
ಪಟಿಯಾಲ, ಏಪ್ರಿಲ್ 28: ಪಂಜಾಬ್ನ ಪಟಿಯಾಲದಲ್ಲಿ ಸೋಮವಾರ ತಡರಾತ್ರಿ ಸ್ಫೋಟ(Blast) ಸಂಭವಿಸಿದ್ದು ರೈಲ್ವೆ ಹಳಿ ಹಾನಿಗೊಳಗಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಂಭು-ಅಂಬಾಲ ರೈಲು ಹಳಿಯಲ್ಲಿ ಸ್ಫೋಟದ ಸ್ಥಳದ ಬಳಿ ಒಂದು ಮೃತದೇಹ ಪತ್ತೆಯಾಗಿದ್ದು, ತನಿಖೆ ಆರಂಭಿಸಲಾಗಿದೆ. ಆದರೆ, ಸ್ಫೋಟಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಪೊಲೀಸರ ಪ್ರಕಾರ, ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಸರಕು ರೈಲುಗಳಿಗೆ ಮೀಸಲಾಗಿರುವ ರೈಲ್ವೆ ಹಳಿಯ ಬಳಿ ಸ್ಫೋಟ ಸಂಭವಿಸಿದೆ.
ಸ್ಫೋಟದ ನಂತರ, ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿಪಿ) ಮತ್ತು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ತಂಡಗಳು ಕೂಡ ತನಿಖೆಗಾಗಿ ಸ್ಥಳಕ್ಕೆ ತಲುಪಿದವು. ವಿಧಿವಿಜ್ಞಾನ ತಜ್ಞರ ತಂಡವೂ ಮಾದರಿಗಳನ್ನು ಸಂಗ್ರಹಿಸಲು ಅಲ್ಲಿಗೆ ತಲುಪಿತ್ತು.
ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ ಎಂದು ಪಟಿಯಾಲ ಎಸ್ಎಸ್ಪಿ ವರುಣ್ ಶರ್ಮಾ ಹೇಳಿದ್ದಾರೆ, ಹಳಿಗಳ ಬಳಿ ಪತ್ತೆಯಾದ ಶವದ ಬಗ್ಗೆ ಕೇಳಿದಾಗ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು, ಆದರೆ ಶವವು ಛಿದ್ರಗೊಂಡ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಮತ್ತಷ್ಟು ಓದಿ: ಕೇರಳದ ತ್ರಿಶೂರ್ನಲ್ಲಿ ಪಟಾಕಿಗಳ ಸ್ಫೋಟ; 10 ಜನ ಸಾವು, ಹಲವರಿಗೆ ಗಾಯ
ಜನವರಿಯ ಆರಂಭದಲ್ಲಿ, ಪಂಜಾಬ್ನ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್ನಲ್ಲಿರುವ ಸರಕು ಸಾಗಣೆ ಕಾರಿಡಾರ್ ಕೂಡ ಆಗಿರುವ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆ ಜನವರಿ 24 ರಂದು, ಗಣರಾಜ್ಯೋತ್ಸವಕ್ಕೆ ಕೇವಲ ಎರಡು ದಿನಗಳ ಮೊದಲು ನಡೆದಿದ್ದು, ಲೋಕೋ ಪೈಲಟ್ ಗಾಯಗೊಂಡಿದ್ದರು.
ಗಾಯಗೊಂಡ ಲೋಕೋ ಪೈಲಟ್ ಅನ್ನು ಅನಿಲ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಹಾನಿಗೊಳಗಾದ ರೈಲು ಫುಟ್ಪ್ಲೇಟ್ ತಪಾಸಣೆಯಲ್ಲಿದ್ದು, ಗೋಬಿಂದ್ಗಢದಿಂದ ಸಿರ್ಹಿಂದ್ ಕಡೆಗೆ ಬರುತ್ತಿತ್ತು ಎಂದು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ದಾಳಿಯನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ನಡೆಸಿದೆ ಎನ್ನುವ ಮಾಹಿತಿ ಹರಿದಾಡಿತ್ತು. ಆದರೆ, ಪೊಲೀಸರು ಈ ಆರೋಪಗಳನ್ನು ಪರಿಶೀಲಿಸಲು ನಿರಾಕರಿಸಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದರು. ಲೋಕೋ ಪೈಲಟ್ ಅವರ ಕೆನ್ನೆಗೆ ಸಣ್ಣ ಗಾಯವಾಗಿದೆ. ಅವರು ಅಪಾಯದಿಂದ ಪಾರಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 am, Tue, 28 April 26