ಮೆಹಬೂಬ ಮುಫ್ತಿಗೆ ಮತ್ತೆ ಗೃಹಬಂಧನ; ಜಮ್ಮು ಕಾಶ್ಮೀರದ ನಕಲಿ ಸಹಜಸ್ಥಿತಿ ಬಯಲಾಯ್ತು ಎಂದ ಮಾಜಿ ಸಿಎಂ

ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇದರಿಂದ ಜಮ್ಮು-ಕಾಶ್ಮೀರದ 'ಸಹಜ ಪರಿಸ್ಥಿತಿ' ಎಲ್ಲರೆದುರು ಬಯಲಾದಂತಾಗಿದೆ ಎಂದು ಮೆಹಬೂಬ ಮುಫ್ತಿ ವ್ಯಂಗ್ಯವಾಡಿದ್ದಾರೆ.

ಮೆಹಬೂಬ ಮುಫ್ತಿಗೆ ಮತ್ತೆ ಗೃಹಬಂಧನ; ಜಮ್ಮು ಕಾಶ್ಮೀರದ ನಕಲಿ ಸಹಜಸ್ಥಿತಿ ಬಯಲಾಯ್ತು ಎಂದ ಮಾಜಿ ಸಿಎಂ
ಮೆಹಬೂಬಾ ಮುಫ್ತಿ
Updated By: ಸುಷ್ಮಾ ಚಕ್ರೆ

Updated on: Sep 07, 2021 | 4:00 PM

ಶ್ರೀನಗರ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಮೆಹಬೂಬ ಮುಫ್ತಿ, ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇದರಿಂದ ಜಮ್ಮು-ಕಾಶ್ಮೀರದ ‘ಸಹಜ ಪರಿಸ್ಥಿತಿ’ ಎಲ್ಲರೆದುರು ಬಯಲಾದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆಯೂ ಆಗಿರುವ ಮಾಜಿ ಸಿಎಂ ಮೆಹಬೂಬ ಮುಫ್ತಿ, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆ ಸಹಜ ಸ್ಥಿತಿ ಏನೆಂಬುದು ಈಗ ಬಯಲಾಗಿದೆ. ಮೋದಿ ಸರ್ಕಾರ ಅಫ್ಘಾನಿಸ್ತಾನದಲ್ಲಿರುವ ಜನರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ. ಆದರೆ, ತಮ್ಮದೇ ದೇಶದ ಕಾಶ್ಮೀರಿಗಳಿಗೆ ಸಿಗಬೇಕಾದ ಹಕ್ಕುಗಳನ್ನು ನಿರಾಕರಿಸುತ್ತಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದರಿಂದ ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಬೆಳಗ್ಗೆಯಿಂದ ಇಂಟರ್ನೆಟ್ ಬಳಕೆಯ ನಿರ್ಬಂಧವನ್ನು ಒಳಗೊಂಡಂತೆ ಅನೇಕ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಕಾಶ್ಮೀರ ಮತ್ತು ಜಮ್ಮುವಿನ ಎರಡೂ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೆ. 1ರಂದು ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗೀಲಾನಿ ನಿಧನದ ನಂತರ ಜಮ್ಮು ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ರಾಜಕಾರಣದ ಮುಖವಾಗಿದ್ದ ಇಸ್ಲಾಮಿಸ್ಟ್ ನಾಯಕ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇದನ್ನೂ ಓದಿ: Syed Ali Shah Geelani ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ; ಕಾಶ್ಮೀರದಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ಹೇರಿಕೆ

(Former CM Mehbooba Mufti placed under house arrest calls out fake claims of normalcy in Jammu Kashmir)