ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರಿಗೆ ಒದ್ದ ದೆಹಲಿ ಪೊಲೀಸ್; ಅಧಿಕಾರಿ ಅಮಾನತು

|

Updated on: Mar 08, 2024 | 5:35 PM

Delhi Cop Kicking Men Sitting for Namaz: ಮಸೀದಿ ಹೊರಗೆ ಶುಕ್ರವಾರದ ನಮಾಜ್ ಮಾಡುತ್ತಿದ್ದ ಜನರನ್ನು ಚದುರಿಸುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನಮಾಜ್ ನಿರತರನ್ನು ಕಾಲಿನಿಂದ ಒದ್ದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಇಂದರ್​ಲೋಕ್ ಪ್ರದೇಶದ ಮಸೀದಿಯೊಂದರ ಹೊರಗೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್​ಗಡಿ ಈ ಘಟನೆಯ ವಿಡಿಯೋವೊಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆರೋಪಿತ ಪೊಲೀಸ್​ನನ್ನು ಅಮಾನತುಗೊಳಿಸಲಾಗಿದೆ.

ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರಿಗೆ ಒದ್ದ ದೆಹಲಿ ಪೊಲೀಸ್; ಅಧಿಕಾರಿ ಅಮಾನತು
ನಮಾಜ್ ಮಾಡುತ್ತಿದ್ದವರನ್ನು ಪೊಲೀಸ್ ಕಾಲಿನಿಂದ ಒದೆಯುತ್ತಿರುವ ಚಿತ್ರ
Follow us on

ನವದೆಹಲಿ, ಮಾರ್ಚ್ 8: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರನ್ನು ದೆಹಲಿ ಪೊಲೀಸ್​ವೊಬ್ಬರು ಕಾಲಿನಿಂದ ಒದ್ದ ಘಟನೆ ನಡೆದಿದೆ. ದೆಹಲಿಯ ಇಂದರ್​ಲೋಕ್ ಪ್ರದೇಶದ ಮಸೀದಿಯೊಂದರ ಹೊರಗೆ ಈ ಘಟನೆ (police kicking men offering namaz) ನಡೆದಿದೆ ಎನ್ನಲಾಗಿದೆ. ಪೊಲೀಸನ ಈ ಅನುಚಿತ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದ ಬಳಿಕ ಆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಬಹಳಷ್ಟು ಜನರು ದೆಹಲಿ ಪೊಲೀಸ್ ಅಧಿಕಾರಿಯ ವರ್ತನೆಗೆ ಆಕ್ರೋಶಗೊಂಡಿದ್ದಾರೆ. ನಮಾಜ್ ಮಾಡುತ್ತಿದ್ದ ಆ ಪೊಲೀಸ್ ಅನ್ನು ಅದೇ ಸಮುದಾಯದ ಜನರು ಸುತ್ತುವರಿದು ಪ್ರತಿಭಟಿಸಿದ್ದಾರೆ. ಅದೃಷ್ಟವಶಾತ್ ಬೇರಾವುದೇ ಅವಘಡ ಸಂಭವಿಸಿಲ್ಲ.

ಕಾಂಗ್ರೆಸ್​ನ ರಾಜ್ಯಸಭಾ ಸಂಸದರಾದ ಇಮ್ರಾನ್ ಪ್ರತಾಪ್​ಗಡಿ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಲೀಸ್ ಅಧಿಕಾರಿಯ ಮನಸ್ಸಿನಲ್ಲಿ ಅದೆಷ್ಟು ದ್ವೇಷ ತುಂಬಿರಬೇಡ ಎಂದು ವಿಷಾದಿಸಿದ್ದಾರೆ.

‘ನಮಾಜ್ ಮಾಡುತ್ತಿರುವವರನ್ನು ಒದೆಯುತ್ತಿರುವ ಈ ದೆಹಲಿ ಪೊಲೀಸ್ ಅಧಿಕಾರಿಗೆ ಮಾನವೀಯತೆಯ ಮೂಲಭೂತ ಅಂಶವೂ ಗೊತ್ತಿಲ್ಲ ಎನಿಸುತ್ತದೆ. ಈ ವ್ಯಕ್ತಿಯ ಹೃದಯದಲ್ಲಿ ಅದೆಷ್ಟು ದ್ವೇಷ ತುಂಬಿರಬೇಡ? ಈ ಅಧಿಕಾರಿಯ ವಿರುದ್ಧ ಸೂಕ್ತ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ದೆಹಲಿ ಪೊಲೀಸರಿಗೆ ಮನವಿ ಮಾಡುತ್ತೇನೆ,’ ಎಂದು ಇಮ್ರಾನ್ ಪ್ರತಾಪ್​ಗಡಿ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ

ಕಾಂಗ್ರೆಸ್ ಸಂಸದರು ಮಾಡಿರುವ ಟ್ವೀಟ್…

ಮಾಧ್ಯಮ ವರದಿಗಳ ಪ್ರಕಾರ, ಇಂದರ್​ಲೋಕ್ ಪ್ರದೇಶದ ಮಸೀದಿಯಲ್ಲಿ ಶುಕ್ರವಾರದ ನಮಾಜ್​ನಲ್ಲಿ ಒಳಗೆ ಜನರು ತುಂಬಿಹೋಗಿರುತ್ತಾರೆ. ಹೀಗಾಗಿ ಒಳಗೆ ಜಾಗ ಇಲ್ಲದ ಕಾರಣ ಕೆಲವರು ಹೊರಗೆ ನಮಾಜ್ ಮಾಡಲು ಆರಂಭಿಸಿರುತ್ತಾರೆ. ರಸ್ತೆ ಸಂಚಾರಕ್ಕೆ ಅಡ್ಡಿ ಆಗುತ್ತದೆಂದು ದೆಹಲಿ ಪೊಲೀಸರು ಅಲ್ಲಿಗೆ ಬಂದು ನಮಾಜ್ ನಿರತರನ್ನು ಚದುರಿಸಲು ಯತ್ನಿಸಿದ್ದಾರೆ. ಆಗ ಒಬ್ಬ ಪೊಲೀಸ್ ಅಧಿಕಾರಿ ನಮಾಜ್ ನಿರತರನ್ನು ಕಾಲಿನಿಂದ ಒದ್ದು ದರ್ಪತನ ತೋರಿದರೆನ್ನಲಾಗಿದೆ.

ದೆಹಲಿ ಡಿಸಿಪಿ ಎಂಕೆ ಮೀನಾ ಅವರು ಈ ಘಟನೆಯನ್ನು ತನಿಖೆಗೆ ಒಳಪಡಿಸಿರುವುದಾಗಿ ತಿಳಿಸಿದ್ದಾರೆ. ಅದೇ ವೇಳೆ ಆರೋಪಿತ ಅಧಿಕಾರಿಯನ್ನು ತತ್​ಕ್ಷಣವೇ ಅಮಾನತುಗೊಳಿಸಿ ಶಿಸ್ತುಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ