ಒಂದು ರಾಷ್ಟ್ರ, ಒಂದು ಚುನಾವಣೆ ಪರಿಶೀಲನೆಗೆ ಅಮಿತ್ ಶಾ, ಅಧೀರ್ ಚೌಧರಿ, ಗುಲಾಂ ನಬಿ ಆಜಾದ್ ಸೇರಿದಂತೆ 8 ಸದಸ್ಯರ ಸಮಿತಿ ರಚನೆ

|

Updated on: Sep 02, 2023 | 8:55 PM

ಅಧಿಸೂಚನೆಯ ಪ್ರಕಾರ ಸಮಿತಿಯು ಭಾರತದ ಸಂವಿಧಾನ ಮತ್ತು ಇತರ ಶಾಸನಬದ್ಧ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು, ಲೋಕಸಭೆ,ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸುಗಳನ್ನು ಮಾಡುತ್ತದೆ.ಅತಂತ್ರ ಸರ್ಕಾರ, ಅವಿಶ್ವಾಸ ನಿರ್ಣಯ ಅಂಗೀಕಾರ ಅಥವಾ ಪಕ್ಷಾಂತರದಂತಹ ಸನ್ನಿವೇಶಗಳು ಇದ್ದಲ್ಲಿ ಸಮಿತಿಯು ವಿಶ್ಲೇಷಿಸಿ ಸಂಭವನೀಯ ಪರಿಹಾರಗಳನ್ನು ಶಿಫಾರಸು ಮಾಡುತ್ತದೆ

ಒಂದು ರಾಷ್ಟ್ರ, ಒಂದು ಚುನಾವಣೆ ಪರಿಶೀಲನೆಗೆ ಅಮಿತ್ ಶಾ, ಅಧೀರ್ ಚೌಧರಿ, ಗುಲಾಂ ನಬಿ ಆಜಾದ್ ಸೇರಿದಂತೆ 8 ಸದಸ್ಯರ ಸಮಿತಿ ರಚನೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ ಸೆಪ್ಟೆಂಬರ್ 02: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರ ಅಧ್ಯಕ್ಷತೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ (one nation-one election)ಪ್ರಸ್ತಾವನೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಕಾನೂನು ಸಚಿವಾಲಯ (law ministry) ಶನಿವಾರ ಸೂಚನೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಪಕ್ಷದ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಜಿ ಮುಖ್ಯ ವಿಜಿಲೆನ್ಸ್ ಆಯುಕ್ತ ಸಂಜಯ್ ಕೊಠಾರಿ ಅವರು 8 ಸದಸ್ಯರ ಸಮಿತಿಯ ಸದಸ್ಯರಾಗಿರುತ್ತಾರೆ. ರಾಜ್ಯ ಸಚಿವ (ಕಾನೂನು) ಅರ್ಜುನ್ ರಾಮ್ ಮೇಘವಾಲ್ ಅವರು ಉನ್ನತ ಮಟ್ಟದ ಸಮಿತಿಯ ಸಭೆಗಳಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣಾ ಸಮಿತಿ: ಇವೇರೇನು ಅಧ್ಯಯನ ಮಾಡುತ್ತಾರೆ?

ಅಧಿಸೂಚನೆಯ ಪ್ರಕಾರ ಸಮಿತಿಯು ಭಾರತದ ಸಂವಿಧಾನ ಮತ್ತು ಇತರ ಶಾಸನಬದ್ಧ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು, ಲೋಕಸಭೆ,ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸುಗಳನ್ನು ಮಾಡುತ್ತದೆ. ಅದೇ ವೇಳೆ ಇತರ ಶಾಸನಬದ್ಧ ನಿಬಂಧನೆಗಳು, ಮತ್ತು ಆ ಉದ್ದೇಶಕ್ಕಾಗಿ, ಸಂವಿಧಾನಕ್ಕೆ ನಿರ್ದಿಷ್ಟ ತಿದ್ದುಪಡಿಗಳನ್ನು ಪರಿಶೀಲಿಸಿ, ಜನತಾ ಪ್ರಾತಿನಿಧ್ಯ ಕಾಯಿದೆ, 1950, ಜನತಾ ಪ್ರಾತಿನಿಧ್ಯ ಕಾಯಿದೆ, 1951 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು ತಿದ್ದುಪಡಿಗಳ ಅಗತ್ಯವಿರುವ ಯಾವುದೇ ಇತರ ಕಾನೂನು ಅಥವಾ ನಿಯಮಗಳನ್ನು ಕೂಡಾ ಇದು ಪರಿಶೀಲಿಸಲಿದೆ.

ಅತಂತ್ರ ಸರ್ಕಾರ, ಅವಿಶ್ವಾಸ ನಿರ್ಣಯ ಅಂಗೀಕಾರ ಅಥವಾ ಪಕ್ಷಾಂತರದಂತಹ ಸನ್ನಿವೇಶಗಳು ಇದ್ದಲ್ಲಿ ಸಮಿತಿಯು ವಿಶ್ಲೇಷಿಸಿ ಸಂಭವನೀಯ ಪರಿಹಾರಗಳನ್ನು ಶಿಫಾರಸು ಮಾಡುತ್ತದೆ. ಎಂಟು ಸದಸ್ಯರ ಸಮಿತಿಯು ಚುನಾವಣೆಗಳ ಸಿಂಕ್ರೊನೈಸೇಶನ್‌ಗೆ ಚೌಕಟ್ಟನ್ನು ಸೂಚಿಸುತ್ತದೆ. ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬಹುದಾದ ಸಮಯದ ಚೌಕಟ್ಟನ್ನು ಸಹ ಸೂಚಿಸುತ್ತದೆ. “ಇವಿಎಂಗಳು, ವಿವಿಪ್ಯಾಟ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅಗತ್ಯವಿರುವ ಲಾಜಿಸ್ಟಿಕ್ಸ್ ಮತ್ತು ಮಾನವಶಕ್ತಿಯನ್ನು ಸಮಿತಿಯು ಪರಿಶೀಲಿಸುತ್ತದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ಒಂದು ರಾಷ್ಟ್ರ-ಒಂದು ಚುನಾವಣೆ’ ಎಂದರೇನು?

ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಗೆ 1967 ರವರೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆದವು. ಆದಾಗ್ಯೂ, 1968 ಮತ್ತು 1969 ರಲ್ಲಿ, ಕೆಲವು ಶಾಸಕಾಂಗ ಅಸೆಂಬ್ಲಿಗಳು ಅವಧಿಗೆ ಮುನ್ನವೇ ವಿಸರ್ಜನೆಗೊಂಡವು. 1970 ರಲ್ಲಿ ಲೋಕಸಭೆಯನ್ನು ವಿಸರ್ಜನೆ ಮಾಡಲಾಯಿತು. ಇದು ರಾಜ್ಯಗಳು ಮತ್ತು ದೇಶದ ಚುನಾವಣಾ ವೇಳಾಪಟ್ಟಿಗಳಲ್ಲಿ ಬದಲಾವಣೆ ಮಾಡುವಂತೆ ಮಾಡಿತು. ಕಾನೂನು ಆಯೋಗವು ತನ್ನ 170ನೇ ವರದಿಯಲ್ಲಿ ಚುನಾವಣಾ ವೆಚ್ಚ ಕಡಿತ ಮಾಡಲು ಏಕಕಾಲಕ್ಕೆ ಚುನಾವಣೆಗಳನ್ನು ಶಿಫಾರಸು ಮಾಡಿದೆ. ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಐದು ವರ್ಷಗಳಿಗೊಮ್ಮೆ ಒಂದು ಚುನಾವಣೆ ನಡೆಯಬೇಕು ಎಂದು ಕಾನೂನು ಆಯೋಗದ ವರದಿ ಹೇಳಿದೆ.

2024 ರ ಲೋಕಸಭೆ ಚುನಾವಣೆ ನಡೆಯುವ ಮೊದಲು ಅಥವಾ ಆ ಸಮಯದಲ್ಲಿ ಕನಿಷ್ಠ 10 ರಾಜ್ಯಗಳ ಅಸೆಂಬ್ಲಿಗಳ ಅವಧಿಯು ಕೊನೆಗೊಳ್ಳುತ್ತದೆ. ಈ ವರ್ಷಾಂತ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಮತ್ತು ಛತ್ತೀಸ್‌ಗಢದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿದೆ . ಲೋಕಸಭೆ ಚುನಾವಣೆ ಜತೆಗೇಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಜಾರ್ಖಂಡ್‌ನಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ ಎಂದರೆ ಏನು?; ಇದರ ಸಾಧಕ-ಬಾಧಕಗಳೇನು?

ಯಾವುದೇ ಕಾರಣ ನೀಡದೆ ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಸರ್ಕಾರ ಕರೆದ ನಂತರ ಒಂದು ರಾಷ್ಟ್ರ, ಒಂದು ಚುನಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ