ಮಮತಾರ ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತವಲ್ಲ: ಜೆಪಿ ನಡ್ಡಾ ವಾಗ್ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ. ಪಶ್ಚಿಮ ಬಂಗಾಳದ ಉತ್ತರ ದಿನಜ್‌ಪುರ ಜಿಲ್ಲೆಯಲ್ಲಿ ನಡೆದ ಅಮಾನುಷ ಹಲ್ಲೆಯ ವಿಡಿಯೋ ವೈರಲ್ ಆಗಿರುವುದು ಮತ್ತು ಹಲ್ಲೆ ನಡೆಸಿದ ವ್ಯಕ್ತಿ ಆಡಳಿತಾರೂಢ ಟಿಎಂಸಿ ಪಕ್ಷದವ ಎಂಬ ಆರೋಪ ಕೇಳಿ ಬರುತ್ತಿದ್ದಂತೆಯೇ ಮಮತಾ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ಮಮತಾರ ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತವಲ್ಲ: ಜೆಪಿ ನಡ್ಡಾ ವಾಗ್ದಾಳಿ
ಜೆಪಿ ನಡ್ಡಾ, ಮಮತಾ ಬ್ಯಾನರ್ಜಿ

Updated on: Jul 01, 2024 | 10:25 AM

ನವದೆಹಲಿ, ಜುಲೈ 1: ಮಮತಾ ಬ್ಯಾನರ್ಜಿ ಆಡಳಿತದ ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದರು. ಪಶ್ಚಿಮ ಬಂಗಾಳದ ಉತ್ತರ ದಿನಜ್‌ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದಂಪತಿ ಮೇಲೆ ಬಿದಿರಿನ ಕೋಲಿನಿಂದ ಅಮಾನುಷವಾಗಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿರುವ ವಿಚಾರವಾಗಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸಂದೇಶ ಪ್ರಕಟಿಸಿದ್ದು, ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಿಂದ ಭಯಾನಕ ವೀಡಿಯೊ ಪ್ರಸಾರವಾಗಿದೆ. ಇದು ದಬ್ಬಾಳಿಕೆಯ ಆಡಳಿತದಲ್ಲಿ ಮಾತ್ರ ನಡೆಯಬಹುದಾದ ಕ್ರೌರ್ಯಗಳನ್ನು ನೆನಪಿಸುತ್ತದೆ. ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು ಮತ್ತು ಶಾಸಕರು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ನಡ್ಡಾ ಎಕ್ಸ್​​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಜೆಪಿ ನಡ್ಡಾ ಎಕ್ಸ್ ಸಂದೇಶ


ಸಂದೇಶ್‌ಖಾಲಿ ಆಗಲಿ, ಉತ್ತರ ದಿನಾಜ್‌ಪುರ ಅಥವಾ ಇತರ ಹಲವು ಸ್ಥಳಗಳಾಗಲಿ, ದೀದಿಯ ಪಶ್ಚಿಮ ಬಂಗಾಳವು ಮಹಿಳೆಯರಿಗೆ ಅಸುರಕ್ಷಿತವಾಗಿದೆ ಎಂದು ನಡ್ಡಾ ಟೀಕಿಸಿದ್ದಾರೆ.

ಇದನ್ನೂ ಓದಿ: ರೀಲ್ಸ್​ಗಾಗಿ ಧಮ್ ಹೊಡೆದ ಹುಡ್ಗಿ, ಮನೆಯಲ್ಲಿ ಬೆಲ್ಟ್ ಏಟು: ವಿಡಿಯೋ ನೋಡಿ

ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ. ದಂಪತಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಉತ್ತರ ದಿನಜ್‌ಪುರ ಜಿಲ್ಲೆಯ ಚೋಪ್ರಾದ ಸ್ಥಳೀಯ ತೃಣಮೂಲ ನಾಯಕ ಎಂದು ಆರೋಪಿಸಲಾಗಿದೆ. ಆರೋಪಿ ತಜಮುಲ್ ಅಲಿಯಾಸ್ ಜೆಸಿಬಿಯನ್ನು ಬಂಧಿಸಲಾಗಿದೆ.

ವೈರಲ್ ವಿಡಿಯೋದಲ್ಲೇನಿತ್ತು?

ತಜಮುಲ್ ಅಲಿಯಾಸ್ ಜೆಸಿಬಿ ನಡು ರಸ್ತೆಯಲ್ಲೇ ಮಹಿಳೆಯೊಬ್ಬರ ಕೂದಲು ಹಿಡಿದೆಳೆದು ಕೋಲಿನಿಂದ ಬಾರಿಸಿದ್ದಲ್ಲದೆ ಥಳಿಸಿದ್ದ. ಆಕೆಯ ಜತೆಗಿದ್ದ ಪುರುಷನ ಮೇಲೂ ಹಲ್ಲೆ ನಡೆಸಿದ್ದ. ಹತ್ತಾರು ಜನರ ಸಮ್ಮುಖದಲ್ಲೇ ಈ ಘಟನೆ ನಡೆದಿತ್ತು. ಸ್ಥಳದಲ್ಲಿದ್ದವರೆಲ್ಲ ಮೂಕ ಪ್ರೇಕ್ಷಕರಾಗಿ ನೋಡುತ್ತಿರುವಂತಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us