AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿ: ಐವರು ಸ್ಥಳದಲ್ಲೇ ಸಾವು, ಮೂವರು ಗಂಭೀರ

ಒಡಿಶಾದ ಝಾರ್ಸುಗುಡಾ ಬಳಿ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಐವರು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ತವ್ಯನಿರತ ಪೊಲೀಸರು ಜೀವ ಕಳೆದುಕೊಂಡಿರುವುದು ಝಾರ್ಸುಗುಡಾದಾದ್ಯಂತ ಶೋಕಕ್ಕೆ ಕಾರಣವಾಗಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿದಿದೆ.

ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿ: ಐವರು ಸ್ಥಳದಲ್ಲೇ ಸಾವು, ಮೂವರು ಗಂಭೀರ
ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿImage Credit source: Google
ಪ್ರಸನ್ನ ಹೆಗಡೆ
|

Updated on:Feb 22, 2026 | 10:23 AM

Share

ಝಾರ್ಸುಗುಡಾ, ಫೆಬ್ರವರಿ 22: ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿಯಾಗಿ ಐವರು ದುರ್ಮರಣ ಹೊಂದಿರುವ ಘಟನೆ ಒಡಿಶಾದ ಝಾರ್ಸುಗುಡಾ ಬಳಿ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ನಡೆದಿದೆ. ಟ್ರಕ್ ಮತ್ತು ಪೊಲೀಸ್​ ವ್ಯಾನ್ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದ್ದು, ಐವರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಪಿಆರ್ ಸಿಬ್ಬಂದಿಗಳಾದ ಕಾಶಿರಾಮ್ ಭೋಯಿ ಮತ್ತು ದೇವದತ್ತ ಸಾ, ಡ್ರಿಲ್ ಸಬ್-ಇನ್ಸ್‌ಪೆಕ್ಟರ್ ನಿರಂಜನ್ ಕುಜುರ್, ಎಪಿಆರ್ ಹವೀಲ್ದಾರ್ ಲಿಂಗರಾಜ್ ಧುರೂವಾ ಹಾಗೂ ಹೋಮ್ ಗಾರ್ಡ್ ಭಕ್ತಬಂಧು ಮಿರ್ಧಾ ಮೃತ ದುರ್ದೈವಿಗಳಾಗಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪೊಲೀಸ್ ವಾಹನವು ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್​​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಬೊಲೆರೊ ವಾಹನ ಸಂಪೂರ್ಣ ಜಖಂ ಆಗಿರುವ ಪರಿಣಾಮ ಐವರು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು  ಸಿಬ್ಬಂದಿಗಳು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ರಕ್ಷಿಸಿ ಝಾರ್ಸುಗುಡಾ ಜಿಲ್ಲಾ ಮುಖ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ಅವರ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಚಾಕೋಲೇಟ್ ಆಸೆ ತೋರಿಸಿ ರೈಲ್ವೆ ಸ್ಟೇಷನ್​​ನಲ್ಲೇ 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ಟ್ರಕ್​​ ಚಾಲಕ ವಶಕ್ಕೆ

ಝಾರ್ಸುಗುಡಾ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಗುಂಡಾಲ ರಾಘವೇಂದ್ರ ರೆಡ್ಡಿ ಅವರ ಮಾಹಿತಿ ಪ್ರಕಾರ, ಈ ಅಪಘಾತವು ಬೆಳಗಿನ ಜಾವ ಝಾರ್ಸುಗುಡಾ ಸದರ್ ಪೊಲೀಸ್ ಠಾಣೆ ಎದುರಲ್ಲೇ ಸಂಭವಿಸಿದೆ. ನಿಯಮಿತ ಪೆಟ್ರೋಲ್ ಕರ್ತವ್ಯದಲ್ಲಿದ್ದ ಪೊಲೀಸ್ ವಾಹನಕ್ಕೆ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬರುತ್ತಿದ್ದ ಟ್ರಕ್​​ ಡಿಕ್ಕಿ ಹೊಡೆದಿದೆ. ಪೊಲೀಸರು ಟ್ರಕ್​​ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬೆದು ತನಿಖೆ ಬಳಿಕ ಇನ್ನಷ್ಟೇ ಗೊತ್ತಾಗಬೇಕಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರ್ತವ್ಯ ನಿರ್ವಹಿಸುವಾಗಲೇ ಪೊಲೀಸ್​​ ಸಿಬ್ಬಂದಿ ಜೀವ ಕಳೆದುಕೊಂಡ ಹಿನ್ನೆಲೆ ಜಾರ್ಸುಗುಡಾದಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:22 am, Sun, 22 February 26