ಮುಂದಿನ ಸಿಎಂ ನಿಮ್ಮೆದುರೇ ಕುಳಿತಿದ್ದಾರೆ; ಬಿಹಾರ ಚುನಾವಣೆಗೂ ಮುನ್ನ ಕುತೂಹಲ ಕೆರಳಿಸಿದ ತೇಜ್ ಪ್ರತಾಪ್ ಹೇಳಿಕೆ

ಈ ವರ್ಷ ನಡೆಯಲಿರುವ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಆರ್‌ಜೆಡಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುನ್ನ ತೇಜ್ ಪ್ರತಾಪ್ ಯಾದವ್ ನೀಡಿರುವ "ಮುಂದಿನ ಮುಖ್ಯಮಂತ್ರಿ ನಿಮ್ಮ ಮುಂದೆಯೇ ಕುಳಿತಿದ್ದಾರೆ" ಎಂಬ ದಿಟ್ಟ ವೀಡಿಯೊ ಹೇಳಿಕೆಯು ಅವರ ರಾಜಕೀಯ ಉದ್ದೇಶ ಮತ್ತು ಮುಂದಿನ ನಾಯಕತ್ವದ ಪಾತ್ರದ ಬಗ್ಗೆ ಊಹಾಪೋಹಗಳಿಗೆ ನಾಂದಿ ಹಾಡಿದೆ.

ಮುಂದಿನ ಸಿಎಂ ನಿಮ್ಮೆದುರೇ ಕುಳಿತಿದ್ದಾರೆ; ಬಿಹಾರ ಚುನಾವಣೆಗೂ ಮುನ್ನ ಕುತೂಹಲ ಕೆರಳಿಸಿದ ತೇಜ್ ಪ್ರತಾಪ್ ಹೇಳಿಕೆ
Tej Pratap

Updated on: Jan 18, 2025 | 3:10 PM

ಪಾಟ್ನಾ: 2025ರ ಬಿಹಾರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ (ರಾಷ್ಟ್ರೀಯ ಜನತಾದಳ) ಸಜ್ಜಾಗುತ್ತಿದೆ. ಈ ಪಕ್ಷವು ಇಂದು ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸುತ್ತಿದೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದ್ದು, ಆರ್​ಜೆಡಿ ನಾಯಕರಾದ ತೇಜಸ್ವಿ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಆದರೆ, ಅದಕ್ಕೂ ಮುನ್ನ ಲಾಲು ಪ್ರಸಾದ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಹಂಚಿಕೊಂಡಿರುವ ವಿಡಿಯೋವೊಂದು ಭಾರೀ ಕುತೂಹಲ ಕೆರಳಿಸಿದೆ.

ಬಿಹಾರ ಚುನಾವಣೆ ಸಿದ್ಧತೆಗಳ ನಡುವೆ ಮಾಜಿ ಸಿಎಂ ಲಾಲು ಯಾದವ್ ಅವರ ಹಿರಿಯ ಮಗ ಮತ್ತು ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೊದಲ್ಲಿ, ತೇಜ್ ಪ್ರತಾಪ್ ಸೋಫಾದ ಮೇಲೆ ಕುಳಿತು “ನಾವು ಶೀಘ್ರದಲ್ಲೇ ಸರ್ಕಾರವನ್ನು ಉರುಳಿಸಲಿದ್ದೇವೆ. ಹಾಗೇ, ಮುಂದಿನ ಮುಖ್ಯಮಂತ್ರಿ ನಿಮ್ಮ ಮುಂದೆಯೇ ಕುಳಿತಿದ್ದಾರೆ” ಎಂಬ ಹೇಳಿಕೆ ನೀಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಈ ದಿಟ್ಟ ಹೇಳಿಕೆಯು ಅವರ ಉದ್ದೇಶಗಳು ಮತ್ತು ಸಂಭಾವ್ಯ ರಾಜಕೀಯ ಪರಿಣಾಮಗಳ ಬಗ್ಗೆ ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿದೆ.


ಇದನ್ನೂ ಓದಿ: ನಿಮಗೆ ಬಾಗಿಲು ತೆರೆದಿದೆ ಎಂದ ಲಾಲು ಯಾದವ್​ಗೆ ನಿತೀಶ್ ಕುಮಾರ್‌ ಹೇಳಿದ್ದೇನು?

ಆರ್‌ಜೆಡಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಂಸದರು, ಶಾಸಕರು ಮತ್ತು ಪಕ್ಷದ ಇತರ ಅಧಿಕಾರಿಗಳು ಭಾಗವಹಿಸಲಿದ್ದು, ಲಾಲು ಯಾದವ್ ಸಭೆಯ ಸಮಯದಲ್ಲಿ ತಮ್ಮ ಕಿರಿಯ ಮಗ ತೇಜಸ್ವಿ ಯಾದವ್‌ಗೆ ಮಹತ್ವದ ಪಾತ್ರವನ್ನು ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೂ ಕೆಲವು ಗಂಟೆಗಳ ಮೊದಲು, ತೇಜ್ ಪ್ರತಾಪ್ ಯಾದವ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರು ನಾಯಕತ್ವದ ಬಗ್ಗೆ ಸಂದೇಶವನ್ನು ಹಂಚಿಕೊಂಡಿದ್ದಾರೆ. “ನಾಯಕತ್ವವು ಒಂದು ಸ್ಥಾನ ಮಾತ್ರವಲ್ಲ; ಅದು ಕ್ರಿಯೆ ಮತ್ತು ಉದಾಹರಣೆಯಾಗಿದೆ. ನೀವು ಪ್ರತಿದಿನ ಪ್ರಯತ್ನವನ್ನು ಮಾಡಿದಆಗ ಮಾತ್ರ ಪರಿವರ್ತನೆ ಸಂಭವಿಸುತ್ತದೆ, ಬದಲಾವಣೆ ಸಂಭವಿಸುತ್ತದೆ. ಇನ್ನಷ್ಟು ಕನಸು ಕಾಣಿರಿ, ಇನ್ನಷ್ಟು ಕಲಿಯಿರಿ, ಇನ್ನಷ್ಟು ಸಾಧಿಸಿ” ಎಂದು ತೇಜ್ ಪ್ರತಾಪ್ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ