
ನವದೆಹಲಿ, ನವೆಂಬರ್ 03: ದೆಹಲಿಯ ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಬಿಹಾರದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಆನಂದ್ ವಿಹಾರ್ ನಿಲ್ದಾಣದ ಬಳಿ ರೈಲ್ವೆ ಎಂಜಿನಿಯರ್ ಒಬ್ಬರ ಕಾರಿನ ಹಿಂದಿನ ಸೀಟಿನಲ್ಲಿ 28 ವರ್ಷದ ವ್ಯಕ್ತಿಯ ಶವ(Dead Body) ಪತ್ತೆಯಾಗಿದ್ದು, ಬಿಹಾರ ಮೂಲದ ವ್ಯಕ್ತಿ ಕಾರಿನಲ್ಲಿ ಸಿಲುಕಿಕೊಂಡು ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 31 ರಂದು ಸಂಜೆ 7.30 ರ ಸುಮಾರಿಗೆ ನಿಲ್ಲಿಸಿದ್ದ ಕಾರಿನಲ್ಲಿ ಶವದ ಬಗ್ಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಒಂದು ತಂಡ ಧಾವಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಬಿಹಾರದ ಪೂರ್ಣಿಯಾ ನಿವಾಸಿ ಜಾವೇದ್ ಎಂದು ಗುರುತಿಸಲಾಗಿದೆ. ಅವರ ಬಳಿ ಮೊಬೈಲ್ ಫೋನ್ ಮತ್ತು ಬಟ್ಟೆಗಳು ಪತ್ತೆಯಾಗಿವೆ. ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ಪ್ರಕಾರ, ಅದೇ ದಿನ ಬೆಳಗ್ಗೆ 10.49 ರ ಸುಮಾರಿಗೆ, ಹಿರಿಯ ವಿಭಾಗ ಎಂಜಿನಿಯರ್ (ಎಲೆಕ್ಟ್ರಿಕಲ್) ಗುರು ಪ್ರತಾಪ್ ತಮ್ಮ ಕಾರನ್ನು ನಿಲ್ಲಿಸಿ, ಅದಕ್ಕೆ ಬೀಗ ಹಾಕದೆ ತಮ್ಮ ಕಚೇರಿಗೆ ಹೋಗಿದ್ದಾರೆ ಎಂದು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿವೆ.
ಮತ್ತಷ್ಟು ಒದಿ: ವರದಕ್ಷಿಣೆಗಾಗಿ ಮಗಳ ಕೊಲೆ, ಆಕೆಯ ಶವ ನೋಡಿ ಪ್ರಾಣಬಿಟ್ಟ ತಾಯಿ
ಬೆಳಗ್ಗೆ 11.22 ರ ಸುಮಾರಿಗೆ, ಬಿಹಾರಕ್ಕೆ ಪ್ರಯಾಣಿಸಲು ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿದ್ದ ಮೇಸ್ತ್ರಿ ಜಾವೇದ್, ಕಾರನ್ನು ಹತ್ತಿ ಅದರ ಹಿಂದಿನ ಸೀಟಿನಲ್ಲಿ ಕುಳಿತರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಧ್ಯಾಹ್ನ 1.50 ರ ಸುಮಾರಿಗೆ, ಎಂಜಿನಿಯರ್ ಸಿಬ್ಬಂದಿಯೊಬ್ಬರು ಕಾರಿನಿಂದ ಊಟದ ಡಬ್ಬಿಯನ್ನು ತೆಗೆದುಕೊಳ್ಳಲು ಬಂದರು ಮತ್ತು ಜಾವೇದ್ ಒಳಗೆ ಇದ್ದಾನೆ ಎಂದು ತಿಳಿಯದೆ ಅದನ್ನು ಲಾಕ್ ಮಾಡಿದ್ದಾರೆ. ಮಧ್ಯಾಹ್ನ 1.54 ರಿಂದ 3.13 ರ ನಡುವೆ ಜಾವೇದ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು.
ಸಂಜೆ 5.34 ರ ಸುಮಾರಿಗೆ, ಗುರು ಪ್ರತಾಪ್ ತನ್ನ ಕಾರಿಗೆ ಹಿಂತಿರುಗಿದಾಗ, ಜಾವೇದ್ ಹಿಂಬದಿಯ ಸೀಟಿನಲ್ಲಿ ನಿಶ್ಚಲವಾಗಿ ಬಿದ್ದಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜಿಟಿಬಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ