ಪಂಜಾಬ್​​ನಲ್ಲಿ ಭದ್ರತಾ ಲೋಪದ ನಂತರ ಮೋದಿ ದೀರ್ಘಾಯುಷ್ಯಕ್ಕಾಗಿ ಶಿವರಾಜ್ ಸಿಂಗ್ ಚೌಹಾಣ್ ಪ್ರಾರ್ಥನೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 06, 2022 | 3:43 PM

ಭೋಪಾಲ್‌ನ ಗುಫಾ (ಗುಹೆ) ದೇವಸ್ಥಾನದಲ್ಲಿ ಚೌಹಾಣ್ ಮಹಾಮೃತ್ಯುಂಜಯ್ ಮಂತ್ರವನ್ನು ಪಠಿಸಿದರು. ಪ್ರಧಾನಿಯವರ ಸುರಕ್ಷತೆಗಾಗಿ ರಾಜ್ಯದ ಇತರ ದೊಡ್ಡ ದೇವಾಲಯಗಳಾದ ಮಹಾಕಾಳೇಶ್ವರ ಮತ್ತು ಓಂಕಾರೇಶ್ವರ ದೇವಾಲಯಗಳಲ್ಲಿಯೂ ಮಂತ್ರವನ್ನು ಜಪಿಸಲಾಯಿತು.

ಪಂಜಾಬ್​​ನಲ್ಲಿ ಭದ್ರತಾ ಲೋಪದ ನಂತರ ಮೋದಿ ದೀರ್ಘಾಯುಷ್ಯಕ್ಕಾಗಿ ಶಿವರಾಜ್ ಸಿಂಗ್ ಚೌಹಾಣ್ ಪ್ರಾರ್ಥನೆ
ಶಿವರಾಜ್ ಸಿಂಗ್ ಚೌಹಾಣ್ ಪ್ರಾರ್ಥನೆ
Follow us on

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ (NarendraMdoi) ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದಾರೆ. ಪ್ರಧಾನಿಯವರ ಪಂಜಾಬ್ (Punjab) ಭೇಟಿ ವೇಳೆ ಅವರು ಸಂಚರಿಸುತ್ತಿದ್ದ ವಾಹನ ಪ್ರತಿಭಟನೆಯಿಂದಾಗಿ ಪಂಜಾಬ್‌ನ ಫ್ಲೈಓವರ್ ನಲ್ಲಿ ಸಿಕ್ಕಿಹಾಕಿಕೊಂಡ ಒಂದು ದಿನದ ನಂತರ ಚೌಹಾಣ್ ಈ ಪೂಜೆ ನಡೆಸಿದ್ದಾರೆ. ಭೋಪಾಲ್‌ನ ಗುಫಾ (ಗುಹೆ) ದೇವಸ್ಥಾನದಲ್ಲಿ ಚೌಹಾಣ್ ಮಹಾಮೃತ್ಯುಂಜಯ್ ಮಂತ್ರವನ್ನು ಪಠಿಸಿದರು. ಪ್ರಧಾನಿಯವರ ಸುರಕ್ಷತೆಗಾಗಿ ರಾಜ್ಯದ ಇತರ ದೊಡ್ಡ ದೇವಾಲಯಗಳಾದ ಮಹಾಕಾಳೇಶ್ವರ ಮತ್ತು ಓಂಕಾರೇಶ್ವರ ದೇವಾಲಯಗಳಲ್ಲಿಯೂ ಮಂತ್ರವನ್ನು ಜಪಿಸಲಾಯಿತು. ಮೋದಿಯನ್ನು “ಭಾರತದ ಕಿರೀಟ ರತ್ನ” ಎಂದು ಕರೆದ ಚೌಹಾಣ್, ಪ್ರಧಾನಿಯವರು “ವಿಶ್ವದಾದ್ಯಂತ ಭಾರತದ ಗೌರವ ಮತ್ತು ಘನತೆ ಹೆಚ್ಚಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಬುಧವಾರ ಪಂಜಾಬ್‌ನ ಫಿರೋಜ್‌ಪುರದಲ್ಲಿ ಪ್ರಧಾನಿಯವರ ರ್ಯಾಲಿಯನ್ನು “ಪ್ರಮುಖ ಭದ್ರತಾ ಲೋಪ” ದ ನಂತರ ರದ್ದುಗೊಳಿಸಲಾಯಿತು. ಪಾಕಿಸ್ತಾನದ ಹುಸೇನಿವಾಲಾ ಗಡಿಯಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳುತ್ತಿದ್ದಾಗ ಕೃಷಿ ಪ್ರತಿಭಟನಾಕಾರರು ಅವರ ಬೆಂಗಾವಲು ವಾಹನದ ಮಾರ್ಗವನ್ನು ತಡೆದ ನಂತರ ಮೋದಿ ಅವರ ಬೆಂಗಾವಲು ಪಂಜಾಬ್‌ನ ಫ್ಲೈಓವರ್‌ನಲ್ಲಿ 15-20 ನಿಮಿಷಗಳ ಕಾಲ ಸಿಲುಕಿತ್ತು. ‘ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿಯೇ ಪ್ರಧಾನಿಗೆ ಹಾನಿಗೊಳಿಸುವ ಸನ್ನಿವೇಶವನ್ನು ನಿರ್ಮಿಸಿದೆ’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಇದು ಮಾತ್ರವಲ್ಲದೆ, ಮಧ್ಯಪ್ರದೇಶದ ಮಹಿಳಾ ಘಟಕವು ಪಂಜಾಬ್‌ನಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮಹಾಮೃತ್ಯುಂಜಯ ಪಠಣವನ್ನೂ ಮಾಡಲಿದೆ. ರಾಷ್ಟ್ರ ರಾಜಧಾನಿಯಲ್ಲಿನ ಕೇಂದ್ರ ನಾಯಕರ ಪೈಕಿ ಮಾಜಿ ಸಂಸದ ಬೈಜಯಂತ್ ಪಾಂಡಾ ಜಂಡೆವಾಲಾ ದೇವಾಲಯಕ್ಕೆ, ರಾಜ್ಯಸಭಾ ಸಂಸದ ಅರುಣ್ ಸಿಂಗ್ ಪ್ರೀತ್ ವಿಹಾರ್‌ನಲ್ಲಿರುವ ದೇವಾಲಯಕ್ಕೆ ಮತ್ತು ಮೇಲ್ಮನೆ ಸಂಸದ ದುಷ್ಯಂತ್ ಗೌತಮ್ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಬಿಜೆಪಿಯ ಯುವ ಮೋರ್ಚಾ ದೇಶಾದ್ಯಂತ ಮೆರವಣಿಗೆ ನಡೆಸಲಿದೆ. “ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ನಿನ್ನೆ ಪ್ರಧಾನಿಯವರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿದೆ. ಇದು ಪ್ರಧಾನಿ ಕಚೇರಿಯ ಮೇಲೆ ಮಾತ್ರವಲ್ಲದೆ ಪ್ರಜಾಪ್ರಭುತ್ವದ ಮೇಲೆಯೇ ದಾಳಿಯಾಗಿದೆ. ಈ ಅಪರಾಧ ಕೃತ್ಯವನ್ನು BJYM ಬಲವಾಗಿ ಖಂಡಿಸುತ್ತದೆ. ಬಿಜೆವೈಎಂ ಇಂದು ಸಂಜೆ 6 ಗಂಟೆಗೆ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಮಶಾಲ್ ಮೆರವಣಿಗೆಗಳನ್ನು ನಡೆಸಲಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.


ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಮತ್ತು ರಾಜ್ಯ ಘಟಕದ ಇತರ ಹಿರಿಯ ನಾಯಕರು ಮಹಾಮೃತ್ಯುಂಜಯವನ್ನು ನಡೆಸಲಿದ್ದಾರೆ.

ಇದನ್ನೂ ಓದಿ: ಪಂಜಾಬ್​​ ಭದ್ರತಾ ಲೋಪದ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್​ಗೆ ವಿವರಿಸಿದ ಪ್ರಧಾನಿ ಮೋದಿ; ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ

Published On - 3:27 pm, Thu, 6 January 22