AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಚ್ ಬೆಹಾರ್​ ಸಾವುಗಳನ್ನು ಕೇಂದ್ರೀಯ ಪಡೆಗಳು ನಡೆಸಿದ ಹತ್ಯಾಕಾಂಡ ಎಂದ ಮಮತಾ ಬ್ಯಾನರ್ಜಿ

West Bengal Assembly Elections 2021: ಕೂಚ್ ​ಬೆಹಾರ್ ಜಿಲ್ಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು (Central Industrial Security Force - CISF) ನಡೆಸಿದ ಹತ್ಯಾಕಾಂಡವಿದು ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ.

ಕೂಚ್ ಬೆಹಾರ್​ ಸಾವುಗಳನ್ನು ಕೇಂದ್ರೀಯ ಪಡೆಗಳು ನಡೆಸಿದ ಹತ್ಯಾಕಾಂಡ ಎಂದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Ghanashyam D M | ಡಿ.ಎಂ.ಘನಶ್ಯಾಮ
| Updated By: ರಶ್ಮಿ ಕಲ್ಲಕಟ್ಟ|

Updated on:Apr 11, 2021 | 4:50 PM

Share

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ 4ನೇ ಹಂತದ ಚುನಾವಣೆಯಲ್ಲಿ ಭದ್ರತಾಪಡೆಗಳು ಹಾರಿಸಿದ ಗುಂಡಿಗೆ ಐವರು ಬಲಿಯಾಗಿರುವುದನ್ನು ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಕೂಚ್ ​ಬೆಹಾರ್ ಜಿಲ್ಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು (Central Industrial Security Force – CISF) ನಡೆಸಿದ ಹತ್ಯಾಕಾಂಡವಿದು ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ.

ಇದು ಹತ್ಯಾಕಾಂಡವಲ್ಲದೆ ಮತ್ತೇನೂ ಅಲ್ಲ. ಜನರ ಎದೆಯ ಮೇಲೆ ಗುಂಡು ಹಾರಿಸಲಾಗಿದೆ. ಅವರ ಉದ್ದೇಶವು ಗುಂಪು ಚೆದುರಿಸುವುದೇ ಆಗಿದ್ದರೆ ಜನರ ಕಾಲಿಗೆ ಗುಂಡು ಹಾರಿಸಬಹುದಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸೀತಾಲ್​ಗುಚಿ ಕ್ಷೇತ್ರದ 126ನೇ ಮತಗಟ್ಟೆಯಲ್ಲಿ ಕರ್ತವ್ಯದ ಮೇಲಿದ್ದ ಸಿಐಎಸ್​ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದರು. ಈ ವೇಳೆ 4 ಮಂದಿ ಮೃತಪಟ್ಟಿದ್ದರು.

ಸಿತಾಲ್​ಗುಚಿಗೆ ಮುಂದಿನ 72 ಗಂಟೆಗಳ ಅವಧಿಯಲ್ಲಿ ಹೊರಗಿನ ಯಾವುದೇ ರಾಜಕಾರಿಣಿಗಳು ಪ್ರವೇಶಿಸಬಾರದು ಎಂದು ಚುನಾವಣಾ ಆಯೋಗವು ಆದೇಶಿಸಿದೆ. ಈ ಆದೇಶವನ್ನೂ ಮಮತಾ ಖಂಡಿಸಿದ್ದಾರೆ. ನೊಂದ ಕುಟುಂಬಗಳನ್ನು ನಾನು ಭೇಟಿಯಾಗಬಾರದು ಎಂಬ ಒಂದೇ ಉದ್ದೇಶದಿಂದ ಆಯೋಗವು ಇಂಥ ಆದೇಶ ಹೊರಡಿಸಿದೆ ಎಂದು ದೂರಿದರು. ಸುದ್ದಿಗೋಷ್ಠಿ ನಡೆಯುತ್ತಿದ್ದಾಗಲೇ ಮೃತರ ಹತ್ತಿರದ ಸಂಬಂಧಿಯೊಂದಿಗೆ ಮಮತಾ ವಿಡಿಯೊ ಕಾನ್ಫರೆನ್ಸ್​ ಮೂಲಕ ಮಾತನಾಡಿದರು.

ನೊಂದ ಕುಟುಂಬಗಳನ್ನು ನಾನು ಭೇಟಿಯಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಇಂಥ ಆದೇಶ ಹೊರಡಿಸಿರುವುದು ದುರದೃಷ್ಟಕರ. ಆಯೋಗ ವಿಧಿಸಿರುವ 72 ಗಂಟೆಗಳ ನಿರ್ಬಂಧ ಮುಗಿದ ತಕ್ಷಣ ನಾನು ಆ ಕುಟುಂಬಗಳನ್ನು ಭೇಟಿಯಾಗುತ್ತೇನೆ. ನನ್ನ ಚುನಾವಣಾ ವೆಚ್ಚದ ನಿಧಿಯಿಂದಲೇ ಆ ಕುಟುಂಬಗಳಿಗೆ ಸಾಧ್ಯವಾದಮಟ್ಟಿಗೂ ಹಣಸಹಾಯ ಮಾಡುತ್ತೇನೆ ಎಂದು ಮಮತಾ ಭರವಸೆ ನೀಡಿದರು.

ಚುನಾವಣಾ ಆಯೋಗದ ನಿರ್ಧಾರವನ್ನು ಶನಿವಾರ ಟ್ವೀಟ್​ ಮೂಲಕ ಖಂಡಿಸಿದ್ದ ಮಮತಾ ಬ್ಯಾನರ್ಜಿ, ಎಂಸಿಸಿಯನ್ನು ಮೋದಿ ಕೋಡ್ ಆಫ್ ಕಂಡಕ್ಟ್​ ಎಂದು ಮರುನಾಮಕರಣ ಮಾಡಬೇಕು ಎಂದು ಛೇಡಿಸಿದ್ದರು. ಚುನಾವಣಾ ನೀತಿ ಸಂಹಿತೆಗೆ (Model Code of Conduct – MCC) ಸಂಕ್ಷಿಪ್ತವಾಗಿ ಎಂಸಿಸಿ ಎನ್ನಲಾಗುತ್ತದೆ. ಈ ಅಕ್ಷರಗಳನ್ನೇ ವ್ಯಂಗ್ಯವಾಡಿದ್ದ ಮಮತಾ, ಬಿಜೆಪಿಯು ತನ್ನೆಲ್ಲಾ ಅಧಿಕಾರ ಬಳಸಿಕೊಳ್ಳಲು ಅವಕಾಶವಿದೆ. ಆದರೆ ನನ್ನನ್ನು ನೊಂದ ನನ್ನ ಜನರಿಂದ ದೂರ ಇಡಲು ಯಾರಿಗೂ ಸಾಧ್ಯವಿಲ್ಲ. ಅವರ ನೋವನ್ನು ನಾನು ಹಂಚಿಕೊಳ್ಳುತ್ತೇನೆ. ಕೂಚ್​ಬೆಹಾರ್​ಗೆ ಮುಂದಿನ ಮೂರು ದಿನ ನಾನು ಭೇಟಿ ನೀಡಲು ಅವರು ನಿರ್ಬಂಧಿಸಿರಬಹುದು. ಆದರೆ 4ನೇ ದಿನ ನಾನು ಅಲ್ಲಿರುತ್ತೇನೆ ಎಂದು ಮಮತಾ ಹೇಳಿದ್ದರು.

(Mamata Banerjee calls Coochbehar CISF firing as Genocide criticizes Violence Outside Bengal Polling Booth)

ಇದನ್ನೂ ಓದಿ: ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; 4ನೇ ಹಂತದ ಮತದಾನದಲ್ಲಿ ಸಿಂಗೂರ್ ಕ್ಷೇತ್ರ ನಿರ್ಣಾಯಕ

ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 2ನೇ ನೋಟಿಸ್ ನೀಡಿದ ಚುನಾವಣಾ ಆಯೋಗ

Published On - 2:02 pm, Sun, 11 April 21