Lok Sabha Election: ಗೋವಾ, ಗುಜರಾತ್​, ಅಸ್ಸಾಂನಲ್ಲಿ ಲೋಕಸಭಾ ಅಭ್ಯರ್ಥಿಗಳ ಘೋಷಿಸಿ ಕಾಂಗ್ರೆಸ್​ಗೆ ಸಂದೇಶ ರವಾನಿಸಿದ ಆಮ್​ ಆದ್ಮಿ ಪಕ್ಷ

ಮುಂಬರುವ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ವಿರೋಧ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಇನ್ನೂ ಒಮ್ಮತ ಮೂಡಿಲ್ಲ. ಏತನ್ಮಧ್ಯೆ, ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ದಕ್ಷಿಣ ಗೋವಾದಲ್ಲಿ ಒಂದು ಸ್ಥಾನ ಮತ್ತು ಗುಜರಾತ್‌ನ ಎರಡು ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದು ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ದೇಶದ ಅತ್ಯಂತ ಹಳೆಯ ಪಕ್ಷವು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆಗಳನ್ನು ವಿಳಂಬಗೊಳಿಸುತ್ತಿದೆ ಎಂದು ಎಎಪಿ ಆರೋಪಿಸಿದೆ

Lok Sabha Election: ಗೋವಾ, ಗುಜರಾತ್​, ಅಸ್ಸಾಂನಲ್ಲಿ ಲೋಕಸಭಾ ಅಭ್ಯರ್ಥಿಗಳ ಘೋಷಿಸಿ ಕಾಂಗ್ರೆಸ್​ಗೆ ಸಂದೇಶ ರವಾನಿಸಿದ ಆಮ್​ ಆದ್ಮಿ ಪಕ್ಷ
ಅರವಿಂದ್ ಕೇಜ್ರಿವಾಲ್
Image Credit source: India Today

Updated on: Feb 14, 2024 | 8:05 AM

ಆಮ್​ ಆದ್ಮಿ ಪಕ್ಷ(Aam Aadmi Party)ವು ಮೂರು ರಾಜ್ಯಗಳಲ್ಲಿ ಲೋಕಸಭಾ ಅಭ್ಯರ್ಥಿ(Lok Sabha Candidates)ಗಳನ್ನು ಘೋಷಿಸುವ ಮೂಲಕ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ(I.N.D.I.A)ದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಆಮ್​ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಎರಡು ಸ್ಥಾನಗಳಿಗೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ಗೋವಾದಲ್ಲಿ ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಗೋವಾ ಮತ್ತು ಗುಜರಾತ್‌ನಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ದೆಹಲಿಯಲ್ಲಿ 7 ಲೋಕಸಭಾ ಸ್ಥಾನಗಳ ಪೈಕಿ ಕೇವಲ 1 ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುವುದಾಗಿ ಈಗಾಗಲೇ ತಿಳಿಸಿದೆ. ಈ ಒಂದು ಸ್ಥಾನಕ್ಕೂ ಕಾಂಗ್ರೆಸ್​ ಅರ್ಹವಿಲ್ಲ ಆದರೆ ಮೈತ್ರಿ ಧರ್ಮ ಬಿಡಬಾರದೆಂದು ಒಂದು ಸ್ಥಾನ ನೀಡುತ್ತಿದ್ದೇವೆ ಎಂದು ಎಎಪಿ ಹೇಳಿದೆ.

ಕಳೆದ ವಾರ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಅಸ್ಸಾಂನ ಗುವಾಹಟಿ, ಸೋನಿತ್‌ಪುರ ಮತ್ತು ದಿಬ್ರುಗಢ ಲೋಕಸಭಾ ಕ್ಷೇತ್ರಗಳಿಂದ ತನ್ನ ಅಭ್ಯರ್ಥಿಗಳನ್ನು ಏಕಪಕ್ಷೀಯವಾಗಿ ಘೋಷಿಸಿತು. ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಅಭ್ಯರ್ಥಿಗಳ ಅರ್ಹತೆ ಮತ್ತು ಗೆಲುವಿನ ಆಧಾರದ ಮೇಲೆ ಗೋವಾ, ಗುಜರಾತ್ ಮತ್ತು ಅಸ್ಸಾಂನಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಎಪಿ ನಾಯಕ ಸಂದೀಪ್ ಪಾಠಕ್ ಹೇಳಿದ್ದಾರೆ.

ಮತ್ತಷ್ಟು ಓದಿ: ದೆಹಲಿ: ಮೈತ್ರಿ ಧರ್ಮ ಬಿಡಬಾರದೆಂದು 1 ಲೋಕಸಭಾ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುತ್ತೇವೆ: ಆಮ್​ ಆದ್ಮಿ ಪಕ್ಷ

ಎಎಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸುವುದರ ಹಿಂದಿನ ಕಾರಣವನ್ನು ವಿವರಿಸಿದ ಪಾಠಕ್, ಕಳೆದ ತಿಂಗಳು ಸೀಟು ಹಂಚಿಕೆ ಕುರಿತು ಕಾಂಗ್ರೆಸ್‌ನೊಂದಿಗೆ ಚರ್ಚೆ ನಡೆಸುವ ಪ್ರಯತ್ನ ಪದೇ ಪದೇ ವಿಫಲವಾಗಿದೆ ಎಂದು ಹೇಳಿದ್ದಾರೆ. ನಾವು ಜನವರಿ 8 ಮತ್ತು ಜನವರಿ 12 ರಂದು ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಕುರಿತು ಎರಡು ಅಧಿಕೃತ ಸಭೆಗಳನ್ನು ನಡೆಸಿದ್ದೇವೆ. ಎರಡೂ ಸಭೆಗಳು ಸೌಹಾರ್ದಯುತ ವಾತಾವರಣದಲ್ಲಿ ನಡೆದವು. ಆದರೆ ಯಾವುದೇ ಫಲಿತಾಂಶ ಬಂದಿಲ್ಲ ಎಂದರು.

ಆ ನಂತರ ಕಾಂಗ್ರೆಸ್‌ನೊಂದಿಗೆ ಯಾವುದೇ ಸಭೆ ನಡೆದಿಲ್ಲ ಮತ್ತು ಪಕ್ಷದ ಕೆಲವು ಪ್ರಮುಖ ನಾಯಕರು ಸೀಟು ಹಂಚಿಕೆಯ ಮಾತುಕತೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಸುಳಿವಿಲ್ಲ ಎಂದು ಪಾಠಕ್ ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸುವುದು, ಚುನಾವಣೆಗಳನ್ನು ಗೆಲ್ಲುವುದು ಮತ್ತು ದೇಶಕ್ಕೆ ಹೊಸ ಆಯ್ಕೆಯನ್ನು ನೀಡುವುದು ಮೈತ್ರಿಯ ಉದ್ದೇಶ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದರು. ಚುನಾವಣೆಗೆ ಸ್ಪರ್ಧಿಸಲು ಸಂಬಂಧಿಸಿದ ಎಲ್ಲಾ ವಿಷಯಗಳು ಮುಖ್ಯವಾಗುತ್ತವೆ. ಇದು ಘೋಷಣೆಗಳನ್ನು ಮಾಡುವುದು, ನಿಮ್ಮ ಪ್ರಚಾರವನ್ನು ಯೋಜಿಸುವುದು, ಎಲ್ಲರನ್ನೂ ಒಟ್ಟುಗೂಡಿಸುವುದು ಮತ್ತು ಈ ಚುನಾವಣೆಯನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದರ ಕುರಿತು ಚರ್ಚಿಸುವುದು ಸೇರಿದೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:04 am, Wed, 14 February 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us