ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನೌಕಾಪಡೆಯ 8 ಮಾಜಿ ಸಿಬ್ಬಂದಿ ಭೇಟಿ ಮಾಡಿದ ಭಾರತೀಯ ರಾಯಭಾರಿ

ನಮ್ಮ ರಾಯಭಾರಿ ಡಿಸೆಂಬರ್ 3 ರಂದು ಜೈಲಿನಲ್ಲಿರುವ ನೌಕಾಪಡೆಯ ಎಂಟು ಮಾಡಿ ಸಿಬ್ಬಂದಿಗಳನ್ನು ಭೇಟಿಯಾಗಲು ಕಾನ್ಸುಲರ್ ಪ್ರವೇಶವನ್ನು ಪಡೆದರು ಎಂದು  ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನೌಕಾಪಡೆಯ 8 ಮಾಜಿ ಸಿಬ್ಬಂದಿ ಭೇಟಿ ಮಾಡಿದ ಭಾರತೀಯ ರಾಯಭಾರಿ
ಅರಿಂದಮ್ ಬಾಗ್ಚಿ
ರಶ್ಮಿ ಕಲ್ಲಕಟ್ಟ

Updated on: Dec 07, 2023 | 5:47 PM

ದೆಹಲಿ ಡಿಸೆಂಬರ್ 07: ಕತಾರ್​​ನಲ್ಲಿ (Qatar) ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ(Death Row)  ಮಾಜಿ ನೌಕಾಪಡೆಯ ಎಂಟು ಸಿಬ್ಬಂದಿಯನ್ನು ಭಾರತದ ರಾಯಭಾರಿ ಭೇಟಿಯಾಗಿದ್ದಾರೆ ಎಂದು ಸರ್ಕಾರ ಇಂದು (ಗುರುವಾರ) ಮಧ್ಯಾಹ್ನ ತಿಳಿಸಿದೆ. ನಮ್ಮ ರಾಯಭಾರಿ ಡಿಸೆಂಬರ್ 3 ರಂದು ಜೈಲಿನಲ್ಲಿರುವ ಎಲ್ಲಾ ಎಂಟು ಜನರನ್ನು ಭೇಟಿಯಾಗಲು ಕಾನ್ಸುಲರ್ ಪ್ರವೇಶವನ್ನು ಪಡೆದರು ಎಂದು  ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಹೇಳಿದ್ದಾರೆ. ಮರಣದಂಡನೆಯ ವಿರುದ್ಧ ಭಾರತದ ಮೇಲ್ಮನವಿ ಬಗ್ಗೆ ಮಾತನಾಡಿದ ಬಾಗ್ಚಿ, “ಇದುವರೆಗೆ ಎರಡು ವಿಚಾರಣೆಗಳು ನಡೆದಿವೆ (ಇವುಗಳು ನವೆಂಬರ್ 23 ಮತ್ತು ನವೆಂಬರ್ 30 ರಂದು ನಡೆದವು). ನಾವು ವಿಷಯವನ್ನು ಹತ್ತಿರದಿಂದ ಫಾಲೋ ಮಾಡುತ್ತಿದ್ದೇವೆ. ಎಲ್ಲಾ ಕಾನೂನು ಮತ್ತು ದೂತಾವಾಸದ ಸಹಾಯವನ್ನು ನೀಡುತ್ತಿದ್ದೇವೆ. ಇದು ಸೂಕ್ಷ್ಮ ಸಮಸ್ಯೆ. ಆದರೆ ನಾವು ಏನು ಮಾಡಬಹುದೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.

ಮುಂದಿನ ವಿಚಾರಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.  ನಾವಿಕರೊಂದಿಗಿನ ರಾಯಭಾರಿ ಸಭೆಯು ಸಕಾರಾತ್ಮಕ ಹೆಜ್ಜೆಯಾಗಿ ಕಂಡುಬಂದಿದೆ. ಇದು ಎಂಟು ನೌಕಾ ಸಿಬ್ಬಂದಿಯನ್ನು ರಾಯಭಾರಿ ಭೇಟಿ ಮಾಡಿದ್ದರಿಂದ ಈ ಮೊದಲು ಇದ್ದ ಕಳವಳವನ್ನು ಕೊಂಚ ಕಡಿಮೆ ಮಾಡಿದಂತೆ ಕಾಣುತ್ತದೆ ಎಂದು ವರದಿ ಹೇಳಿದೆ.

ಎಂಟು ನಾವಿಕರನ್ನುಕಳೆದ ವರ್ಷ ಆಗಸ್ಟ್‌ನಲ್ಲಿ ಆ ದೇಶದ ಗುಪ್ತಚರ ಸಂಸ್ಥೆಯು ಗೂಢಚಾರಿಕೆಗಾಗಿ ಬಂಧಿಸಿತ್ತು. ಕತಾರ್‌ನ ಎಮಿರ್ ಶೇಖ್ ತಮೀಮ್ ನಿನ್ ಹಮದ್ ಅವರನ್ನು ದುಬೈನಲ್ಲಿ ಸಿಒಪಿ 28 (ಶೃಂಗಸಭೆ) ಹೊತ್ತಲ್ಲಿ ಪ್ರಧಾನಿ ಮೋದಿ ಭೇಟಿಯಾಗಿದ್ದರು. ಅವರು ಒಟ್ಟಾರೆ ದ್ವಿಪಕ್ಷೀಯ ಬಾಂಧವ್ಯ ಹಾಗೂ ಭಾರತೀಯ ಸಮುದಾಯದ ಯೋಗಕ್ಷೇಮದ ಕುರಿತು ಅವರು ಉತ್ತಮ ಸಂವಾದ ನಡೆಸಿದರು ಎಂದು ಬಾಗ್ಚಿ ಹೇಳಿದ್ದಾರೆ


ಎಮಿರ್ ಜೊತೆಗಿನ ಪ್ರಧಾನ ಮಂತ್ರಿಯವರ ಸಂಕ್ಷಿಪ್ತ ಸಭೆಯ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.

ನವೆಂಬರ್ 24 ರಂದು ಕತಾರ್ ನ್ಯಾಯಾಲಯವು ಮರಣದಂಡನೆಯ ವಿರುದ್ಧ ಭಾರತದ ಔಪಚಾರಿಕ ಮೇಲ್ಮನವಿಯನ್ನು ಸ್ವೀಕರಿಸಿತ್ತು. ನೌಕಾಪಡೆಯ ಮಾಜಿ ಸಿಬ್ಬಂದಿಗಳಿಗೆ ಈ ಶಿಕ್ಷೆ ತೀವ್ರ ಆಘಾತವನ್ನುಂಟುಮಾಡಿದೆ” ಎಂದು ಸರ್ಕಾರ ಹೇಳಿತ್ತು.

ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಸಂಜೀವ್ ಗುಪ್ತಾ, ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್ ಮತ್ತು ನಾವಿಕ ರಾಗೇಶ್ ಗೋಪಕುಮಾರ್ ಬಂಧಿತ ನೌಕಾ ಸಿಬ್ಬಂದಿಗಳು.

ಇದನ್ನೂ ಓದಿ: ಮರಣದಂಡನೆ ವಿರುದ್ಧ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಗಳ ಮನವಿ ಸ್ವೀಕರಿಸಿದ ಕತಾರ್: ವರದಿ

ಎಂಟು ಮಾಜಿ ನೌಕಾಪಡೆಯ ಅಧಿಕಾರಿಗಳು ಒಮ್ಮೆ ಭಾರತದ ಪ್ರಮುಖ ಯುದ್ಧನೌಕೆಗಳಿಗೆ ಕಮಾಂಡರ್ ಆಗಿದ್ದವರು. ಇವರನ್ನು ಬಂಧಿಸಿದಾಗ ಅವರು ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸೇವೆಗಳಿಗೆ ಕೆಲಸ ಮಾಡುತ್ತಿದ್ದರು. ದಹ್ರಾ ಕತಾರ್‌ನ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆಯಾಗಿದೆ.

ಕೆಲವು ನಾವಿಕರು ಇಟಾಲಿಯನ್ ತಂತ್ರಜ್ಞಾನದ ಆಧಾರದ ಮೇಲೆ ಸ್ಟೆಲ್ತ್ ಜಲಾಂತರ್ಗಾಮಿ ನೌಕೆಗಳ ಸೂಕ್ಷ್ಮ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಧ್ಯಮ ವರದಿಗಳು ಅವರು ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಎಂಟು ಮಂದಿಯ ಕುಟುಂಬಗಳು ಎನ್‌ಡಿಟಿವಿಯೊಂದಿಗೆ ಮಾತನಾಡಿ ಬೇಹುಗಾರಿಕೆ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Thu, 7 December 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us