
ಜಾರ್ಖಂಡ್, ಅಕ್ಟೋಬರ್ 05: ಜಾರ್ಖಂಡ್ನಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪು ಜನರ ಮೇಲೆ ಚಾಕುವಿನಿಂದ ಹಲ್ಲೆ(Attack) ನಡೆಸಿದ್ದು, ಘಟನೆಯಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಕ್ರಧರಪುರದ ಹರಿಜನ ಬಸ್ತಿ ಪ್ರದೇಶದ ಯುವಕರ ಗುಂಪೊಂದು ತಮ್ಮ ದುರ್ಗಾ ಪೂಜಾ ಮಂಟಪದ ಮೂರ್ತಿಯನ್ನು ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಹಿಂತಿರುಗುತ್ತಿದ್ದಾಗ, 15 ಜನರ ಗುಂಪೊಂದು ಮೆರವಣಿಗೆಯೊಳಗೆ ನುಗ್ಗಿ ಚೂರಿಯಿಂದ ಇರಿದ ಘಟನೆ ನಡೆದಿದೆ.
ದಾಳಿಕೋರರು ಯುವಕರ ದೇಹದ ವಿವಿಧ ಭಾಗಗಳಿಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಚಕ್ರಧರಪುರ ಪೊಲೀಸ್ ಠಾಣೆಯಿಂದ ಕೆಲವೇ ಕೆಲವು ಮೀಟರ್ ದೂರದಲ್ಲಿ ನಡೆದ ಚಾಕು ದಾಳಿಯಲ್ಲಿ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಯುವಕರು ಮೂರ್ತಿಯನ್ನು ವಿಸರ್ಜಿಸಿ ಹಿಂತಿರುಗುತ್ತಿದ್ದಾಗ ದಾಳಿಕೋರರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜನಸಮೂಹ ಭಯಭೀತರಾಗಿ ಚದುರಿಹೋಗುತ್ತಿದ್ದಂತೆ ಹಲ್ಲೆಕೋರರು ತಕ್ಷಣ ಓಡಿಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡವರನ್ನು ಧ್ರುವ ಮುಖಿ, ಗೋವಿಂದ ಮುಖಿ, ದಿನೇಶ್ ಮುಖಿ, ರಿಕ್ಕಿ ಮುಖಿ, ಅತುಲ್ ಮುಖಿ, ಅಮನ್ ಮುಖಿ ಮತ್ತು ಅಜಯ್ ಮುಖಿ ಎಂದು ಗುರುತಿಸಲಾಗಿದೆ. ರಿಕ್ಕಿ ಮುಖಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಗಾಯಗೊಂಡವರೆಲ್ಲರೂ ಚಕ್ರಧರಪುರ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತಷ್ಟು ಓದಿ: Gayatri Prajapati: ಯುಪಿ ಜೈಲಿನಲ್ಲಿ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮೇಲೆ ಹಲ್ಲೆ, ಚಾಕು ಇರಿತ
ದಾಳಿ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ನಾವು ಗಾಯಾಳುಗಳೊಂದಿಗೆ ಮಾತನಾಡಿದ್ದೇವೆ ಮತ್ತು ಹಲವಾರು ಶಂಕಿತರನ್ನು ಗುರುತಿಸಲಾಗಿದೆ. ಅವರನ್ನು ಪತ್ತೆಹಚ್ಚಲು ಶೋಧ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ನಂತರ, ಹರಿಜನ ಬಸ್ತಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ರೈಲ್ವೆ ಆಸ್ಪತ್ರೆಯಲ್ಲಿ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು, ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಶಾಂತಿ ಕಾಪಾಡಲು ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ದಾಳಿಯ ಹಿಂದಿನ ಉದ್ದೇಶವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರರನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ