Khan Sir: ಬಿಹಾರದ ‘ಖಾನ್ ಸರ್’ಗೆ ದೊಡ್ಡ ರಿಲೀಫ್, ಗುಂಡಿನ ದಾಳಿ ಪ್ರಕರಣದಲ್ಲಿ ಫೈಸಲ್ ಖಾನ್ ಬಂಧನಕ್ಕೆ ಪಾಟ್ನಾ ನ್ಯಾಯಾಲಯ ತಡೆ
ದೇಶದಾದ್ಯಂತ ಜನಪ್ರಿಯರಾಗಿರುವ ಯೂಟ್ಯೂಬರ್ ಮತ್ತು ಶಿಕ್ಷಣ ತಜ್ಞ ಖಾನ್ ಸರ್ (ಫೈಸಲ್ ಖಾನ್) ಅವರಿಗೆ ಪಾಟ್ನಾ ನ್ಯಾಯಾಲಯದಿಂದ ದೊಡ್ಡ ರಿಲೀಫ್ ದೊರೆತಿದೆ. ಕೋಚಿಂಗ್ ಇನ್ಸ್ಟಿಟ್ಯೂಟ್ ವಿವಾದದ ಗುಂಡಿನ ದಾಳಿ ಪ್ರಕರಣದಲ್ಲಿ ಅವರ ಬಂಧನಕ್ಕೆ ತಕ್ಷಣವೇ ತಡೆ ನೀಡಿದ್ದು, ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಆದೇಶಿಸಿದೆ. ಈ ನಿರ್ಧಾರವು ಖಾನ್ ಸರ್ ಮತ್ತು ಅವರ ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿದೆ. ಕಾನೂನಾತ್ಮಕ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ.

ಪಾಟ್ನಾ, ಜೂನ್ 09: ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿರುವ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಹಾಗೂ ಶಿಕ್ಷಣ ತಜ್ಞ ಫೈಸಲ್ ಖಾನ್ ( ಖಾನ್ ಸರ್) ಅವರಿಗೆ ಪಾಟ್ನಾ ನ್ಯಾಯಾಲಯದಿಂದ ಸಾಮಾಧಾನ ಸಿಕ್ಕಿದೆ. ಪಾಟ್ನಾದ ಕೋಚಿಂಗ್ ಇನ್ಸ್ಟಿಟ್ಯೂಟ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಖಾನ್ ಸರ್ ಬಂಧನಕ್ಕೆ ತಕ್ಷಣವೇ ಮಧ್ಯಂತರ ತಡೆ ನೀಡಿದೆ ಮತ್ತು ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ನ್ಯಾಯಾಲಯದ ಈ ನಿರ್ಧಾರವು ಖಾನ್ ಸರ್ ಅವರ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ವಲಯದಲ್ಲಿ ಭಾರಿ ಹರ್ಷವನ್ನು ತಂದಿದೆ. ಜೂನ್ 6 ರಂದು ಪಾಟ್ನಾ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜೂನ್ 8ರಂದು ನಡೆದಿತ್ತು.
ವಿಚಾರಣೆಯ ಸಮಯದಲ್ಲಿ ಖಾನ್ ಸರ್ ಪರ ವಕೀಲರು ಅತ್ಯಂತ ಬಲವಾದ ವಾದ ಮಂಡಿಸಿದರು. ಕೋಚಿಂಗ್ ಇನ್ಸ್ಟಿಟ್ಯೂಟ್ ಬಳಿ ನಡೆದ ಗುಂಡಿನ ಘಟನೆಗೂ ಫೈಸಲ್ ಖಾನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ. ಅವರು ಯಾವುದೇ ಕ್ರಿಮಿನಲ್ ಕೃತ್ಯ ಎಸಗಿಲ್ಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಅವರನ್ನು ಈ ಪ್ರಕರಣದಲ್ಲಿ ಸಂಪೂರ್ಣವಾಗಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟರು.
ಮತ್ತಷ್ಟು ಓದಿ: Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ
ಪಾಟ್ನಾದ ಕಡಮ್ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಚಿಂಗ್ ಇನ್ಸ್ಟಿಟ್ಯೂಟ್ ಒಂದರ ವಿವಾದದ ವೇಳೆ ನಡೆದ ಗುಂಡಿನ ಚಕಮಕಿಯ ವೈರಲ್ ವೀಡಿಯೊದ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ, ಪೊಲೀಸ್ ತನಿಖೆಯಲ್ಲೇ ಸ್ಪಷ್ಟವಾಗಿರುವಂತೆ, ಈ ಗುಂಡಿನ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದವರು ಇನ್ಸ್ಟಿಟ್ಯೂಟ್ಗೆ ಸಂಬಂಧಿಸಿದ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳು (ಭದ್ರತಾ ಸಿಬ್ಬಂದಿ). ಆ ಇಬ್ಬರೂ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.
ತಲೆಮರೆಸಿಕೊಂಡಿದ್ದ ಖಾನ್ ಸರ್ಗೆ ಈಗ ಆಡಳಿತಾತ್ಮಕ ರಕ್ಷಣೆ ವಿವಾದದ ನಂತರ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಆತಂಕದಿಂದಾಗಿ ಖಾನ್ ಸರ್ ಕಳೆದ ಕೆಲವು ದಿನಗಳಿಂದ ಪಾಟ್ನಾದಿಂದ ಹೊರಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳ ಕಡೆ ಗಮನ ಹರಿಸಿದ್ದರು. ಪಾಟ್ನಾ ಎಸ್ಎಸ್ಪಿ ಕಾರ್ತಿಕ್ ಶರ್ಮಾ ನೇರ ಉಸ್ತುವಾರಿಯಲ್ಲಿ ಪೊಲೀಸರು ದಾಳಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲೇ, ನ್ಯಾಯಾಲಯವು ಮಧ್ಯಸ್ಥಿಕೆ ವಹಿಸಿ ಖಾನ್ ಸರ್ ಅವರ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.
ನ್ಯಾಯಾಲಯದ ಈ ಪರಿಹಾರದ ಆದೇಶದೊಂದಿಗೆ ಖಾನ್ ಸರ್ ಅವರ ಬಂಧನದ ಭೀತಿ ಸಂಪೂರ್ಣವಾಗಿ ದೂರವಾಗಿದೆ. ಮುಂದಿನ ವಿಚಾರಣೆಯಲ್ಲಿ ಪೊಲೀಸ್ ತನಿಖಾ ವರದಿಯ ವಿವರವಾದ ಪರಿಶೀಲನೆ ನಡೆಯಲಿದ್ದು, ಸತ್ಯಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಇದರಿಂದಾಗಿ ಖಾನ್ ಸರ್ ಅವರು ಶೀಘ್ರದಲ್ಲೇ ಮರಳಿ ತರಗತಿಗಳಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಎಂದಿನಂತೆ ಮಾರ್ಗದರ್ಶನ ನೀಡಲು ಹಾದಿ ಸುಗಮವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




