Mangalore: ಬೇಡ ಬೇಡ ಎಂದರೂ ವಿಮಾನ ಇಳಿಸಿದ್ದನಾ ಪೈಲಟ್? ಮಂಗಳೂರು ವಿಮಾನ ದುರಂತದ ಕರಾಳ ನೆನಪು
2010 Air India Express flight incident in Mangalore Bajpe airport: ಅಹ್ಮದಾಬಾದ್ನ ವಿಮಾನ ನಿಲ್ದಾಣದ ಬಳಿ ಏರ್ಇಂಡಿಯಾ ಫ್ಲೈಟ್ವೊಂದು ಅಪಘಾತಕ್ಕೊಳಗಾಗಿ 242 ಮಂದಿ ದುರ್ಮರಣ ಅಪ್ಪಿದ್ದಾರೆ. 2010ರಲ್ಲಿ ಮಂಗಳೂರಿನಲ್ಲೂ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಪಘಾತವಾಗಿ 158 ಮಂದಿ ಬಲಿಯಾಗಿದ್ದರು. ಅಂದಿನ ಘಟನೆಗೆ ಏನು ಕಾರಣ? ಪೈಲಟ್ ಮಾಡಿದ ಯಡವಟ್ಟಾ, ಅಸಮರ್ಪಕ ರನ್ವೇಗಳಾ? ಆ ಘಟನೆಯ ಒಂದು ಕರಾಳ ನೆನಪು ಇಲ್ಲಿದೆ...

ಗುಜರಾತ್ನ ಅಹ್ಮದಾಬಾದ್ನಲ್ಲಿ ಏರ್ ಇಂಡಿಯಾದ ವಿಮಾನ ಅಪಘಾತಕ್ಕೊಳಗಾಗಿ 242 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಸಂಭವಿಸಿರುವ ಹಲವು ಅಪಘಾತಗಳ ಸಾಲಿಗೆ ಇದು ಸೇರ್ಪಡೆಯಾಗಿದೆ. ದೇಶ ಕಂಡ ಭೀಕರ ವಿಮಾನ ಅಪಘಾತ ದುರಂತಗಳಲ್ಲಿ (Plane crash) ಇದೂ ಒಂದೆನಿಸಿದೆ. ಹದಿನೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ವಿಮಾನ ಅಪಘಾತ ದುರ್ಘಟನೆಯೂ (2010 Mangalore plane crash incident) ಕೂಡ ಜನಮಾನಸದಿಂದ ಎಂದೂ ಮರೆಯಲಾಗದ ಕಹಿ ನೆನಪಾಗಿ ಉಳಿದಿದೆ. ಸಿಬ್ಬಂದಿ ತೋರಿದ ಅಚಾತುರ್ಯ ಹಾಗೂ ಅಸುರಕ್ಷಿತ ಏರ್ಪೋರ್ಟ್ ಅಂದಿನ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
2010ರ ಮಂಗಳೂರು ವಿಮಾನ ಅಪಘಾತ ಘಟನೆ
ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 812 ಅಪಘಾತಗೊಂಡಿತ್ತು. ಅದು ಬೋಯಿಂಗ್ 737-8ಎಚ್ಜಿ ವಿಮಾನ. ಅಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ 158 ಮಂದಿ ದುರ್ಮರಣ ಅಪ್ಪಿದ್ದರು.
ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ನಿಂದ ಆ ವಿಮಾನ ಮಂಗಳೂರಿಗೆ ಬಂದಿತ್ತು. ಆರು ಮಂದಿ ಸಿಬ್ಬಂದಿ ಹಾಗೂ 160 ಮಂದಿ ಪ್ರಯಾಣಿಕರು ಸೇರಿ 166 ಮಂದಿ ಆ ವಿಮಾನದಲ್ಲಿದ್ದರು. ಇವರಲ್ಲಿ ಎಂಟು ಮಂದಿ ಪ್ರಯಾಣಿಕರು ಬಿಟ್ಟು ಉಳಿದೆಲ್ಲಾ 158 ಮಂದಿ ಅಸು ನೀಗಿದ್ದರು. ವಿಮಾನವು ಲ್ಯಾಂಡ್ ಆಗುವಾಗ ರನ್ವೇಯಿಂದ ಹೊರಗೆ ಬಂದು ಕೆಳಗಿನ ಕಣಿವೆಗೆ ಜಾರಿ ಬಿದ್ದಿತ್ತು.
ಇದನ್ನೂ ಓದಿ: ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನ; ಎಲ್ಲ 242 ಪ್ರಯಾಣಿಕರ ಸಾವು
ಟೇಬಲ್ ಟಾಪ್ ರನ್ವೇ ಇರುವ ಏರ್ಪೋರ್ಟ್
ಬಜ್ಪೆ ವಿಮಾನ ನಿಲ್ದಾಣದಲ್ಲಿದ್ದ ರನ್ವೇ ಬಹಳ ಅಪಾಯಕಾರಿ ಎನಿಸಿತ್ತು. ಟೇಬಲ್ ಟಾಪ್ ವಿನ್ಯಾಸದ್ದು. ಇಲ್ಲಿಯ ರನ್ವೇಗಳಲ್ಲಿ ವಿಮಾನ ಇಳಿಸುವುದು ಬಹಳ ಅಪಾಯಕಾರಿ. ವಿಮಾನವು ರನ್ವೇ ದಾಟಿ ಕಾಂಪೌಂಡ್ ಸೀಳಿ ಕೆಳಗಿನ ಕಣಿವೆಗೆ ಬಿದ್ದಿತ್ತು. ಇದಕ್ಕೆ ಏರ್ಪೋರ್ಟ್ನ ಟೇಬಲ್ ಟಾಪ್ ರನ್ವೇ ವಿನ್ಯಾಸ ಒಂದು ಕಾರಣ ಇರಬಹುದು.
ವಿಮಾನದ ಕ್ಯಾಪ್ಟನ್ ಮಾಡಿದ ಯಡವಟ್ಟು ಕಾರಣವಾ?
ಅಂದಿನ ಫ್ಲೈಟ್ನಲ್ಲಿ ಪೈಲಟ್ ಸಿಬ್ಬಂದಿ ಮಾಡಿದ ಯಡವಟ್ಟು ಈ ಅಪಘಾತಕ್ಕೆ ಕಾರಣ ಆಗಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಮಾನದ ಕ್ಯಾಪ್ಟನ್ ಆಗಿದ್ದವರು ಝಾಟ್ಕೋ ಗ್ಲೂಶಿಕಾ. ಇವರು ಬ್ರಿಟಿಷ್ ಸರ್ಬಿನ್ ದೇಶದ ಮೂಲದವರು. ಫ್ಲೈಟ್ನ ಫಸ್ಟ್ ಆಫೀಸರ್ ಆಗಿದ್ದವರು ಹರ್ಬಿಂದರ್ ಸಿಂಗ್ ಅಹ್ಲುವಾಲಿಯಾ. ಇಬ್ಬರೂ ಕೂಡ ಅಪಾರ ಫ್ಲೈಟ್ ಅನುಭವಿಗಳು.
ಆದರೆ, ವಿಮಾನವು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವಾಗ ಸಮಸ್ಯೆ ಆಗಿತ್ತು. ಈಗ ಲ್ಯಾಂಡ್ ಆಗುವುದು ಬೇಡ, ಹಾಗೆ ಸುತ್ತಿ ಬಂದು ನಂತರ ಲ್ಯಾಂಡಿಂಗ್ ಮಾಡುವಂತೆ ಫಸ್ಟ್ ಆಫೀಸರ್ ಅವರು ಕ್ಯಾಪ್ಟನ್ಗೆ ಸೂಚಿಸಿದ್ದರಂತೆ. ಆದರೂ ಕೂಡ ಕ್ಯಾಪ್ಟನ್ ಅವರು ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ.
ಇದನ್ನೂ ಓದಿ: ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವು
ಲ್ಯಾಂಡಿಂಗ್ ಮಾಡಲು ಉದ್ದೇಶಿಸಿದ್ದ ಜಾಗದಿಂದ 1,500 ಅಡಿ ದೂರಕ್ಕೆ ಆ ಫ್ಲೈಟ್ ಕೆಳಗಿಳಿದಿದೆ. ಅದಾದ ಬಳಿಕ ರನ್ವೇ ಉದ್ದವು ಫ್ಲೈಟ್ ನಿಲುಗಡೆಗೆ ಸಾಕಾಗುವಷ್ಟಿರಲಿಲ್ಲ. ಹೀಗಾಗಿ, ರನ್ವೇ ಆಚೆ ಹೋಗಿ ಕೆಳಗಿನ ಕಣಿವೆಯೊಳಗೆ ಕುಸಿದಿತ್ತು.
ಸುಸ್ತಾಗಿದ್ದರಾ ಪೈಲಟ್?
ಪೈಲಟ್ ಸಾಕಷ್ಟು ಅವಧಿ ಕೆಲಸ ಮಾಡಿದ್ದರಿಂದ ಬಳಲಿದ್ದಿರಬಹುದು ಎನ್ನುವ ಶಂಕೆ ಇದೆ. ಹಾಗೆಯೇ, ಬ್ಲ್ಯಾಕ್ಬಾಕ್ಸ್ನಿಂದ ಗೊತ್ತಾದ ಮಾಹಿತಿ ಪ್ರಕಾರ, ಕಾಕ್ಪಿಟ್ನೊಳಗೆ ಸ್ಪಷ್ಟ ಸಂವಹನ ಇರಲಿಲ್ಲ. ಫಸ್ಟ್ ಆಫೀಸರ್ನ ಧ್ವನಿ ಬಹಳ ಕ್ಷೀಣವಾಗಿ ಕೇಳುತ್ತಿತ್ತು. ಕ್ಯಾಪ್ಟನ್ಗೆ ಇದು ಸರಿಯಾಗಿ ಕೇಳಿಸಿದೇ ಇದ್ದಿರಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




