ಕೇರಳದ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲು ಕಾಸರಗೋಡು ನ್ಯಾಯಾಲಯ ಅನುಮತಿ

K. Surendran: ಸಿಪಿಐ (ಎಂ) ಮುಖಂಡ ವಿ.ವಿ. ರಮೇಶನ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಕೇರಳದ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲು ಕಾಸರಗೋಡು ನ್ಯಾಯಾಲಯ ಅನುಮತಿ
ಕೆ.ಸುರೇಂದ್ರನ್
Edited By: ರಶ್ಮಿ ಕಲ್ಲಕಟ್ಟ

Updated on: Jun 07, 2021 | 8:38 PM

ಕಾಸರಗೋಡು: ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ. ಸಿಪಿಐ (ಎಂ) ಮುಖಂಡ ವಿ.ವಿ. ರಮೇಶನ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರಿಗೆ  ಬಿಜೆಪಿ ನಾಯಕರು ನಾಮಪತ್ರ ಹಿಂಪಡೆದರೆ ಹಣ,ಮೊಬೈಲ್ ಮತ್ತು ಇತರ ಅನುಕೂಲಗಳನ್ನು ಒದಗಿಸುವುದಾಗಿ ಆಮಿಷ  ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸುರೇಂದ್ರನ್ ಸೇರಿದಂತೆ ಇಬ್ಬರು ಸ್ಥಳೀಯ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಕ್ಕೂ ನ್ಯಾಯಾಲಯ ಅನುಮತಿ ನೀಡಿತು. ಐಪಿಸಿಯ ಸೆಕ್ಷನ್ 171 ಬಿ (ಚುನಾವಣೆಗಳನ್ನು ಹಾಳುಮಾಡಲು ಲಂಚ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ.

ಲಂಚ ಬಹಿರಂಗ
ಮಂಜೇಶ್ವರ ಬಿಎಸ್​ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ.ಸುಂದರ ಅವರಿಗೆ ಬಿಜೆಪಿ ಮುಖಂಡರು ಹಣ ಮತ್ತು ಮೊಬೈಲ್ ನೀಡಿದ್ದಾರೆ ಎಂದು ಬಹಿರಂಗಪಡಿಸಿದರು. ಅಭ್ಯರ್ಥಿಯನ್ನು ಅಪಹರಿಸಿ, ವಶಕ್ಕೆ ತೆಗೆದುಕೊಂಡು ಲಂಚ ನೀಡಲಾಗಿದೆ ಎಂಬ ಆಧಾರದ ಮೇಲೆ ನಾಮಪತ್ರ ಹಿಂಪಡೆಯಲಾಗಿದೆ ಎಂದು ರಮೇಶನ್ ಪ್ರತಿಕ್ರಿಯಿಸಿದರು.

ಪ್ರಕರಣ ದಾಖಲಿಸಲು ಅನುಮತಿ ಅಗತ್ಯವಿರುವುದರಿಂದ ರಮೇಶನ್ ಅವರು ಕಾಸರಗೋಡು ನ್ಯಾಯಾಲಯವನ್ನು ಸಂಪರ್ಕಿಸಿದರು. ಎಫ್‌ಐಆರ್ ದಾಖಲಾಗಿದ್ದರೆ, ಸುಂದರ ಅವರ ಹೇಳಿಕೆಯ ಆಧಾರದ ಮೇಲೆ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಬಹುದು ಎಂದು ಅವರ ವಕೀಲರು ಹೇಳಿದರು. ಐಪಿಸಿಯ ಸೆಕ್ಷನ್ 171 ಬಿ ಅಡಿಯಲ್ಲಿ ಮಾತ್ರ ಬಂಧನ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಮಾರ್ಚ್ 21 ರಂದು ಸುನಿಲ್ ನಾಯಕ್, ಸುರೇಶ್ ನಾಯಕ್ ಮತ್ತು ಅಶೋಕ್ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ತಮ್ಮ ಮನೆಗೆ ಭೇಟಿ ನೀಡಿ ನಾಮಪತ್ರ ಹಿಂಪಡೆಯಲು 2.5 ಲಕ್ಷ ರೂಪಾಯಿ ಮತ್ತು ಸ್ಮಾರ್ಟ್‌ಫೋನ್ ನೀಡಿದರು ಎಂದು ಸುಂದರ ಅವರು ಬಹಿರಂಗಪಡಿಸಿದ ನಂತರ ರಮೇಶನ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದರು. ರಮೇಶನ್ ಬದಿಯಡ್ಕ ಪೊಲೀಸ್ ಠಾಣೆಗೆ ಹೋಗಿ ತಮ್ಮ ಹೇಳಿಕೆ ನೀಡಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ. ನಾವು ನಾಮಪತ್ರ ಹಿಂಪಡೆಯುವಂತೆ ಯಾರಿಗೂ ಹೇಳಿಲ್ಲ. ಹಣ ಕೊಡುತ್ತೇವೆ ಎಂದೂ ಆಸೆ ತೋರಿಸಿಲ್ಲ. ಕೆ.ಸುಂದರ​ ಅವರು ಯಾಕೆ  ನಾಮಪತ್ರ ವಾಪಸ್​ ಪಡೆದಿದ್ದಾರೆ ಎಂಬುದನ್ನೂ ಅವರೇ ಈ ಹಿಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಿಪಿಐ(ಎಂ) ಅಥವಾ ಐಯುಎಂಎಲ್​​ ಪಕ್ಷಗಳ ಒತ್ತಡದಿಂದಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್​ ಹೇಳಿದ್ದಾರೆ.

ಇದನ್ನೂ  ಓದಿ:  ಕೇರಳ ಬಿಜೆಪಿ ಘಟಕ ವಿರುದ್ಧ ಹವಾಲಾ ಆರೋಪ: ಸ್ವತಂತ್ರ ಸಮಿತಿಯಿಂದ ವರದಿ ಕೇಳಿದ ಬಿಜೆಪಿ

ಇದನ್ನೂ ಓದಿ :  ಬಿಎಸ್​ಪಿ ಅಭ್ಯರ್ಥಿಗೆ ಹಣದ ಆಮಿಷ ಒಡ್ಡಿದ ಆರೋಪ; ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಎಫ್​ಐಆರ್​

Web contact

TV9 Kannada

Read More
Follow Us