
ವಿಜಯನಗರಂ, ಆಗಸ್ಟ್ 1: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ (Vizianagaram) ಭೋಗಾಪುರಂನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು (ASR) ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು (Alluri Seetharama Raju Airport) ಉದ್ಘಾಟಿಸಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಉಪಸ್ಥಿತರಿದ್ದರು. ವಿಮಾನ ನಿಲ್ದಾಣ ನಿರ್ಮಿಸಿರುವ ‘ಜಿಎಂಆರ್ ಗ್ರೂಪ್’ (GMR Group) ಪ್ರತಿನಿಧಿಗಳು ಪ್ರಧಾನಮಂತ್ರಿಗೆ ವಿಮಾನ ನಿಲ್ದಾಣದ ಅತ್ಯಾಧುನಿಕ ಸೌಲಭ್ಯಗಳು ಮತ್ತು ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ, ಭೂಕುಸಿತ – ಪ್ರವಾಹಕ್ಕೆ ಮೂವರ ಸಾವು: ಇಡುಕ್ಕಿ ಸೇರಿ ಹಲವು ಜಿಲ್ಲೆಗಳಲ್ಲಿ ಅವಾಂತರ
ಉತ್ತರ ಕರಾವಳಿ ಆಂಧ್ರಪ್ರದೇಶದ ವಾಯು ಸಂಪರ್ಕವನ್ನು (Air Connectivity) ಹೆಚ್ಚಿಸುವುದರ ಜೊತೆಗೆ, ಈ ಪ್ರದೇಶದ ಪ್ರವಾಸೋದ್ಯಮ, ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಈ ವಿಮಾನ ನಿಲ್ದಾಣವು ಪ್ರಮುಖ ಹೆಜ್ಜೆಯಾಗಲಿದೆ.
ಪ್ರಧಾನಿಗಳು ಇದೇ ವೇಳೆ, ವಿಶಾಖಪಟ್ಟಣದಲ್ಲಿ ₹460 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿರುವ ASIP ಸೆಮಿಕಂಡಕ್ಟರ್ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಅಡಿಯಲ್ಲಿ ಅನುಮೋದನೆ ಪಡೆದ ಆಂಧ್ರಪ್ರದೇಶದ ಮೊದಲ ಸೆಮಿಕಂಡಕ್ಟರ್ ಘಟಕ ಇದಾಗಿದ್ದು, ವಾರ್ಷಿಕ 9.6 ಕೋಟಿ ಚಿಪ್ಗಳನ್ನು ತಯಾರಿಸುವ ಗುರಿ ಹೊಂದಿದೆ.
ಕರ್ನೂಲ್ ಮತ್ತು ಅನಂತಪುರ ಭಾಗದ ಸೌರ ಹಾಗೂ ಪವನ ವಿದ್ಯುತ್ ಯೋಜನೆಯನ್ನು ರಾಷ್ಟ್ರೀಯ ಗ್ರಿಡ್ಗೆ ಜೋಡಿಸುವ ₹9,900 ಕೋಟಿಗೂ ಹೆಚ್ಚು ಮೌಲ್ಯದ ಪವರ್ಗ್ರಿಡ್ (POWERGRID) ಪ್ರಸರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದಾರೆ.
ಇದನ್ನೂ ಓದಿ: ‘ನಿಂದನೆಯಿಂದ ಏನೂ ಪರಿಹಾರವಾಗಲ್ಲ’: ನೋಯ್ಡಾ ಮಹಿಳೆಯ ಹೇಳಿಕೆ ವಿವಾದದ ನಡುವೆ ತಡರಾತ್ರಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ
₹1,880 ಕೋಟಿಗೂ ಹೆಚ್ಚು ವೆಚ್ಚದ ವಿವಿಧ 4-ಲೇನ್ ನಿಯಂತ್ರಿತ ಹೆದ್ದಾರಿಗಳು ಮತ್ತು ಸೇತುವೆ ನಿರ್ಮಾಣ ಯೋಜನೆಗಳಿಗೆ ಶಂಕುಸ್ಥಾಪನೆ. ಇದರಿಂದ ವಿಜಯವಾಡ, ವಿಶಾಖಪಟ್ಟಣಂ ಮತ್ತು ಹೈದರಾಬಾದ್ ನಡುವಿನ ಸಂಚಾರ ಸಮಯ ಕಡಿಮೆಯಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:28 pm, Sat, 1 August 26