ತಿರುಪತಿ ದೇವಸ್ಥಾನದಲ್ಲಿ ಮುತ್ತು ಕೊಟ್ಟು ಫೋಟೋಶೂಟ್; ವಿವಾದಕ್ಕೆ ಕ್ಷಮೆ ಕೇಳಿದ ನವ ದಂಪತಿ
ತಿರುಮಲ ತಿರುಪತಿ ದೇವಸ್ಥಾನದ ಬಳಿಯ ನಿರ್ಬಂಧಿತ ಪ್ರದೇಶಗಳಲ್ಲಿ ಫೋಟೋಶೂಟ್ ಮಾಡಿದ ಕಾರಣಕ್ಕೆ ನವವಿವಾಹಿತ ದಂಪತಿ ವಿವಾದಕ್ಕೆ ಕಾರಣರಾಗಿದ್ದಾರೆ. ಹೊಸದಾಗಿ ಮದುವೆಯಾದ ದಂಪತಿ ಮುತ್ತು ಕೊಟ್ಟು ಫೋಟೋಗೆ ಪೋಸ್ ನೀಡಿದ್ದರು. ಇದೇನೂ ವಿಶೇಷವಲ್ಲ. ಆದರೆ, ಈ ಫೋಟೋ ತೆಗೆಸಿಕೊಂಡಿದ್ದು ತಿರುಪತಿ ದೇವಸ್ಥಾನದ ಒಳಗೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಆ ನವವಿವಾಹಿತ ದಂಪತಿ ಕ್ಷಮೆ ಯಾಚಿಸಿದ್ದಾರೆ.

ತಿರುಮಲ, ಜನವರಿ 30: ತಮಿಳುನಾಡಿನ ತಿರುವಣ್ಣಾಮಲೈನ ನವವಿವಾಹಿತ ದಂಪತಿ ತಿರುಮಲ ತಿರುಪತಿ ದೇವಸ್ಥಾನದ (TTD) ಆವರಣದಲ್ಲಿ ಫೋಟೋಶೂಟ್ ನಡೆಸಿದ್ದರು. ಆಗಷ್ಟೇ ವಿವಾಹವಾಗಿದ್ದ ದಂಪತಿ ಈ ವಿವಾದಕ್ಕೆ ಕ್ಷಮೆ ಯಾಚಿಸಿದ್ದಾರೆ. ತಿರುಮಲ ಮತ್ತು ಗಾಯತ್ರಿ ಎಂಬ ದಂಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ತಿರುಮಲದ ಕಲ್ಯಾಣ ವೇದಿಕೆಯಲ್ಲಿ ವಿವಾಹವಾಗಿದ್ದರು. ಇದಾದ ನಂತರ, ಆ ದಂಪತಿ ನಿಯಮಗಳನ್ನು ಉಲ್ಲಂಘಿಸಿ ಗೊಲ್ಲಮಂಟಪದಲ್ಲಿ ಫೋಟೋಗಳಿಗೆ ಪೋಸ್ ನೀಡಿದರು.
ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಬಳಿ ನವವಿವಾಹಿತ ದಂಪತಿಗಳನ್ನು ಒಳಗೊಂಡ ಫೋಟೋಶೂಟ್ ಯಾತ್ರಿಕರು ಮತ್ತು ಭಕ್ತರಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತ್ತು. ಈ ಘಟನೆಯು ಮತ್ತೊಮ್ಮೆ ದೇವಾಲಯದ ನಿಯಮಗಳ ಉಲ್ಲಂಘನೆ ಮತ್ತು ಪವಿತ್ರ ಪಟ್ಟಣವಾದ ತಿರುಮಲದಲ್ಲಿ ಭದ್ರತಾ ಲೋಪಗಳ ಬಗ್ಗೆ ಗಮನ ಸೆಳೆದಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನದ ಬುಕಿಂಗ್ನಲ್ಲಿ ನಾಳೆಯಿಂದಲೇ ಹೊಸ ಬದಲಾವಣೆ
ದೇವಾಲಯದ ಒಳಗೆ ಫೋಟೋಶೂಟ್ ನಿಷೇಧದ ಬಗ್ಗೆ ತಿಳಿಯದೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಅವರು ಕ್ಷಮೆ ಯಾಚಿಸಿದ್ದಾರೆ. ನಿಯಮಗಳನ್ನು ತಿಳಿಸಿದ ನಂತರ ಫೋಟೋಗಳನ್ನು ಡಿಲೀಟ್ ಕೂಡ ಮಾಡಿದ್ದಾರೆ. ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ, ದಂಪತಿಗಳು ಶ್ರೀ ವಾರಿ ಸೇವೆ (ವೆಂಕಟೇಶ್ವರನಿಗೆ ಸೇವೆ) ಮೂಲಕ ಸೇವೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಭಕ್ತಿ ಸೇವೆಯ ಮೂಲಕ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Tirupati Security Breach: ತಿರುಪತಿ ದೇಗುಲದಲ್ಲಿ ಭಾರಿ ಭದ್ರತಾ ಲೋಪ, ಗೋಪುರ ಏರಿ ಕುಡುಕನಿಂದ ಅವಾಂತರ
ಗೊಲ್ಲ ಮಂಟಪದಿಂದ ಅಖಿಲಾಂಡಂ ವಲಯದವರೆಗಿನ ಸೂಕ್ಷ್ಮ ಪ್ರದೇಶಗಳಲ್ಲಿ ದಂಪತಿ ಫೋಟೋಗೆ ಪೋಸ್ ನೀಡಿದರು. ಈ ಸ್ಥಳಗಳು ವೃತ್ತಿಪರ ಫೋಟೋಶೂಟ್, ವೀಡಿಯೊಗ್ರಫಿ ಮತ್ತು ಸಾಮಾಜಿಕ ಮಾಧ್ಯಮ ರೀಲ್ ರೆಕಾರ್ಡ್ ಮಾಡುವುದನ್ನು ಸ್ಪಷ್ಟವಾಗಿ ನಿಷೇಧಿಸುವ ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಬರುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
