸ್​ ಠಾಣೆಗಳಿಂದ ಅನುಮತಿ ಪಡೆದೇ ಶೋಭಾಯಾತ್ರೆ ಆಯೋಜಿಸಿದ್ದೆವು. ಇಷ್ಟು ವರ್ಷ ಯಾವುದೇ ತೊಂದರೆಯಿಲ್ಲದೆ ಮೆರವಣಿಗೆ ನಡೆದಿತ್ತು. ಈ ಬಾರಿಯೂ ಕೂಡ ಸುಮಾರು 400 ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಅಷ್ಟೇ ಅಲ್ಲ, ಮೆರವಣಿಗೆ ವೇಳೆ ಹಿಂದೂ ಧಾರ್ಮಿಕ ಗೀತೆಗಳನ್ನು ಹಾಕಲಾಗುತ್ತದೆ, ಇಂತಿಂಥ ಮಾರ್ಗಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂಬಿತ್ಯಾದಿ ವಿವರಗಳನ್ನೂ ಅವರಿಗೆ ನೀಡಿದ್ದೆವು.  ಆದರೆ ನಂತರ ನಾವು ಅನುಮತಿ ಪಡೆಯಲಿಲ್ಲ ಎಂದು ಬಂಧಿಸಲಾಯ್ತು. ಹಾಗೊಮ್ಮೆ ನಾವು ಪೊಲೀಸರ ಅನುಮತಿ ಪಡೆಯದೆ ಇದ್ದಿದ್ದರೆ, ಅದು ಹೇಗೆ 15-20 ಮಂದಿ ಪೊಲೀಸರು, ಅವರ ವಾಹನಗಳು ನಮ್ಮ ಮೆರವಣಿಗೆಯ ಜತೆಗೆ ಇರುತ್ತಿದ್ದವು.  ನಾವು ಲಿಖಿತವಾಗಿಯೇ ಎಲ್ಲವನ್ನೂ ಪೊಲೀಸರಿಗೆ ತಿಳಿಸಿದ್ದೆವು ಮತ್ತು ಅದಕ್ಕೆ ಅವರು ಸಹಿಯನ್ನೂ ಹಾಕಿದ್ದರು ಎಂದು ಶರ್ಮಾ ತಿಳಿಸಿದ್ದಾರೆ.

ನಂತರ ಕಲ್ಲು ತೂರಾಟ ನಡೆಯಿತು. ಮೆರವಣಿಗೆಯಲ್ಲಿ ಇದ್ದ ಬಾಲಾಜಿ ವಿಗ್ರಹವೊಂದನ್ನು ಧ್ವಂಸಗೊಳಿಸಲಾಯಿತು. ಭಾರತದ ಧ್ವಜವನ್ನೂ ಹಾಳು ಮಾಡಿದರು. ಆದರೆ ಹಾಗೆಲ್ಲ ಮಾಡಿದವರನ್ನು ಬಿಟ್ಟು ನಮ್ಮನ್ನು ಬಂಧಿಸಲಾಯಿತು.  ಕತ್ತಿ-ಕಲ್ಲು ಕೈಯಲ್ಲಿ ಹಿಡಿದವರಿಗೆ ಶಿಕ್ಷೆಯಾಗಬೇಕೇ ಹೊರತು ನಮಗಲ್ಲ. ಅಲ್ಲಿ ಸಂಘರ್ಷ ಎಷ್ಟು ಮಿತಿಮೀರಿತ್ತು ಎಂದರೆ ನಮ್ಮ ಜೀವವನ್ನು ಉಳಿಸಿಕೊಳ್ಳಲು ನಾವು ಓಡಿದೆವು ಎಂದೂ ಹೇಳಿದ್ದಾರೆ. ದೆಹಲಿಯ ಜಹಂಗೀರ್​​ಪುರಿಯಲ್ಲಿ ಶನಿವಾರ ಹನುಮಜಯಂತಿ ದಿನದಂದು ಹಿಂದುಗಳು ನಡೆಸಿದ ಶೋಭಾಯಾತ್ರೆ ಮೇಲೆ ಮೊದಲು ಮುಸ್ಲಿಮರು ಕಲ್ಲು ತೂರಾಟ ಮಾಡಿದ್ದಾರೆ. ಅದಾದ ಬಳಿಕ ಹಿಂಸಾಚಾರ ನಡೆದು, ಸುಮಾರು 9 ಪೊಲೀಸರು ಗಾಯಗೊಂಡಿದ್ದಾರೆ.  ಈಗಾಗಲೇ 23 ಜನರನ್ನು ಬಂಧಿಸಿರುವ ಪೊಲೀಸರು ತಪ್ಪಿಸಿಕೊಂಡಿರುವ ಇನ್ನಷ್ಟು ಜನರ ಹುಡುಕಾಟದಲ್ಲಿದ್ದಾರೆ.

ಇದನ್ನೂ ಓದಿ: ಘಟನೆ ಹಿಂದಿರುವ ಷಡ್ಯಂತ್ರ, ಕಾಣದ ಕೈಗಳ ಬಗ್ಗೆ ತನಿಖೆ ಮಾಡಲಾಗುವುದು; ಸಿಎಂ ಬಸವರಾಜ ಬೊಮ್ಮಾಯಿ

Published On - 3:52 pm, Tue, 19 April 22