Gaganyaan: ಸುರಕ್ಷತೆ ಮುಖ್ಯ; 20 ಪರೀಕ್ಷಾರ್ಥ ಗಗನಯಾನಗಳ ಬಳಿಕ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಭಾರತೀಯರು

|

Updated on: Feb 27, 2024 | 3:16 PM

4 Astronauts for ISRO Gaganyaan: ಇಸ್ರೋದ ಐತಿಹಾಸಿಕ ಗಗನಯಾನ ಯೋಜನೆಗೆ ಆಯ್ಕೆಯಾಗಿರುವ ನಾಲ್ವರು ಆಸ್ಟ್ರೋನಾಟ್​ಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿದ್ದಾರೆ. ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್, ಸೌರಭ್ ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹಾರಲಿರುವ ಗಗನಯಾತ್ರಿಗಳಾಗಿದ್ದಾರೆ. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರವೇ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿರುವುದು. ಈ ಭಾರತ ನಾಲ್ಕನೇ ದೇಶವಾಗಿದೆ.

Gaganyaan: ಸುರಕ್ಷತೆ ಮುಖ್ಯ; 20 ಪರೀಕ್ಷಾರ್ಥ ಗಗನಯಾನಗಳ ಬಳಿಕ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಭಾರತೀಯರು
ಗಗನನೌಕೆ ಸಾಂದರ್ಭಿಕ ಚಿತ್ರ
Follow us on

ತಿರುವನಂತಪುರಂ, ಫೆಬ್ರುವರಿ 27: ಇಸ್ರೋದ ಮಾನವಸಹಿತ ಗಗನಯಾನ ಯೋಜನೆಯಲ್ಲಿ (ISRO Gaganyaan) ಮೂರು ದಿನ ಬಾಹ್ಯಾಕಾಶ ಪ್ರವಾಸ ಹೋಗಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಇವತ್ತು ಮಂಗಳವಾರ ಬಹಿರಂಗಪಡಿಸಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಈ ಹೆಸರುಗಳು ಈ ಮೊದಲೇ ಓಡಾಡಿತ್ತಾದರೂ ಪ್ರಧಾನಿ ಅಧಿಕೃತವಾಗಿ ಇದನ್ನು ಪ್ರಕಟಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್​ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್, ಹಾಗೂ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರೇ ಐತಿಹಾಸಿಕ ಪ್ರಯಾಣ ಮಾಡಲಿರುವ ನಾಲ್ವರು ಯಾತ್ರಿಕರು. ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್​ನಲ್ಲಿ ಪ್ರಧಾನಿಗಳು ಈ ನಾಲ್ವರನ್ನು ಭೇಟಿ ಮಾಡಿ ಮಾತನಾಡಿ ಆ ಬಳಿಕ ಮಾಧ್ಯಮಗಳಿಗೆ ಪರಿಚಯ ಮಾಡಿಸಿದರು.

ಈ ನಾಲ್ವರು ಇಸ್ರೋದ ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ಮೊದಲ ಬ್ಯಾಚ್​ನವರು. ಐದು ವರ್ಷದ ಹಿಂದೆಯೇ ಇವರನ್ನು ಆಯ್ಕೆ ಮಾಡಲಾಗಿತ್ತು. ಸದ್ಯಕ್ಕೆ ಇವರಿಗೆ ಬೆಂಗಳೂರಿನಲ್ಲಿ ವಿವಿಧ ತರಬೇತಿ ನೀಡಲಾಗುತ್ತಿದೆ. ಈ ನಾಲ್ವರಲ್ಲಿ ಮೂವರು ಮಾತ್ರವೇ ಬಾಹ್ಯಾಕಾಶಕ್ಕೆ ಹೋಗಲಿರುವುದು. ಇವರ ಪೈಕಿ ಪ್ರಶಾಂತ್ ನಾಯರ್ ಕೇರಳ ಪಾಲಕ್ಕಾಡ್​ನವರು.. ಅಜಿತ್ ಕೃಷ್ಣನ್ ಕೂಡ ಕೇರಳದವರೆನ್ನಲಾಗಿದೆ.

2025ರ ಅಂತ್ಯಕ್ಕೆ ಬಾಹ್ಯಾಕಾಶ ಹೋಗಲಿರುವ ಆಸ್ಟ್ರೋನಾಟ್​ಗಳು

ಇಸ್ರೋದ ಗಗನಯಾನ ಐತಿಹಾಸಿಕವಾದುದು. ರಷ್ಯಾ, ಅಮೆರಿಕ ಮತ್ತು ಚೀನಾ ಬಿಟ್ಟರೆ ಬೇರಾವ ದೇಶಗಳೂ ಕೂಡ ಮಾನವರನ್ನು ಬಾಹ್ಯಾಕಾಶ ಕಳುಹಿಸಿಲ್ಲ. ರಷ್ಯಾ ಮತ್ತು ಅಮೆರಿಕ ದೇಶಗಳು 20ನೇ ಶತಮಾನದಲ್ಲೇ ಈ ಕಾರ್ಯ ಮಾಡಿದ್ದವು.

ಇದನ್ನೂ ಓದಿ: ಕೇರಳ: ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ಭಾರತದ ರಾಕೇಶ್ ಶರ್ಮಾ 1984ರಲ್ಲಿ ಗಗನಯಾತ್ರೆ ಕೈಗೊಂಡಿದ್ದರು. ಆದರೆ, ಅವರು ಪ್ರಯಾಣಿಸಿದ್ದ ಗಗನನೌಕೆ ಭಾರತದ್ದಲ್ಲ, ರಷ್ಯಾದ್ದು. ಆದರೆ, ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಎಂಬ ದಾಖಲೆ ರಾಕೇಶ್ ಶರ್ಮಾರದ್ದು. ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಮತ್ತು ರಾಜಾ ಚಾರಿ ಅವರೂ ಗಗನಯಾತ್ರೆ ಕೈಗೊಂಡ ಭಾರತೀಯ ಮೂಲದವರು. ಆಂಧ್ರ ಮೂಲದ ಸಿರಿಶಾ ಬಂಡ್ಲ ಎಂಬಾಕೆ 2021ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರಾದರೂ ಭೂ ಕಕ್ಷೆಯ ಮಟ್ಟ ತಲುಪಿರಲಿಲ್ಲ.

ಮೂರು ದಿನದ ಪ್ರವಾಸ ಹೇಗಿರಲಿದೆ…?

ದೊಡ್ಡ ತೂಕದ ವಸ್ತುಗಳನ್ನು ಹೊತ್ತೊಯ್ಯಬಲ್ಲ ಎಲ್​ವಿಎಂ ಎಂಕೆ-3 ಎಂಬ ರಾಕೆಟ್​ನಲ್ಲಿ ಗಗನನೌಕೆಯ ಉಡಾವಣೆ ಆಗಲಿದೆ. ಭೂಮಿಯಿಂದ 400 ಕಿಮೀ ಎತ್ತರದಲ್ಲಿರುವ ಕೆಳ ಕಕ್ಷೆಗೆ ನೌಕೆಯನ್ನು ತಲುಪಿಸಲಾಗುತ್ತದೆ. ಅಲ್ಲಿ ಸಮಾರು ಮೂರು ದಿನಗಳವರೆಗೆ ಗಗನಯಾತ್ರಿಗಳು ಇರಲಿದ್ದಾರೆ. ವರದಿ ಪ್ರಕಾರ, ಈ ಯಾತ್ರೆಗೆ ಆಯ್ಕೆಯಾಗಿರುವ ನಾಲ್ವರಲ್ಲಿ ಮೂವರು ಮಾತ್ರವೇ ಹೋಗುವುದು. ಇಲ್ಲಿ ಸವಾಲಿನ ಕೆಲಸ ಇರುವುದು, ಭೂ ಕಕ್ಷೆ ತಲುಪಿದ ಬಳಿಕ ಈ ಗಗನಯಾತ್ರಿಗಳನ್ನು ವಾಪಸ್ ಭೂಮಿಗೆ ತರುವ ಕಾರ್ಯದಲ್ಲಿ.

ಇದನ್ನೂ ಓದಿ: ಸರ್ಕಾರದಿಂದ ಸಿಎನ್​ಎಪಿ ಅಸ್ತ್ರ; ಟ್ರೂಕಾಲರ್​ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು

ಇದಕ್ಕಾಗಿ, ಇಸ್ರೋ 20 ಪರೀಕ್ಷಾರ್ಥ ಗಗನಯಾನಗಳನ್ನು ಕೈಗೊಳ್ಳಲಿದೆ. ಮನುಷ್ಯರ ಬದಲು ರೋಬೋಗಳನ್ನು ಕೂರಿಸಿ ಕಳುಹಿಸುವ ಮಿಷನ್​ಗಳೂ ಇದರಲ್ಲುಂಟು. ಪ್ರಯಾಣಿಸುವಾಗ ಗಗನನೌಕೆಯ ಪ್ರತಿಯೊಂದು ವ್ಯವಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತಿದೆಯಾ ಎನ್ನುವುದನ್ನು ಇಸ್ರೋ ಖಾತ್ರಿ ಪಡಿಸಿಕೊಳ್ಳಲಿದೆ. 2025ರ ಮಧ್ಯಭಾಗದವರೆಗೂ ಈ ಪರೀಕ್ಷಾರ್ಥ ಗಗನಯಾನಗಳು ನಡೆಯುತ್ತಿರುತ್ತವೆ. 2025ರ ಅಂತ್ಯದಲ್ಲಿ ಮೂವರು ಗಗನಯಾತ್ರಿಗಳನ್ನು ಇಸ್ರೋ ಆಗಸಕ್ಕೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ