ಭಾರತ, ಪಾಕ್ ನಡುವೆ ಉದ್ವಿಗ್ನ: ದೇಶದ 18 ವಿಮಾನ ನಿಲ್ದಾಣಗಳು ಬಂದ್, 200 ವಿಮಾನಗಳು ರದ್ದು!
Operation Sindoor: ಪೆಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಭಾರತ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದೊಳಗೆ ನುಗ್ಗಿ 9 ಕಡೆಗಳಲ್ಲಿ ಭಾರತೀಯ ಸೇನೆ ಏರ್ಸ್ಟ್ರೈಕ್ ಮಾಡಿದ್ದು, ಉಗ್ರರ ನೆಲೆಗಳನ್ನು ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದ್ದು, ಇದೀಗ ಭಾರತ-ಪಾಕ್ ಯುದ್ಧದ ಕಾರ್ಮೋಡ ಆವರಿಸಿದೆ. ಯಾವ ಸಂದರ್ಭದಲ್ಲಿ ಏನಾಗಲಿದೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಲವು ರಾಜ್ಯಗಳಲ್ಲಿ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹಾಗಾದ್ರೆ, ಯಾವೆಲ್ಲ ವಿಮಾನ ನಿಲ್ದಾಣಗಳು ಬಂದ್? ಎಷ್ಟು ವಿಮಾನಗಳು ಹಾರಾಟ ನಿಲ್ಲಿಸಿವೆ ಎನ್ನುವ ವಿವರ ಇಲ್ಲಿದೆ.

ನವದೆಹಲಿ, (ಮೇ 07): ಪಾಕಿಸ್ತಾನದ (Pakistan) ಉಗ್ರರ ಅಡಗುತಾಣವನ್ನು ಗುರಿಯಾಗಿಸಿ ಭಾರತದ ಸೇನೆ (Indian Army) ದಾಳಿ ಮೇ 7ರ ಮಧ್ಯರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಭಾರತೀಯ ಸೇನೆ ಏರ್ಸ್ಟ್ರೈಕ್ ಮಾಡಿದ್ದು, ಪೆಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಸೇನೆ ಪ್ರತೀಕಾರದ ಮಾತುಗಳೊಂದಿಗೆ ದುಸ್ಸಾಹಸಕ್ಕೆ ಮುಂದಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭಾರತದ ವಿವಿಧ ರಾಜ್ಯಗಳ ವಿಮಾನ ನಿಲ್ದಾಣಗಳನ್ನು(Airports) ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹೀಗಾಗಿ ಸುಮಾರು ಎರಡು ಸಾವಿರ ವಿಮಾನ (Flights) ಸೇವೆ ರದ್ದಾಗಿದೆ.
ಆಪರೇಷನ್ ಸಿಂಧೂರಕ್ಕೆ ತಿರುಗೇಟು ನೀಡುವ ತವಕದಲ್ಲಿರುವ ಪಾಕ್ ಸಂಭವಿತ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ದೇಶದ 18 ವಿಮಾನಗಳ ಹಾರಾಟ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೂಲಗಳ ಪ್ರಕಾರ, ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಕನಿಷ್ಠ 18 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಶ್ರೀನಗರ, ಲೇಹ್, ಜಮ್ಮು, ಅಮೃತಸರ್, ಪಠಾಣ್ಕೋಟ್, ಚಂಡೀಗಢ, ಜೋಧ್ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್ನಗರ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಈ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಸೇವೆ ರದ್ದಾಗಿದೆ.
ಇದನ್ನೂ ಓದಿ: ಭಾರತ-ಪಾಕಿಸ್ತಾನ ಉದ್ವಿಗ್ನತೆ; ಅಮೃತಸರ ವಿಮಾನ ನಿಲ್ದಾಣ, ಕರ್ತಾರ್ಪುರ ಕಾರಿಡಾರ್ ಬಂದ್
ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ಜೆಟ್, ಏರ್ ಇಂಡಿಯಾ ಎಕ್ಸ್ಪ್ರೆಸ್, ಆಕಾಶ ಏರ್ ಮತ್ತು ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ರದ್ದುಗೊಳಿಸಿವೆ. ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಮೇ 10ರ ಬೆಳಗಿನ ಜಾವದವರೆಗೆ ಅಮೃತಸರ್ ಮತ್ತು ಶ್ರೀನಗರ ಸೇರಿದಂತೆ ವಿವಿಧ ದೇಶಿಯ ವಿಮಾನ ನಿಲ್ದಾಣಗಳಿಂದ 165ಕ್ಕೂ ಹೆಚ್ಚು ಫ್ಲೈಟ್ಗಳನ್ನು ರದ್ದುಗೊಳಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ಮಾಹಿತಿ ನೀಡಿದೆ.
ಇಂಡಿಗೋ ಸುಮಾರು 160 ವಿಮಾನಗಳ ಸೇವೆಯನ್ನು ರದ್ದುಗೊಳಿಸಿದೆ. ದೇಶದ ಅತಿದೊಡ್ಡ ಮತ್ತು ಜನನಿಬಿಡ ವಿಮಾನ ನಿಲ್ದಾಣವಾದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ತೆರಳುವ ಕನಿಷ್ಠ 35 ವಿಮಾನಗಳನ್ನು 12 ಗಂಟೆಯಿಂದ ರದ್ದುಗೊಳಿಸಲಾಗಿದೆ.
ಬುಕ್ ಮಾಡಿದ್ದವರಿಗೆ ಹಣ ಮರುಪಾವತಿ
ವಿಮಾನಯಾನ ಅಧಿಕಾರಿಗಳು ಈ ವಿಮಾನ ನಿಲ್ದಾಣಗಳನ್ನು ಮುಚ್ಚುವ ಕುರಿತು ಅಧಿಸೂಚನೆ ಹೊರಡಿಸಿದ ನಂತರ, ಮೇ 10ರವರೆಗೆ ಜಮ್ಮು, ಶ್ರೀನಗರ, ಲೇಹ್, ಜೋಧ್ಪುರ, ಅಮೃತಸರ್, ಭುಜ್, ಧರ್ಮಶಾಲಾ, ಜಾಮ್ನಗರ, ಚಂಡೀಗಢ ಮತ್ತು ರಾಜ್ಕೋಟ್ಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಏರ್ ಇಂಡಿಯಾ ವಿಮಾನಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದು, ಈಗಾಗಲೇ ಬುಕ್ಕಿಂಗ್ ಮಾಡಿರುವ ಪ್ರಯಾಣಿಕರಿಗೆ ಒಂದು ಬಾರಿ ವಿನಾಯಿತಿ ಅಥವಾ ರದ್ದತಿಗೆ ಪೂರ್ಣ ಪ್ರಮಾಣದ ಹಣ ಮರುಪಾವತಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ