AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಶನ್ ಭರ್ವಾಡ್ ಹತ್ಯೆ ಪ್ರಕರಣ: ದೆಹಲಿಯಲ್ಲಿ ಮುಸ್ಲಿಂ ಧರ್ಮಗುರುವನ್ನು ಬಂಧಿಸಿದ ಗುಜರಾತ್ ಎಟಿಎಸ್

Kishan Bharwad Murder Case ಜನವರಿ 29 ರಂದು ಗುಜರಾತ್ ಸರ್ಕಾರವು ಕಿಶನ್ ಭರ್ವಾಡ್ ಹತ್ಯೆಯ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಹಸ್ತಾಂತರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಎಟಿಎಸ್ ತಂಡ ಖಮರ್ ಗನಿಯನ್ನು ಬಂಧಿಸಿತು.

ಕಿಶನ್ ಭರ್ವಾಡ್ ಹತ್ಯೆ ಪ್ರಕರಣ: ದೆಹಲಿಯಲ್ಲಿ ಮುಸ್ಲಿಂ ಧರ್ಮಗುರುವನ್ನು ಬಂಧಿಸಿದ ಗುಜರಾತ್ ಎಟಿಎಸ್
ಮೌಲಾನಾ ಖಮರ್ ಗನಿ ಉಸ್ಮಾನಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jan 31, 2022 | 9:31 PM

Share

ದೆಹಲಿ: ಜನವರಿ 25 ರಂದು ಗುಜರಾತ್‌ನ (Gujarat) ಅಹಮದಾಬಾದ್ ಜಿಲ್ಲೆಯ ಧಂಧೂಕಾ ಪ್ರದೇಶದಲ್ಲಿ 27 ವರ್ಷದ ಕಿಶನ್ ಭರ್ವಾಡ್ (Kishan Bharwad) ಎಂಬಾತನನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ “ಆಕ್ಷೇಪಾರ್ಹ” ಫೇಸ್‌ಬುಕ್ ಪೋಸ್ಟ್‌ನಿಂದಾಗಿ ಕಿಶನ್  ಭರ್ವಾಡ್ ಹತ್ಯೆ ನಡೆದಿತ್ತು. ಕಿಶನ್ ಭರ್ವಾಡ್ ಹತ್ಯೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಶಬ್ಬೀರ್ (25) ಮತ್ತು ಇಮ್ತಿಯಾಜ್ (27) ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರು ಹಂತಕರ ಹೊರತಾಗಿ, ಗುಜರಾತ್ ಪೊಲೀಸರು ಅಹಮದಾಬಾದ್‌ನಿಂದ ಮೌಲ್ವಿ ಅಯೂಬ್ ಎಂಬ ಧರ್ಮಗುರುವನ್ನು ಸಹ ಬಂಧಿಸಿದ್ದಾರೆ. ಮೌಲ್ವಿ ಅಯ್ಯೂಬ್ ಶಬ್ಬೀರ್ ಮತ್ತು ಇಂತಿಯಾಜ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ ಆರೋಪವನ್ನು ಹೊಂದಿದ್ದು, ಮೌಲಾನಾ ಖಮರ್ ಗನಿಯೊಂದಿಗೆ ಸಂಬಂಧ ಹೊಂದಿದ್ದಾರೆ.  ಆರೋಪಿಗಳಾದ ಶಬ್ಬೀರ್ ಮತ್ತು ಇಮ್ತಿಯಾಜ್ ಅವರನ್ನು ಶನಿವಾರ ಅಪರಾಧ ದೃಶ್ಯದ ಮರು ಸೃಷ್ಟಿಗಾಗಿ ಕರೆದೊಯ್ಯಲಾಯಿತು. ಪೊಲೀಸರು ಸ್ಥಳದಿಂದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಪರಾಧ ಮಾಡಲು ಬಳಸಿದ ಮೋಟಾರ್‌ಬೈಕ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಕಿಶನ್ ಭರ್ವಾಡ್ ಹತ್ಯೆಗೆ ಸಂಬಂಧಿಸಿದಂತೆ ಗುಜರಾತ್ ಎಟಿಎಸ್ ಭಾನುವಾರ ದೆಹಲಿಯಿಂದ ಮೌಲಾನಾ ಖಮರ್ ಗನಿ ಉಸ್ಮಾನಿಯನ್ನು ಬಂಧಿಸಿದೆ. ಕಿಶನ್ ಹಂತಕ ಶಬ್ಬೀರ್‌ಗೆ ಕುಮ್ಮಕ್ಕು ನೀಡಿದ ಆರೋಪ ಉಸ್ಮಾನಿ ಮೇಲಿದೆ. ಮೌಲಾನಾ ಖಮರ್ ಗನಿ ಉಸ್ಮಾನಿ ಅವರ ಭಾಷಣ ಕೇಳಿ ಶಬ್ಬೀರ್ ಅವರನ್ನು ಸಂಪರ್ಕಿಸಿದ್ದನು.

ಖಮರ್ ಗನಿ ಉಸ್ಮಾನಿ ಟಿಎಫ್ಐ (ತಹ್ರೀಕ್ ಫರೋಗ್-ಎ-ಇಸ್ಲಾಂ) ನೊಂದಿಗೆ ಸಂಬಂಧ ಹೊಂದಿದ್ದಾರೆ. ಕಳೆದ ವರ್ಷ ತ್ರಿಪುರಾ ಗಲಭೆಗೆ ಸಂಬಂಧಿಸಿದಂತೆ ಖಮರ್  ಬಂಧನ ನಡೆದಿತ್ತು . ಜನವರಿ 6 ರಂದು, ಕಿಶನ್ ಭರ್ವಾಡ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದರು, ನಂತರ ಮುಸ್ಲಿಂ ಸಮುದಾಯದ ಕೆಲವು ಸದಸ್ಯರು ತಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಜನವರಿ 25 ರಂದು ಬೈಕ್‌ನಲ್ಲಿ ಬಂದ ಶಬ್ಬೀರ್ ಮತ್ತು ಇಮ್ತಿಯಾಜ್ ಕಿಶನ್‌ಗೆ ಗುಂಡು ಹಾರಿಸಿದ್ದರು. ತನಿಖೆಯ ವೇಳೆ, ಆರೋಪಿಯು ಮುಂಬೈನಲ್ಲಿ ಖಮರ್ ಗನಿಯನ್ನು ಭೇಟಿಯಾಗಿದ್ದನ್ನು ಗುಜರಾತ್ ಎಟಿಎಸ್ ಪತ್ತೆ ಮಾಡಿದೆ. ಯಾರಾದರೂ ತಮ್ಮ ಧರ್ಮದ ವಿರುದ್ಧ ಮಾತನಾಡಿದರೆ ಆ ವ್ಯಕ್ತಿಯನ್ನು ಮುಗಿಸಬೇಕು ಎಂದು ಸಭೆಯಲ್ಲಿ ಖಮರ್ ಗನಿ ಆರೋಪಿಗಳಿಗೆ ಹೇಳಿದ್ದರು.

ಈ ಕಾರಣಕ್ಕಾಗಿಯೇ ಇಬ್ಬರು ಆರೋಪಿಗಳು ಖಮರ್ ಗನಿ ನಿರ್ದೇಶನದ ಮೇರೆಗೆ ಕಿಶನ್ ಭರ್ವಾಡ್​​ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.

ಗುಜರಾತ್ ಎಟಿಎಸ್‌ಗೆ ಪ್ರಕರಣ ಹಸ್ತಾಂತರ

ಜನವರಿ 29 ರಂದು ಗುಜರಾತ್ ಸರ್ಕಾರವು ಕಿಶನ್ ಭರ್ವಾಡ್ ಹತ್ಯೆಯ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಹಸ್ತಾಂತರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಎಟಿಎಸ್ ತಂಡ ಖಮರ್ ಗನಿಯನ್ನು ಬಂಧಿಸಿತು. ಎಟಿಎಸ್ ಪ್ರಕಾರ ಕಳೆದ ವರ್ಷ ಮೌಲಾನಾ ಅಯ್ಯೂಬ್ ಮತ್ತು ಶಬ್ಬೀರ್ ಧರ್ಮನಿಂದೆಯ ಆರೋಪದ ಮೇಲೆ ಸಾಜನ್ ಒಡೆದಾರನನ್ನು ಕೊಲ್ಲುವ ಉದ್ದೇಶದಿಂದ ಪೋರಬಂದರ್‌ಗೆ ಭೇಟಿ ನೀಡಿದ್ದರು. ಆದರೆ, ಸಾಜನ್ ಅಲ್ಲಿ ಬರದೇ ಇದ್ದ ಕಾರಣ ಅವರ ಯೋಜನೆ ಯಶಸ್ವಿಯಾಗಲಿಲ್ಲ. ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ಅವರು, “ಧಂಧೂಕಾ ಹಿಂಸಾತ್ಮಕ ಘಟನೆಯ ಪ್ರಕರಣವನ್ನು ಎಟಿಎಸ್‌ಗೆ ಹಸ್ತಾಂತರಿಸಲಾಗಿದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸಲು ಗುಜರಾತ್ ಪೊಲೀಸರು ಬದ್ಧರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Budget 2022: ಕೃಷಿ ಸಾಲ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ, ರೈಲ್ವೆಗೆ ಹೆಚ್ಚಿನ ಅನುದಾನ; ಬಜೆಟ್​ ಕುರಿತ ಪ್ರಮುಖ ಬೇಡಿಕೆಗಳಿವು