ಬಂಕೆ ಬಿಹಾರಿ ದೇವಾಲಯದ ಎಲ್ಲಾ ದೇಣಿಗೆ ನೇರವಾಗಿ ಖಜಾನೆಗೆ ಜಮೆಯಾಗಬೇಕು; ಸುಪ್ರೀಂ ಕೋರ್ಟ್ ಆದೇಶ
ವೃಂದಾವನದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಭಕ್ತರು ನೀಡುವ ದೇಣಿಗೆಗಳ ಕುರಿತು ಸುಪ್ರೀಂ ಕೋರ್ಟ್ ಪ್ರಮುಖ ಸೂಚನೆಗಳನ್ನು ನೀಡಿದೆ. ದೇವಸ್ಥಾನದಲ್ಲಿ ದಾನ ಮಾಡುವ ಪ್ರತಿ ಪೈಸೆಯನ್ನು ಮೊದಲು ದೇವರ ಖಜಾನೆಗೆ ಜಮಾ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ದೇಣಿಗೆಗಳನ್ನು ನೇರವಾಗಿ ದೇವಸ್ಥಾನದ ಅಧಿಕೃತ ಆನ್ಲೈನ್ ವೇದಿಕೆಯ ಮೂಲಕ ಅಥವಾ ದೇಣಿಗೆ ಪೆಟ್ಟಿಗೆಗಳ ಮೂಲಕ ದೇವಾಲಯದ ಖಾತೆಗೆ ಜಮಾ ಮಾಡಬೇಕು. ಕಾಣಿಕೆಗಳನ್ನು ಕದಿಯಲು ಬಿಡಲಾಗುವುದಿಲ್ಲ ಎಂದು ಹೇಳಿದೆ.

ನವದೆಹಲಿ, ಆಗಸ್ಟ್ 25: ಉತ್ತರಪ್ರದೇಶದ ವೃಂದಾವನದ ಬಂಕೆ ಬಿಹಾರಿ ದೇವಾಲಯಕ್ಕೆ (Banke Bihari Temple) ಕಾಣಿಕೆ ಹುಂಡಿ ಅಥವಾ ಆನ್ಲೈನ್ ಮೂಲಕ ಬರುವ ಪ್ರತಿಯೊಂದು ಪೈಸೆ ದೇಣಿಗೆಯೂ ನೇರವಾಗಿ ದೇವಾಲಯದ ಖಜಾನೆಗೆ ಜಮೆಯಾಗಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ದೇಣಿಗೆ ಸಂಗ್ರಹದಲ್ಲಿ ಸೇವಕರು ಅಥವಾ ಯಾರೇ ಆದರೂ ಅಡ್ಡಿಪಡಿಸಿದರೆ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ದೇವಾಲಯದ ಸೇವಕರು, ಅರ್ಚಕರು ಅಥವಾ ದೇವಾಲಯಕ್ಕೆ ಸಂಬಂಧಿಸಿದ ಯಾರೂ ದೇಣಿಗೆಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಕ್ತರು ನೀಡುವ ದೇಣಿಗೆಗಳು ದೇವರಿಗಾಗಿ. ದೇವರಿಗೆ ಅವುಗಳ ಮೇಲೆ ಮೊದಲ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ದೇಣಿಗೆಗಳನ್ನು ದೇವಾಲಯದ ಖಜಾನೆಯಲ್ಲಿ ಠೇವಣಿ ಇರಿಸಿದ ನಂತರವೇ ಸಂಬಂಧಿತ ವ್ಯಕ್ತಿಗಳು ತಮ್ಮ ಪಾಲನ್ನು ಪಡೆಯಬಹುದು ಎಂದು ತಿಳಿಸಿದೆ.
ಇದನ್ನೂ ಓದಿ: ಯಮುನಾ ನದಿ ಮಾಲಿನ್ಯ ಪ್ರಕರಣ; ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ 5 ಕೋಟಿ ದಂಡ ಮರುಪಾವತಿಸಲು ಸುಪ್ರೀಂ ಕೋರ್ಟ್ ಆದೇಶ
ವಿಚಾರಣೆ ವೇಳೆ ವಕೀಲ ಎನ್. ಕೆ. ಗೋಸ್ವಾಮಿ ಅವರು ವಾದ ಮಂಡಿಸಿ, ದೇವಾಲಯದ ನಿಧಿಯಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು. ದೇವಾಲಯದ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಉನ್ನತಾಧಿಕಾರ ಸಮಿತಿಯ ಸ್ಥಿತಿ ವರದಿಯನ್ನು ಹಿರಿಯ ವಕೀಲ ಮಣಿಂದರ್ ಸಿಂಗ್ ನ್ಯಾಯಾಲಯಕ್ಕೆ ಸಲ್ಲಿಸಿದರು.
VIDEO | Delhi: On the Supreme Court hearing on the Banke Bihari temple fund management issue, Advocate Tanvi Dubey says, “The hearing of the Banke Bihari temple case was held before the Hon’ble Chief Justice, and there were certain developments as the high-powered committee… pic.twitter.com/PgsEGBsv5y
— Press Trust of India (@PTI_News) August 25, 2026
“ಭಕ್ತರು ಕಾಣಿಕೆ ಪೆಟ್ಟಿಗೆಗೆ ಹಾಕುವ ಹಣವನ್ನು ಅಲ್ಲಿ ನಿಂತಿರುವ ಮೂವರು ವ್ಯಕ್ತಿಗಳು ನೇರವಾಗಿ ತಮ್ಮ ಪಾಲಿಥಿನ್ ಚೀಲಗಳಿಗೆ ತುಂಬಿಕೊಳ್ಳುತ್ತಿರುವ ವಿಡಿಯೋ ಸಾಕ್ಷ್ಯವಿದೆ” ಎಂದು ಫೋಟೋಗಳ ಸಮೇತ ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿತು.
ಇದನ್ನೂ ಓದಿ: 54 ವರ್ಷಗಳ ನಂತರ ಮತ್ತೆ ತೆರೆಯಿತು ಮಥುರಾದ ಬಂಕೆ ಬಿಹಾರಿ ದೇವಾಲಯದ ಖಜಾನೆ
ಹಿರಿಯ ವಕೀಲ ಮಣಿಂದರ್ ಸಿಂಗ್ ಅವರ ವಾದಗಳನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿತು. ದೇವಾಲಯದ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುವ ಉನ್ನತಾಧಿಕಾರ ಸಮಿತಿಯ ಸ್ಥಿತಿಗತಿ ವರದಿಯನ್ನು ಮಣಿಂದರ್ ಸಿಂಗ್ ಮಂಡಿಸಿದರು. ದೇವಾಲಯದ ಫೋಟೋಗಳನ್ನು ಸಹ ಅವರು ನೀಡಿದರು. ಈ ವಿಷಯವು ಗಂಭೀರ ಸಮಸ್ಯೆಗಳನ್ನು ಒಡ್ಡುತ್ತದೆ ಮತ್ತು ತಕ್ಷಣದ ಗಮನದ ಅಗತ್ಯವಿದೆ ಎಂದು ಅವರು ಹೇಳಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಇಡೀ ದೇಣಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ದೇವಾಲಯದ ನಿರ್ವಹಣಾ ಸಮಿತಿಗೆ ನಿರ್ದೇಶನ ನೀಡಿತು. ದೇವಾಲಯದಲ್ಲಿ ಸ್ವೀಕರಿಸಿದ ಎಲ್ಲಾ ದೇಣಿಗೆಗಳಿಗೆ ಸಂಪೂರ್ಣ ಲೆಕ್ಕಪತ್ರ ಇಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಯಾವುದೇ ಅಕ್ರಮಗಳು ಅಥವಾ ದುರುಪಯೋಗವಾಗದಂತೆ ನೋಡಿಕೊಳ್ಳಲು ನ್ಯಾಯಾಲಯವು ಈ ಉದ್ದೇಶಕ್ಕಾಗಿ ಸರಿಯಾದ ವ್ಯವಸ್ಥೆಯನ್ನು ಸ್ಥಾಪಿಸಲು ಸಮಿತಿಗೆ ನಿರ್ದೇಶನ ನೀಡಿತು.
ಸುಪ್ರೀಂ ಕೋರ್ಟ್ ಎಚ್ಚರಿಕೆ:
ದೇವಾಲಯದ ಸೇವಕರು ಮತ್ತು ಇತರ ಸಂಬಂಧಪಟ್ಟ ವ್ಯಕ್ತಿಗಳಿಗೆ ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ. ದೇವಾಲಯದ ಖಜಾನೆಗೆ ದೇಣಿಗೆಗಳು ತಲುಪದಂತೆ ತಡೆಯುವ ಅಥವಾ ಈ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅದು ಹೇಳಿದೆ. ದೇವಾಲಯದ ಆಸ್ತಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರಮುಖ ಸೂಚನೆಗಳನ್ನು ನೀಡಿತು. ದೇವಾಲಯದ ನಿಧಿಯನ್ನು ಬಳಸಿಕೊಂಡು ಆಸ್ತಿಯನ್ನು ಖರೀದಿಸುವ ಪ್ರಸ್ತಾವನೆ ಬಂದರೆ, ಅದನ್ನು ಸುಪ್ರೀಂ ಕೋರ್ಟ್ಗೆ ತಿಳಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




