ಕಾಂಗ್ರೆಸ್ ಪಕ್ಷಕ್ಕೆ ಬಿಆರ್‌ಎಸ್ ಶಾಸಕ ಸೇರ್ಪಡೆ; ಪಕ್ಷಾಂತರ ಮಾಡಿದ ಏಳನೇ ಶಾಸಕರಿವರು

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕೃಷ್ಣಮೋಹನ್ ರೆಡ್ಡಿ ಅವರು ಕಾಂಗ್ರೆಸ್ ಸೇರಿದರು. ಕಳೆದ ವರ್ಷ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 119 ಸ್ಥಾನಗಳಲ್ಲಿ ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿತ್ತು.ಕಳೆದ ವರ್ಷ ನವೆಂಬರ್‌ನಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರು ಕಾಂಗ್ರೆಸ್‌ಗೆ ಸೇರಿದ ಏಳನೇ ಬಿಆರ್‌ಎಸ್ ಶಾಸಕರಾಗಿದ್ದಾರೆ

ಕಾಂಗ್ರೆಸ್ ಪಕ್ಷಕ್ಕೆ ಬಿಆರ್‌ಎಸ್ ಶಾಸಕ ಸೇರ್ಪಡೆ; ಪಕ್ಷಾಂತರ ಮಾಡಿದ ಏಳನೇ ಶಾಸಕರಿವರು
ಬಂಡ್ಲಾ ಕೃಷ್ಣ ಮೋಹನ್ ರೆಡ್ಡಿ
ರಶ್ಮಿ ಕಲ್ಲಕಟ್ಟ

Updated on: Jul 06, 2024 | 8:48 PM

ಹೈದರಾಬಾದ್ ಜುಲೈ 06: ತೆಲಂಗಾಣದಲ್ಲಿ (Telangana) ಭಾರತ್ ರಾಷ್ಟ್ರ ಸಮಿತಿಗೆ (BRS) ಮತ್ತೊಂದು ಹಿನ್ನಡೆಯಾಗಿದ್ದು, ಗದ್ವಾಲ್‌ನ ಶಾಸಕ ಬಂಡ್ಲಾ ಕೃಷ್ಣ ಮೋಹನ್ ರೆಡ್ಡಿ ಶನಿವಾರ ಆಡಳಿತಾರೂಢ ಕಾಂಗ್ರೆಸ್‌ಗೆ (Congress) ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರು ಕಾಂಗ್ರೆಸ್‌ಗೆ ಸೇರಿದ ಏಳನೇ ಬಿಆರ್‌ಎಸ್ ಶಾಸಕರಾಗಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕೃಷ್ಣಮೋಹನ್ ರೆಡ್ಡಿ ಅವರು ಕಾಂಗ್ರೆಸ್ ಸೇರಿದರು. ಕಳೆದ ವರ್ಷ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 119 ಸ್ಥಾನಗಳಲ್ಲಿ ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿತ್ತು. ಸಿಕಂದರಾಬಾದ್ ಕಂಟೋನ್ಮೆಂಟ್‌ನ ಬಿಆರ್‌ಎಸ್ ಶಾಸಕಿ ಜಿ ಲಾಸ್ಯ ನಂದಿತಾ ಅವರು ಫೆಬ್ರವರಿ 23 ರಂದು ರಸ್ತೆ ಅಪಘಾತದಲ್ಲಿ ಸಾವಿಗೀಡಾದ ನಂತರ ಕಾಂಗ್ರೆಸ್  ಉಪಚುನಾವಣೆಯಲ್ಲಿ ಈ ಸ್ಥಾನ ಗೆದ್ದಿತ್ತು.

ಏಳು ಬಿಆರ್‌ಎಸ್ ಶಾಸಕರು ಪಕ್ಷ ಬದಲಾಯಿಸುವುದರೊಂದಿಗೆ ಕಾಂಗ್ರೆಸ್ ಶಾಸಕರ ಸಂಖ್ಯೆ 72 ಕ್ಕೆ ಏರಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಬಿಆರ್‌ಎಸ್ ಶಾಸಕರಾದ ಕಾಳೆ ಯಾದಯ್ಯ (ಚೆವೆಲ್ಲಾ), ಬಿಆರ್‌ಎಸ್ ಆಡಳಿತದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಪೋಚಾರಂ ಶ್ರೀನಿವಾಸ್ ರೆಡ್ಡಿ (ಬಾನ್ಸವಾಡ), ಸಂಜಯ್ ಕುಮಾರ್ (ಜಗ್ತಿಯಾಲ್), ದಾನಂ ನಾಗೇಂದರ್ (ಖೈರತಾಬಾದ್), ಕಡಿಯಂ ಶ್ರೀಹರಿ (ಸ್ಟೇಷನ್ ಘನಪುರ), ಮತ್ತು ತೆಲ್ಲಂ ವೆಂಕಟ್ ರಾವ್ (ಭದ್ರಾಚಲಂ) ಕಾಂಗ್ರೆಸ್ ಸೇರಿದ್ದಾರೆ.

ಗುರುವಾರ ರಾತ್ರಿ, ಆರು ಬಿಆರ್‌ಎಸ್ ಎಂಎಲ್‌ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು 40 ಸದಸ್ಯರ ವಿಧಾನ ಪರಿಷತ್ತಿನಲ್ಲಿ ಪಕ್ಷದ ಎಂಎಲ್‌ಸಿ ಬಲವನ್ನು 12 ಕ್ಕೆ ಹೆಚ್ಚಿಸಿದರು. ಎಂಎಲ್‌ಸಿಗಳಲ್ಲಿ ದಂಡೆ ವಿಟ್ಟಲ್, ಭಾನು ಪ್ರಸಾದ್, ಬಿ ದಯಾನಂದ್, ಪ್ರಭಾಕರ್ ರಾವ್, ಎಗ್ಗೆ ಮಲ್ಲೇಶಂ ಮತ್ತು ಬಸವರಾಜು ಸರಯ್ಯ ಸೇರಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ನಂತರ ತೆಲಂಗಾಣ ರಾಷ್ಟ್ರ ಸಮಿತಿ, ಈಗ ಬಿಆರ್‌ಎಸ್ ಅಧಿಕಾರಕ್ಕೆ ಬಂದಾಗ 2014 ರ ಮೊದಲು ಅವರೆಲ್ಲರೂ ಕಾಂಗ್ರೆಸ್‌ನಲ್ಲಿದ್ದರು, ನಂತರ ಅವರು ಪಕ್ಷ ಬದಲಾಯಿಸಿದರು.

ಇದನ್ನೂ ಓದಿ: 8 ವರ್ಷ ಪ್ರೀತಿಸಿದರೂ ಜೊತೆಗಿದ್ದಿದ್ದು ಎರಡೇ ತಿಂಗಳು; ವೀರಮರಣವನ್ನಪ್ಪಿದ ಯೋಧ ಅಂಶುಮಾನ್ ಲವ್ ಸ್ಟೋರಿ

ರಸ್ತೆ ಮತ್ತು ಕಟ್ಟಡಗಳ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರು, ಹಲವಾರು ಬಿಆರ್‌ಎಸ್ ಶಾಸಕರು ಪಕ್ಷ ಬದಲಾಯಿಸಲು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ವಾರದ ಆರಂಭದಲ್ಲಿ, ಬಿಆರ್‌ಎಸ್‌ನ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರ ಆಪ್ತರಾಗಿದ್ದ ಕೆ ಕೇಶವ ರಾವ್ ಅವರು ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಹೈದರಾಬಾದ್ ಮೇಯರ್ ಅವರ ಪುತ್ರಿ ಜಿ ವಿಜಯಲಕ್ಷ್ಮಿ ಕೂಡ ಪಕ್ಷ ಬದಲಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us