ರಾಹುಲ್ ಗಾಂಧಿ ಹೇಳಿದ ‘ಅಳುತ್ತಾ ಕಾಂಗ್ರೆಸ್ ತೊರೆದ ಹಿರಿಯ ನಾಯಕ ನಾನಲ್ಲ’ ಎಂದ ಅಶೋಕ್ ಚವಾಣ್

ಈ ರಾಜ್ಯದ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ತೊರೆದರು. ಅಳುತ್ತಾ ಅವರು ನನ್ನ ತಾಯಿಯಲ್ಲಿ(ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ) ... 'ನನಗೆ ನಾಚಿಕೆಯಾಗುತ್ತಿದೆ. ಈ ಶಕ್ತಿಯ ವಿರುದ್ಧ ಹೋರಾಡುವ ಶಕ್ತಿ ಇಲ್ಲ. ನಾನು ಜೈಲಿಗೆ ಹೋಗಲು ಬಯಸುವುದಿಲ್ಲ ಎಂದು ಅಳುತ್ತಾ ಹೇಳಿದ್ದರು ಎಂದು ಮುಂಬೈನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದು, ಇದಕ್ಕೆ ಬಿಜೆಪಿ ನಾಯಕ ಅಶೋಕ್ ಚವಾಣ್ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ ‘ಅಳುತ್ತಾ ಕಾಂಗ್ರೆಸ್ ತೊರೆದ ಹಿರಿಯ ನಾಯಕ ನಾನಲ್ಲ’ ಎಂದ ಅಶೋಕ್ ಚವಾಣ್
ಅಶೋಕ್ ಚವಾಣ್
ರಶ್ಮಿ ಕಲ್ಲಕಟ್ಟ

Updated on: Mar 18, 2024 | 4:26 PM

ಮುಂಬೈ ಮಾರ್ಚ್ 18: ಮುಂಬೈಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ರಾಹುಲ್ ಗಾಂಧಿ (Rahul Gandhi) ಹಿರಿಯ ನಾಯಕರೊಬ್ಬರು ಅಳುತ್ತಾ ಕಾಂಗ್ರೆಸ್ (Congress) ತೊರೆದಿದ್ದರು ಎಂದು ಹೇಳಿದ್ದರು. ರಾಹುಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯಸಭಾ ಸಂಸದ ಅಶೋಕ್ ಚವಾಣ್ (Ashok Chavan), ಆ ನಾಯಕ ನಾನಲ್ಲ ಎಂದಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್‌ನಿಂದ ಸ್ಪರ್ಧಿಸಲು ಸಿದ್ಧರಾಗಿರುವ ರಾಹುಲ್ ಗಾಂಧಿ ಭಾನುವಾರ ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದು ತಮ್ಮ ಪ್ರತಿಸ್ಪರ್ಧಿಗಳು, ಒಂದೊಮ್ಮೆ ಸ್ನೇಹಿತರಾಗಿದ್ದು ಆಮೇಲೆ ಶತ್ರುಗಳಾದವರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ತನಿಖಾ ಸಂಸ್ಥೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು “ಹಿರಿಯ ನಾಯಕ” ಬಿಜೆಪಿಗೆ ಹೋಗಿದ್ದಾರೆ.ಆಡಳಿತ ಪಕ್ಷವು ಪ್ರತಿಸ್ಪರ್ಧಿ ರಾಜಕಾರಣಿಗಳನ್ನು ಬೆದರಿಸಲು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಇತರರನ್ನು ಬಳಸುತ್ತದೆ ಎಂದು ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಈ ರಾಜ್ಯದ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ತೊರೆದರು. ಅಳುತ್ತಾ ಅವರು ನನ್ನ ತಾಯಿಯಲ್ಲಿ(ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ) … ‘ನನಗೆ ನಾಚಿಕೆಯಾಗುತ್ತಿದೆ. ಈ ಶಕ್ತಿಯ ವಿರುದ್ಧ ಹೋರಾಡುವ ಶಕ್ತಿ ಇಲ್ಲ. ನಾನು ಜೈಲಿಗೆ ಹೋಗಲು ಬಯಸುವುದಿಲ್ಲ ಎಂದು ಅಳುತ್ತಾ ಹೇಳಿದ್ದರು ಎಂದು ಮುಂಬೈನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.

ಕಳೆದ ತಿಂಗಳು ಬಿಜೆಪಿಗೆ ಸೇರಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್, ಕಾಂಗ್ರೆಸ್ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ರಾಹುಲ್ ಆಡಳಿತಾರೂಢ ಬಿಜೆಪಿ ವಿರುದ್ಧದ ದಾಳಿಯಲ್ಲಿ ಯಾವುದೇ ವ್ಯಕ್ತಿಯನ್ನು ಹೆಸರಿಸಿಲ್ಲ ಎಂದಿದ್ದಾರೆ. ಆದರೆ ಅವರು ನನ್ನ ಬಗ್ಗೆ ಹಾಗೆ ಹೇಳುತ್ತಿದ್ದರೆ ಅದು ತರ್ಕಬದ್ಧವಲ್ಲ ಮತ್ತು ನಿರಾಧಾರವಾಗಿದೆ, ನಿಜವೆಂದರೆ ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವವರೆಗೂ ಪಕ್ಷದ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕೆಲವು ಕ್ಷಣಗಳ ನಂತರ ಪಕ್ಷಕ್ಕೂ ರಾಜೀನಾಮೆ ನೀಡಿದ್ದೆ. ಅಲ್ಲಿಯವರೆಗೆ, ನಾನು ರಾಜೀನಾಮೆ ನೀಡಿದ್ದೇನೆ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ವಿಡಿಯೊ ಸಂದೇಶದಲ್ಲಿ ಚವಾಣ್ ಹೇಳಿದ್ದಾರೆ.

ಚವಾಣ್ ಹೇಳಿದ್ದೇನು?

“ನಾನು ಸೋನಿಯಾ ಗಾಂಧಿಯವರವರನ್ನು ಎಂದಿಗೂ ಭೇಟಿ ಮಾಡಿಲ್ಲ. ನಾನು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಅತ್ತಿದ್ದೇನೆ ಎಂದು ಹೇಳುವುದು ನಿರಾಧಾರ. ಇದು ಚುನಾವಣಾ ದೃಷ್ಟಿಯಿಂದ ರಾಜಕೀಯ ಹೇಳಿಕೆ” ಎಂದು ಚವಾಣ್ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election: ಲೋಕಸಭಾ ಚುನಾವಣೆ: ಲಾಲೂ ಪ್ರಸಾದ್​ ಯಾದವ್ ಪುತ್ರಿ ರೋಹಿಣಿ ಸ್ಪರ್ಧೆ

ಅಂದಹಾಗೆ ಮಹಾರಾಷ್ಟ್ರದ ಇಬ್ಬರು ಉನ್ನತ ರಾಜಕೀಯ ನಾಯಕರು ಈ ವರ್ಷ ಕಾಂಗ್ರೆಸ್ ತೊರೆದಿದ್ದಾರೆ. ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಸೇರಿದ್ದು, ಚವಾಣ್ ಬಿಜೆಪಿಗೆ ಸೇರಿದ್ದರು. ಚವಾಣ್ ಅವರ ವಿರುದ್ಧ ಮೂರು ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಎರಡು ನವೆಂಬರ್ 2010 ರ ಆದರ್ಶ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿವೆ. ಈ ಪ್ರಕರಣದಿಂದಾಗಿಯೇ ಚವಾಣ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:23 pm, Mon, 18 March 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us