ಕೊರೊನಾ ಎರಡನೇ ಅಲೆ ಆತಂಕದ ಮಧ್ಯೆ.. ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದ ನ್ಯೂಜಿಲ್ಯಾಂಡ್

|

Updated on: Apr 08, 2021 | 10:41 AM

ಈವರೆಗೆ ನ್ಯೂಜಿಲ್ಯಾಂಡ್ ಸರ್ಕಾರ ತನ್ನ ಬಿಗಿ ಕ್ರಮಗಳ ಮೂಲಕ ಕೊರೊನಾ ಸೋಂಕನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು. ಕಳೆದ 40 ದಿನಗಳಿಂದ ಸಮುದಾಯಗಳಿಗೆ ಕೊರೊನಾ ಸೋಂಕು ಹರಡಿದ ಯಾವುದೇ ಪ್ರಕರಣ ನ್ಯೂಜಿಲ್ಯಾಂಡ್​ನಲ್ಲಿ ಪತ್ತೆಯಾಗಿರಲಿಲ್ಲ. ಆದರೆ, ಈಗ ಸೋಂಕು ಹೆಚ್ಚುತ್ತಿರುವುದರಿಂದ ಏಪ್ರಿಲ್​ 11ರಿಂದ ಏಪ್ರಿಲ್​ 28ರವರೆಗೆ ಭಾರತದಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ.

ಕೊರೊನಾ ಎರಡನೇ ಅಲೆ ಆತಂಕದ ಮಧ್ಯೆ.. ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದ ನ್ಯೂಜಿಲ್ಯಾಂಡ್
ನ್ಯೂಜಿಲೆಂಡ್​ ಪ್ರಧಾನಿ ಜಸಿಂದಾ ಅರ್ಡೆರ್ನ್
Follow us on

ವರ್ಷದ ಹಿಂದೆ ಕೊರೊನಾ ಮೊದಲ ಬಾರಿಗೆ ಕಾಣಿಸಿಕೊಂಡಾಗ ಅದನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಂಡಿದ್ದ ಪುಟ್ಟ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ಈ ಬಾರಿ ಕೊರೊನಾ ಎರಡನೆಯ ಅಲೆಗೆ ತತ್ತರಿಸಿದೆ. ಅಷ್ಟೊಂದು ಭೀಕರವಾಗಿ ಕೊರೊನಾ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ, ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತಾರಕಕ್ಕೇರುವ ಕುರಿತು ಆತಂಕ ಶುರುವಾಗಿದ್ದು, ಅನೇಕ ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿಗೊಳಿಸಿವೆ. ಏತನ್ಮಧ್ಯೆ, ಭಾರತದಲ್ಲಿ ಸೋಂಕು ಹೆಚ್ಚಿರುವ ಕಾರಣ ಭಾರತೀಯ ಪ್ರಯಾಣಿಕರ ಆಗಮನಕ್ಕೆ ನ್ಯೂಜಿಲೆಂಡ್ ನಿರ್ಬಂಧ ಹೇರಿದೆ. ಈ ಬಗ್ಗೆ ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆರ್ನ್ ಆದೇಶ ಹೊರಡಿಸಿದ್ದು, ಭಾರತದಿಂದ ಆಗಮಿಸುವ ಯಾವುದೇ ಪ್ರಯಾಣಿಕರಿಗೂ ನ್ಯೂಜಿಲೆಂಡ್ ಪ್ರವೇಶಿಸಲು ಅನುಮತಿ ಇಲ್ಲ ಎಂದಿದ್ದಾರೆ.

ಏಪ್ರಿಲ್​ 11ರಿಂದ ಏಪ್ರಿಲ್​ 28ರವರೆಗೆ ಭಾರತದಿಂದ ಬರುವವರಿಗೆ ನಿರ್ಬಂಧ ಹೇರಲಾಗಿದ್ದು, ಭಾರತದಲ್ಲಿರುವ ನ್ಯೂಜಿಲೆಂಡ್ ನಾಗರಿಕರಿಗೂ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದಕ್ಷಿಣ ಏಷ್ಯಾ ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು, ನ್ಯೂಜಿಲ್ಯಾಂಡ್​ನಲ್ಲಿ ಪತ್ತೆಯಾಗಿರುವ 23 ಹೊಸ ಕೊರೊನಾ ಪ್ರಕರಣಗಳ ಪೈಕಿ 17 ಸೋಂಕಿತರು ಭಾರತದಿಂದ ಆಗಮಿಸಿದ್ದರು ಎಂಬುದು ಬಹಿರಂಗವಾದ ಬೆನ್ನಲ್ಲೇ ನ್ಯೂಜಿಲ್ಯಾಂಡ್ ಈ ನಿರ್ಧಾರಕ್ಕೆ ಮುಂದಾಗಿದೆ. ಈ ಕುರಿತು ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಅಕ್​ಲ್ಯಾಂಡ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಕೊರೊನಾ ಸೋಂಕಿನ ಹೆಚ್ಚಳದ ಪರಿಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈವರೆಗೆ ನ್ಯೂಜಿಲ್ಯಾಂಡ್ ಸರ್ಕಾರ ತನ್ನ ಬಿಗಿ ಕ್ರಮಗಳ ಮೂಲಕ ಕೊರೊನಾ ಸೋಂಕನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು. ಕಳೆದ 40 ದಿನಗಳಿಂದ ಸಮುದಾಯಗಳಿಗೆ ಕೊರೊನಾ ಸೋಂಕು ಹರಡಿದ ಯಾವುದೇ ಪ್ರಕರಣ ನ್ಯೂಜಿಲ್ಯಾಂಡ್​ನಲ್ಲಿ ಪತ್ತೆಯಾಗಿರಲಿಲ್ಲ. ಹೀಗಾಗಿ ಹೊರದೇಶದಿಂದ ಆಗಮಿಸುವವರ ಮೂಲಕ ದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ನ್ಯೂಜಿಲ್ಯಾಂಡ್ ಈ ಬಿಗು ಕ್ರಮ ಕೈಗೊಂಡಿದೆ.

ಜನವರಿ 16ರಂದು  ನ್ಯೂಜಿಲ್ಯಾಂಡ್ ಪ್ರಧಾನಿ ದೇಶ ಕೊರೊನಾ ಮುಕ್ತವಾಗಿದೆ ಎಂದು ಘೋಷಿಸಿದ್ದರು.  ಇನ್ಮುಂದೆ ಸಾಮಾಜಿಕ ಅಂತರ ಪಾಲಿಸುವ ಅಗತ್ಯವಿಲ್ಲ. ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸೇರಲು ಯಾವುದೇ ನಿರ್ಬಂಧವಿಲ್ಲ ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಅಂದು ಅಧಿಕೃತವಾಗಿ ಘೋಷಿಸಿದ್ದರು. ಆದರೆ ದೇಶದ ಗಡಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ವಿದೇಶಿಯರಿಗೆ ನ್ಯೂಜಿಲ್ಯಾಂಡ್​ನೊಳಗೆ ಪ್ರವೇಶಕ್ಕೆ ಅವಕಾಶ ಒದಗಿಸಿಲ್ಲ ಎಂದು ಮಿರರ್ ನೌ ವರದಿ ಮಾಡಿತ್ತು. ಇದಕ್ಕೂ ಮೊದಲು ಸಹ ಕೆಲ ಬಾರಿ ನ್ಯೂಜಿಲ್ಯಾಂಡ್ ಕೊರೊನಾ ಮುಕ್ತ ದೇಶವಾಗಿ ಗುರುತಿಸಿಕೊಂಡಿತ್ತು.

ಕರ್ನಾಟಕದಲ್ಲಿ ಲಾಕ್​ಡೌನ್​ ಭೀತಿ: ಗುಳೆ ಹೊರಟ ಕಾರ್ಮಿಕರು
ದೇಶದೆಲ್ಲೆಡೆ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಬಹುತೇಕ ಎಲ್ಲಾ ರಾಜ್ಯಗಳು ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿವೆ. ದೆಹಲಿ, ಪುಣೆ ಸೇರಿದಂತೆ ಅನೇಕ ಕಡೆಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ, ವಾರಾಂತ್ಯದ ಲಾಕ್​ಡೌನ್​ನಂತಹ ಕ್ರಮಗಳು ಜಾರಿಯಾಗಿವೆ. ಕರ್ನಾಟಕದಲ್ಲೂ ಇಂತಹದ್ದೇ ಕಠಿಣ ನಿಯಮಾವಳಿಗಳು ಜಾರಿಯಾಗಬಹುದು ಎಂಬ ವದಂತಿ ಹಬ್ಬಿದ್ದು, ಇದರಿಂದ ಭಯಭೀತರಾದ ಹೊರರಾಜ್ಯದ ಜನರು ಬೆಂಗಳೂರು ತೊರೆದು ತವರು ರಾಜ್ಯಗಳಿಗೆ ವಾಪಾಸ್ಸಾಗುತ್ತಿದ್ದಾರೆ.

ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ಸರ್ಕಾರ ದಿನಕ್ಕೊಂದು ಕಾನೂನು ರೂಪಿಸುತ್ತಿದೆ. ಇನ್ನೊಂದೆಡೆ ಸಾರಿಗೆ ನೌಕರರ ಮುಷ್ಕರವೂ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ ಲಾಕ್​ಡೌನ್ ಆಗುವುದು ಖಚಿತ ಎಂಬ ವದಂತಿ ಹಬ್ಬಿದೆ. ಕಳೆದ ವರ್ಷದ ಲಾಕ್​ಡೌನ್​ ಸಂದರ್ಭದಲ್ಲಾಗಲೇ ಕಷ್ಟ ಅನುಭವಿಸಿರುವ ಜನರು ಈಗ ಮತ್ತೆ ಲಾಕ್​ಡೌನ್​ ಆಗಬಹುದೆಂದು ಹೆದರಿ ತಮ್ಮ ತವರಿಗೆ ಮರಳುತ್ತಿದ್ದಾರೆ.

ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ, ಬಿಹಾರ, ಕೋಲ್ಕತ್ತಾ ರಾಜ್ಯಗಳಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಕೂಲಿ ಕಾರ್ಮಿಕರು ಸಿಕ್ಕ ಸಿಕ್ಕ ಬಸ್, ರೈಲುಗಳನ್ನೇರಿ ಹೊರಡುತ್ತಿದ್ದಾರೆ. ಈಗಾಗಲೇ ಉತ್ತರಪ್ರದೇಶ, ರಾಜಸ್ಥಾನ, ಕೊಲ್ಕತ್ತಾ ಭಾಗಕ್ಕೆ ಹೊರಡುವ ರೈಲುಗಳು ತುಂಬಿ ತುಳುಕಾಡುತ್ತಿದ್ದು, ಮತ್ತೆ ಲಾಕ್​ಡೌನ್ ಮಾಡುವ ಮೊದಲು ಊರು ಸೇರಿಕೊಳ್ಳುತ್ತೇವೆ ಎಂದು ಹೇಳುತ್ತಾ ಗುಳೆ ಹೊರಟಿದ್ದಾರೆ.

Published On - 10:38 am, Thu, 8 April 21